ಬೆಂಗಳೂರು: ದೇಶ ವಿದೇಶಗಳಲ್ಲಿ ಪ್ರಖ್ಯಾತವಾಗಿರುವ ರಾಜ್ಯದ ಪ್ರತಿಷ್ಠಿತ ಸಂಸ್ಥೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಆರೋಪದಡಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಚಿತ್ರಕಲಾ ಪರಿಷತ್ ಎಂದರೆ ನಮಗೆ ಮೊದಲು ನೆನಪಾಗೋದು ದೇಶ-ವಿದೇಶಗಳ ಕಲಾಸಕ್ತರು ಒಂದೆಡೆ ಸೇರುವ ಚಿತ್ರಸಂತೆ. ವಾರ್ಷಿಕ ಕೋಟ್ಯಾಂತರ ವಹಿವಾಟು ನಡೆಸುವ ಸಂಸ್ಥೆಯಲ್ಲಿ ಭ್ರಷ್ಟಾಚಾರವೂ ಜೋರಾಗಿದೆ. 2007 ಮತ್ತು 2009 ರ ಸಾಲಿನಲ್ಲಿ ಸಂಸ್ಥೆಯ ಅಧ್ಯಕ್ಷರಾದ ಟಿ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿಯಾದ ಕಮಲಾಕ್ಷಿ, ಸಹಾಯಕ ಕಾರ್ಯದರ್ಶಿ ಅಪ್ಪಾಜಯ್ಯ ಮತ್ತು ಸದಸ್ಯರಾದ ಹರೀಶ್ ಪದ್ಮನಾಭ ರವರುಗಳು ವಾರ್ಷಿಕವಾಗಿ 60 ಲಕ್ಷ ಹಣ ಗುಳುಂ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಇದರ ತನಿಖೆ ನಡೆಸಿದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಕಂದಾಯ ಇಲಾಖೆ ಭ್ರಷ್ಟಾಚಾರ ನಡೆದಿರುವುದು ಸತ್ಯ ಎಂದು ವರದಿ ನೀಡಿತು. ಹಾಗೆಯೇ ಇದು 60 ಲಕ್ಷದ ಭ್ರಷ್ಟಾಚಾರ ಅಲ್ಲ 1.ಕೋಟಿ 47 ಲಕ್ಷದ ಗೋಲ್ಮಾಲ್ ಎಂದೇಳಿ ಶೀಘ್ರ ಕ್ರಮಕ್ಕೆ ಆಗ್ರಹಿಸಿತ್ತು.
2015 ರಲ್ಲಿ ವರದಿ ನೀಡಿದ್ದರು ಅಂದಿನಿಂದ ಇಂದಿನವರೆಗೂ ಅಧ್ಯಕ್ಷರಾಗಿರುವ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಬಿ.ಎಲ್.ಶಂಕರ್ ರವರು ತಪ್ಪಿತಸ್ಥರ ಮೇಲೆ ಯಾವ ಕ್ರಮವನ್ನೂ ಜರುಗಿಸಿಲ್ಲ. ಆದ್ದರಿಂದ ಅಧ್ಯಕ್ಷರ ನಡೆಯ ಬಗ್ಗೆಯೇ ಸದಸ್ಯರಿಗೆ ಅನುಮಾನ ಸೃಷ್ಟಿಯಾಗಿದೆ.
ಚಿತ್ರಕಲಾ ಪರಿಷತ್ನಲ್ಲಿ ಸರ್ವಸದಸ್ಯರ ಸಂಖ್ಯೆ 120. ಬೃಹದಾಕಾರವಾಗಿ ಬೆಳೆದಿರುವ ಸಂಸ್ಥೆಯಲ್ಲಿ ಕಾಲೇಜ್ ಸಹ ನಡೆಯುತ್ತಿದ್ದು ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರ ಭೋಧನೆ, ಸಭೆ, ಸಮಾರಂಭ, ಚಿತ್ರಸಂತೆ, ಕಾರ್ಯಾಗಾರ ಹೀಗೆ ವಿವಿಧ ಕಾರ್ಯಕ್ರಮಗಳ ಹೆಸರಲ್ಲಿ ದುಂದುವೆಚ್ಚ ನಡೆಸಿ, ತಪ್ಪುಲೆಕ್ಕಗಳನ್ನು ತೋರಿಸಿ ಕೋಟ್ಯಾಂತರ ರೂಪಾಯಿ ಗೋಲ್ಮಾಲ್ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.