ಬೆಂಗಳೂರು: ನ್ಯಾಯಾಲಯದ ಅಭಿಪ್ರಾಯದಂತೆ ರಾಜ್ಯದಲ್ಲಿ ಸರ್ಕಾರ ಲಾಕ್ಡೌನ್ ಮಾಡಿದೆ. ಆದರೆ, ಈ ಸಮಯದಲ್ಲಿ ಬಡವರಿಗೆ, ಕಾರ್ಮಿಕರಿಗೆ ತೊಂದರೆ ಆಗಬಾರದು ಎಂದು ಮಾಜಿ ಸಂಸದ ಉಗ್ರಪ್ಪ ಆಗ್ರಹಿಸಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಲಾಕ್ಡೌನ್ಗೆ ಕಾಂಗ್ರೆಸ್ನ ವಿರೋಧವಿಲ್ಲ. ನಮ್ಮ ಸಹಕಾರವಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಒಂದಷ್ಟು ಸಲಹೆ ಕೊಡಲಿದೆ. ಲಾಕ್ಡೌನ್ ಅವಧಿಯಲ್ಲಿ ಇಂದಿರಾ ಕ್ಯಾಂಟಿನ್ ಮೂಲಕ ಬಡವರಿಗೆ ಉಚಿತ ಆಹಾರ ವಿತರಣೆ ಮಾಡಬೇಕು. ಅಗತ್ಯವಿರುವ ಬಡವರಿಗೆ, ಬಿಪಿಎಲ್ ಕಾಡ್೯ ಇರೋರಿಗೆ ಕನಿಷ್ಠ ಐದು ಸಾವಿರ ಸಹಾಯಧನವನ್ನು ಸರ್ಕಾರ ಕೊಡಬೇಕು. ರಾಜ್ಯ ಜನರಿಗೆ ಉಚಿತವಾಗಿ ವ್ಯಾಕ್ಸಿನ್ ಕೊಡಬೇಕು. ಈ ಕೆಲಸವನ್ನ ತ್ವರಿತವಾಗಿ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮುಖ್ಯವಾಗಿ ಈ ಅವಧಿಯಲ್ಲಿ ಅವಶ್ಯಕತೆ ಇರುವ ಕೋವಿಡ್ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು. ರೈತರಿಗೆ ತೊಂದರೆ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ರೈತರು ಬೆಳೆದ ಎಲ್ಲ ರೀತಿಯ ಬೆಳೆಗಳನ್ನು ಸರ್ಕಾರ ಖರೀದಿಸಬೇಕು. ಮೂರನೇ ಅಲೆ ಬರುತ್ತೆ ಅಂತ ಹೇಳ್ತಾಯಿದ್ದಾರೆ, ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಕೋವಿಡ್ ಆಸ್ಪತ್ರೆ ತೆರೆಯಬೇಕು. ನಗರಪಾಲಿಕೆ ಇರೋ ಕಡೆ 1 ರಿಂದ 10 ಸಾವಿರ ಬೆಡ್ ರೆಡಿ ಮಾಡಬೇಕು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಜನರಿಗೆ ತೊಂದರೆ ಆಗದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ ಪ್ರತಿಪಕ್ಷವಾಗಿ ನಾವು ಸುಮ್ಮನೆ ಕೂರಲ್ಲ ಎಂದು ಎಚ್ಚರಿಸಿದರು.
ಓದಿ: ರಾಜ್ಯದಲ್ಲಿ ಮೇ.10 ರಿಂದ 24ರವರೆಗೆ ಸಂಪೂರ್ಣ ಲಾಕ್ಡೌನ್: ಬಿಎಸ್ವೈ ಮಹತ್ವದ ಘೋಷಣೆ