ಬೆಂಗಳೂರು: ಅಲ್ಲೊಬ್ಬ ಇಲ್ಲೊಬ್ಬ ಶಾಸಕರು ಮಾತನಾಡಿದರೆ ಅದು ಪಕ್ಷದ ಅಭಿಪ್ರಾಯ ಅಲ್ಲ. ಕಾನೂನು ಎಲ್ಲರಿಗಿಂತ ದೊಡ್ಡದು ಎಂದು ಶಾಸಕ ಜಮೀರ್ ಅಹಮದ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ಪಾದರಾಯನಪುರ ಗಲಭೆಗೆ ಜಾತಿ ಬಣ್ಣ ಹಚ್ಚುವ ಕಾರ್ಯವನ್ನು ಕೆಲ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. 10, 20, 50 ಜನ ತಪ್ಪು ಮಾಡಿದರೆ ಅಷ್ಟು ಜನರಿಗೆ ಶಿಕ್ಷೆ ವಿಧಿಸಬೇಕೇ ವಿನಾ ಇಡೀ ಸಮುದಾಯಕ್ಕೆ ಕಳಂಕ ತರುವುದು ಸರಿಯಲ್ಲ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಕಾನೂನು ನಿಭಾಯಿಸುವುದು, ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಸರ್ಕಾರದ ಜತೆ ನಾವು ಸದಾ ಇದ್ದೇವೆ ಎಂದಿದ್ದಾರೆ. ನಾನು ಮೊದಲಿನಿಂದಲೂ ರಾಮನಗರ ಜೈಲನ್ನು ನೋಡುತ್ತಾ ಬಂದಿದ್ದೇನೆ. ರಾಮನಗರದ ಜೈಲು ತುಂಬಾ ಚಿಕ್ಕದು. ಡಿಸಿ ಕಚೇರಿ ಪಕ್ಕದಲ್ಲೇ ಇದೆ. ಅಲ್ಲಿಗೆ ಕೊರೊನಾ ಶಂಕಿತರನ್ನ ಸ್ಥಳಾಂತರಿಸುವುದಕ್ಕೆ ಹಲವರು ಹೆದರಿದ್ದಾರೆ. ಆದ್ರೆ ಸರ್ಕಾರದ ನಿರ್ಧಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಸರ್ಕಾರ ಎಲ್ಲಾ ರೀತಿ ಯೋಚನೆ ಮಾಡೇ ಈ ನಿರ್ಧಾರ ಕೈಗೊಂಡಿರುತ್ತದೆ. ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ರೆ ಏನು ಆಗುತ್ತೆ ಅಂತಾ ಅವರು ಪರಿಶೀಲನೆ ನಡೆಸಿರುತ್ತಾರೆ. ಎಲ್ಲರನ್ನೂ ರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು.
ಸರ್ಕಾರದ ತೀರ್ಮಾನಕ್ಕೆ ಬದ್ಧ: ಏ. 20ರಿಂದ ಲಾಕ್ಡೌನ್ ತೆರವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಸರ್ಕಾರ ಕೂಡ ಅದೇ ನಿಟ್ಟಿನಲ್ಲಿ ಕೆಲ ಘೋಷಣೆ ಮಾಡಿತ್ತು. ಅದನ್ನು ನಂತರ ವಾಪಸ್ ಪಡೆಯಲಾಗಿದೆ. ಸರ್ಕಾರದ ಯಾವುದೇ ತೀರ್ಮಾನಕ್ಕೆ ಬದ್ಧವಾಗಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಸಹಕಾರ ನೀಡುತ್ತೇವೆಂದು ಮಾತು ಕೊಟ್ಟಿದ್ದೇವೆ. ನಾವು ಕೆಲ ಸಲಹೆ ನೀಡದ್ದೇವೆ. ಸ್ವೀಕರಿಸುವುದು, ಬಿಡುವುದು ಅವರಿಗೆ ಬಿಟ್ಟದ್ದು. ಆದರೆ ರಾಜ್ಯದ ಜನರ ರಕ್ಷಣೆ, ಪಾರದರ್ಶಕತೆ ಉಳಿಸುವುದು, ಎಲ್ಲರಿಗೂ ಸೌಲಭ್ಯ ಕಲ್ಪಿಸುವುದು, ಎಲ್ಲಾ ವರ್ಗದ ಜನರ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕಾನೂನು ಚೌಕಟ್ಟಲ್ಲಿ ಕೆಲಸ ಮಾಡಬೇಕು. ಆರೋಗ್ಯ, ಆರ್ಥಿಕತೆಯನ್ನು ಕಾಪಾಡುವುದು ಸರ್ಕಾರದ ಕರ್ತವ್ಯ ಎಂದರು.