ಬೆಂಗಳೂರು: ಕಾಂಗ್ರೆ್ಸ್ಸೇತರ ಸರ್ಕಾರಗಳು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಕಡೆಗಣನೆಗೆ ಒಳಗಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಯಾವ ಸ್ಥಿತಿಯಲ್ಲಿದೆ. ಈ ವ್ಯವಸ್ಥೆಯನ್ನು ಕಾಂಗ್ರೆಸ್ ನಾಯಕರು ಹೇಗೆ ಬಳಸಿಕೊಳ್ಳಬಹುದು, ಈ ವ್ಯವಸ್ಥೆಯಿಂದ ಜನಸಾಮಾನ್ಯರಿಗೆ ಸಿಗುವ ಹಕ್ಕು, ಸವಲತ್ತುಗಳನ್ನು ಅವರಿಗೆ ತಿಳಿಸುವುದು, ಇದನ್ನು ಜನರಿಗೆ ತಲುಪಿಸುವಲ್ಲಿ ಸರ್ಕಾರ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಹಾಗೂ ಜನರ ಸಮಸ್ಯೆಗಳು ಅಥವಾ ಅಭಿಪ್ರಾಯ ಏನು ಎಂದು ಚರ್ಚೆ ಮಾಡಲು ಈ ಸಭೆ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಹರಿಕಾರ ಅಬ್ದುಲ್ ನಜೀರ್ ಅವರು. ಅವರಿಂದ ಪ್ರೇರಣೆ ಪಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ನಂತರ ಈ ವಿಚಾರವಾಗಿ ಸಂವಿಧಾನಿಕ ತಿದ್ದುಪಡಿ ತಂದರು. ಕೆಲವು ಭಾಗಗಳಲ್ಲಿ ಗಣನೀಯ ಸುಧಾರಣೆ ಕಂಡರೆ ಮತ್ತೆ ಕಲವು ರಾಜ್ಯಗಳಲ್ಲಿ ಅಲ್ಪ ಪ್ರಮಾಣದ ಸುಧಾರಣೆ ಕಂಡಿದೆ. 1993 ಹಾಗೂ ಅದಕ್ಕೂ ಮುನ್ನ ಪಂಚಾಯತ್ ರಾಜ್ ವ್ಯವಸ್ಥೆಗೂ, ಈಗಿನ ವ್ಯವಸ್ಥೆಗೂ ಭೂಮಿ ಆಕಾಶದೆತ್ತರದಷ್ಟು ವ್ಯತ್ಯಾಸವಿದೆ. ರಾಜೀವ್ ಗಾಂಧಿ ಅವರು ಸಂವಿಧಾನ ತಿದ್ದುಪಡಿ ತರುವ ಮೂಲಕ ಈ ವ್ಯವಸ್ಥೆಗೆ ಸಂವಿಧಾನಿಕ ಪಾವಿತ್ರ್ಯತೆ ತಂದುಕೊಟ್ಟರು. ಹೀಗಾಗಿ ಈ ವ್ಯವಸ್ಥೆಯನ್ನು ಕುಗ್ಗಿಸಬಹುದೇ ಹೊರತು ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಈಗಲೂ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಿಗದಿತ ಸಮಯಕ್ಕೆ ನಡೆಸುತ್ತಿಲ್ಲ. ಆದರೆ ನ್ಯಾಯಾಂಗ, ಶಾಸಕಾಂಗಗಳು ಈ ಚುನಾವಣೆಯನ್ನು ನಡೆಸಲು ಆಗ್ರಹಿಸಿ ಸರ್ಕಾರವನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡುತ್ತಿವೆ. ಪಂಚಾಯತ್ ರಾಜ್ ವ್ಯವಸ್ಥೆ ಮೂಲಕ ದೇಶ ಅತಿದೊಡ್ಡ ಸಾಧನೆಯೊಂದನ್ನು ಮಾಡಿದೆ. ಅದೇನೆಂದರೆ, ಈ ವ್ಯವಸ್ಥೆಯಲ್ಲಿ 40 ಲಕ್ಷ ಮಹಿಳೆಯರು ಪಂಚಾಯತ್ ನಲ್ಲಿ ಜನಪ್ರತಿನಿಧಿಗಳಾಗಿದ್ದಾರೆ ಎಂದು ವಿವರಿಸಿದರು.
ಮಾಧ್ಯಮಗೋಷ್ಟಿಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಸಿ. ನಾರಾಯಣ ಸ್ವಾಮಿ ಅವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಹಾವೇರಿಯ ಈ ಸ್ಥಳದಲ್ಲಿ ಕೌತುಕ: ಇಬ್ಬರು ಬಸವಣ್ಣರೇ ಇಲ್ಲಿನ ಪೀಠಾಧಿಪತಿಗಳು