ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಭಾನುವಾರ ಭೇಟಿ ನೀಡಿ ಮಾತುಕತೆ ನಡೆಸಿದರು.
ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಉಭಯ ನಾಯಕರು ಇದೇ ಸಂದರ್ಭ ಚರ್ಚಿಸಿದರು. ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಕೈಗೊಳ್ಳಬಹುದಾದ ಹೋರಾಟ ಹಾಗೂ ಇತರೆ ವಿಚಾರಗಳ ಕುರಿತು ಚರ್ಚಿಸಿದರು.
ರಾಜ್ಯದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಗೃಹ ಹಾಗೂ ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿವೆ. ಕೊರೊನಾ ವಾರಿಯರ್ಗಳಾದ ಸಾಕಷ್ಟು ಪೊಲೀಸರಿಗೆ ಕೋವಿಡ್ ಕಾಡಿದೆ. ಸಾಕಷ್ಟು ಪೊಲೀಸರು ಸಾವನ್ನಪ್ಪಿದ್ದಾರೆ. ಹಿಂದೆ ಗೃಹ ಸಚಿವರಾಗಿದ್ದ ಹಿನ್ನೆಲೆ ಸರ್ಕಾರದ ಗೃಹ ಇಲಾಖೆ ವೈಫಲ್ಯಗಳ ಕುರಿತು ಡಿಕೆಶಿ ಸುದೀರ್ಘ ಚರ್ಚೆ ನಡೆಸಿದರು. ರಾಜ್ಯ ಸರ್ಕಾರದ ಹಲವು ಸಚಿವರು ಭ್ರಷ್ಟಾಚಾರ ನಡೆಸಿದ್ದಾರೆ. ಇದರ ಕುರಿತಾದ ದಾಖಲೆಯನ್ನು ಹೇಗೆ ತೆಗೆಸಬಹುದು ಎಂಬ ಕುರಿತು ಗುಪ್ತಚರ ಇಲಾಖೆ ನಿಭಾಯಿಸಿದ್ದ ಎಂ.ಬಿ. ಪಾಟೀಲರಿಂದ ಡಿಕೆಶಿ ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮುಗಿಬೀಳುವ, ಹೋರಾಟ ನಡೆಸುವ, ಜನಾಂದೋಲನ ರೂಪಿಸುವ ಸಿದ್ಧತೆಯಲ್ಲಿರುವ ಡಿಕೆಶಿ, ಇಂದು ಪಾಟೀಲರ ಜೊತೆ ಅತ್ಯಂತ ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.