ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಮಾಜಿ ಶಾಸಕ ಮುನಿರತ್ನ ಅವರಿಗೆ ಕೋವಿಡ್-19 ಪಾಸಿಟಿವ್ ಬಂದಿದ್ದು, ಇಂದು ಸಂಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಟ್ವಿಟರ್ ಮೂಲಕ ಪಾಸಿಟಿವ್ ಬಗ್ಗೆ ಸ್ಪಷ್ಟನೆ ನೀಡಿರುವ ಮುನಿರತ್ನ ಅವರು, ಆರ್.ಆರ್.ನಗರ ಕ್ಷೇತ್ರದ ಮತದಾರರಿಗೆ ವಂದನೆಗಳು. 57 ವರ್ಷ ವಯಸ್ಸಿನ ನಾನು ಇಂದು ಕೋವಿಡ್ ಟೆಸ್ಟ್ ಮಾಡಿಸಿದ್ದೆ. ಕೊರೊನಾ ಟೆಸ್ಟ್ನಲ್ಲಿ ಪಾಸಿಟಿವ್ ಬಂದಿದೆ. ಕ್ಷೇಮವಾಗಿ ಬಂದರೆ ನಿಮ್ಮ ಸೇವೆ. ಇಲ್ಲದಿದ್ದರೆ ನನ್ನನ್ನು ಕ್ಷಮಿಸಿ ಬಿಡಿ. ಇಂತಿ ನಿಮ್ಮ ಸೇವಕ ಮುನಿರತ್ನ' ಎಂದು ಭಾವನಾತ್ಮಕವಾಗಿ ತಿಳಿಸಿದ್ದಾರೆ.
ಮುನಿರತ್ನ ಅವರ ಟ್ವೀಟ್ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಕೊರೊನಾ ಬಂದರೆ ಜೀವದ ಮೇಲಿನ ಆಸೆಯೇ ಹೋಗುತ್ತಾ? ಜನಪ್ರತಿನಿಧಿಗಳೇ ಈ ರೀತಿ ಆತಂಕಪಟ್ರೆ ಜನಸಾಮಾನ್ಯರ ಕಥೆಯೇನು? ಎಂಬ ಅಭಿಪ್ರಾಯ ಕೂಡ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಲಿದೆ.
![Ex MLA Munirathna tests positive for Covid-19](https://etvbharatimages.akamaized.net/etvbharat/prod-images/kn-bng-10-muniratna-tweet-script-7208077_29082020220513_2908f_1598718913_570.jpg)
ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಪತನಗೊಂಡು ಬಿಜೆಪಿ ಸರ್ಕಾರ ರಚನೆ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ 17 ಶಾಸಕರಲ್ಲಿ ಮುನಿರತ್ನ ಕೂಡ ಒಬ್ಬರಾಗಿದ್ದಾರೆ. 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ರಾಜರಾಜೇಶ್ವರಿನಗರ ಹಾಗೂ ಮುಸ್ಕಿ ಕ್ಷೇತ್ರಗಳ ಉಪಚುನಾವಣೆ ಬಾಕಿ ಉಳಿದಿವೆ. ಪ್ರತ್ಯೇಕ ಪ್ರಕರಣಗಳ ಹಿನ್ನೆಲೆ ಇತ್ಯರ್ಥಕ್ಕಾಗಿ ನ್ಯಾಯಾಲಯ ಮೆಟ್ಟಿಲು ಏರಿದ್ದ ಕಾರಣ ಈ ಕ್ಷೇತ್ರಗಳಿಗೆ ಚುನಾವಣೆ ನಡೆದಿರಲಿಲ್ಲ.
ಕೊರೊನಾ ಹಿನ್ನೆಲೆ ಸದ್ಯ ಚುನಾವಣೆ ತಡೆಹಿಡಿಯಲಾಗಿದ್ದು ಯಾವುದೇ ಸಂದರ್ಭದಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜನರ ಅನುಕಂಪ ಗಿಟ್ಟಿಸಲು ಕೂಡ ಇಂಥದ್ದೊಂದು ಮಾತನ್ನು ಮುನಿರತ್ನ ಆಡಿರಬಹುದು ಎಂದು ಹೇಳಲಾಗುತ್ತಿದೆ.