ಬೆಂಗಳೂರು: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಎನ್ಸಿಪಿ ಮೈತ್ರಿ ಸರ್ಕಾರ ರಚನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಷ್ಟಪತಿಗಳು ರಬ್ಬರ್ ಸ್ಟಾಂಪ್ ರೀತಿ ನಡೆದುಕೊಂಡಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯಪಾಲರು ಬಿಜೆಪಿ ವಕ್ತಾರರಂತೆ ನಡೆದುಕೊಂಡಿದ್ದಾರೆ. ಬಹುಮತ ಸಾಬೀತಿಗೆ ಸಾಕಷ್ಟು ಸಮಯ ಕೊಟ್ಟಿದ್ದಾರೆ. ಎನ್ಸಿಪಿ ಶಾಸಕರಿಗೂ ಸ್ಪಷ್ಟ ಮಾಹಿತಿಯಿಲ್ಲ. ಬಿಜೆಪಿ ಇಂದು ದೇಶದಲ್ಲಿ ಪೆಡಂಭೂತವಾಗಿದೆ. ಮಾಡಬಾರದ್ದನ್ನ ಮಾಡುತ್ತಿದ್ದಾರೆ ಎಂದು ದೂರಿದರು.
ದೇಶದ ರಾಷ್ಟ್ರಪತಿ ಈ ರೀತಿ ನಡೆದುಕೊಂಡಿರೋದು ದುರದೃಷ್ಟಕರ. ರಾಜ್ಯಪಾಲರ ನಡೆಯೂ ತಲೆತಗ್ಗಿಸುವಂತಾಗಿದೆ. ಬಿಜೆಪಿಯವರು ನಾವು ಏನು ಬೇಕಾದರೂ ಮಾಡ್ತೇವೆ ಅನ್ನುವಂತಾಗಿದೆ. ಮಹಾರಾಷ್ಟ್ರದ ಘಟನೆ ಕಪ್ಪು ಚುಕ್ಕೆ. ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಇವತ್ತು ದೇಶದಲ್ಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ಮಟ್ಟಕ್ಕೆ ಇಳಿದಿದೆ ಅಂದರೆ ಎಲ್ಲಾ ಸಂಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳಬೇಕು. ರಾಷ್ಟ್ರಪತಿ ಆಳ್ವಿಕೆ ಯಾವ ರೀತಿ ತೆಗೆದರು ಅಂತಾ ಗೊತ್ತಿಲ್ಲ. ಬೆಳಗ್ಗೆ 5.45ಕ್ಕೆ ಸಹಿ ಹಾಕುತ್ತಾರೆ ಅಂದರೆ ಏನ್ ಅರ್ಥ? ರಾಜ್ಯಪಾಲರು ಸರ್ಕಾರ ರಚನೆ ಮಾಡುವುದಕ್ಕೆ ಕರೀತಾರೆ ಅಂದರೆ ಹೇಗೆ ಸಾಧ್ಯ?.
ರಾಜ್ಯಪಾಲರೂ ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡಿದ್ದಾರೆ. ಇಷ್ಟು ಬಹಿರಂಗವಾಗಿ ನಂಗಾನಾಚ್ ಮಾಡಿದ್ದಾರೆ ಎಂದು ಹೇಳಬೇಕು ಎಂದರು. ಪ್ರಧಾನಿ ಮೋದಿ ಅವರ ಫೆಡರಲ್ ಸಿಸ್ಟಂ ಮಾಡುತ್ತೇವೆ ಎಂದು ಹೇಳುತ್ತಿದ್ರು. ಮೋದಿ ಅಮಿತ್ ಶಾ ದೇಶದಲ್ಲಿ ಸರ್ವಾಧಿಕಾರಿ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.