ಬೆಂಗಳೂರು: ಜೂ. 1ರಿಂದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಬಾಗಿಲು ತೆರೆಯಲಿದ್ದು, ಪೂಜಾ ಕೈಂಕರ್ಯ ಆರಂಭಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು ಕೊನೆಗೂ ಭಕ್ತರಿಗೆ ದೇವರ ದರ್ಶನ ಭಾಗ್ಯ ಕರುಣಿಸಲಾಗುತ್ತಿದೆ.
![Department of muzrai temples are open from june 1st: CM BSY](https://etvbharatimages.akamaized.net/etvbharat/prod-images/kn-bng-07-temple-open-green-signal-script-7208080_26052020181759_2605f_1590497279_1043.jpg)
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಕಂದಾಯ ಹಾಗೂ ಮುಜರಾಯಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಸಭೆಯಲ್ಲಿ ದೇವಸ್ಥಾನ ಆರಂಭದಿಂದ ಎದುರಾಗಬಹುದಾದ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ನಂತರ ಮಾರ್ಗಸೂಚಿ ಪಾಲನೆ ಕಡ್ಡಾಯಗೊಳಿಸಿ ದೇವಸ್ಥಾನ ತೆರೆಯುವ ನಿರ್ಧಾರಕ್ಕೆ ಬರಲಾಯಿತು.
ಕಂದಾಯ ಹಾಗೂ ಮುಜರಾಯಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು ಹೀಗಿವೆ...
ಮುಜರಾಯಿ:
- ಆಂಧ್ರ ಪ್ರದೇಶದ ತಿರುಮಲ ಕರ್ನಾಟಕ ಛತ್ರಕ್ಕೆ ಸೇರಿದ ಸ್ಥಳಗಳಲ್ಲಿ ನೂತನ ವಸತಿ ಗೃಹಗಳ ನಿರ್ಮಾಣಕ್ಕೆ 200 ಕೋಟಿ ರೂ.ಗಳ ಅನುದಾನ ಮಂಜೂರು ಮಾಡುವ ಬಗ್ಗೆ ಚರ್ಚಿಸಲಾಯಿತು. ಕೂಡಲೇ ಕಾಮಗಾರಿ ಪ್ರಾರಂಭಕ್ಕೆ ಕ್ರಮವಹಿಸಲು ಸೂಚನೆ ನೀಡಲಾಯಿತು.
- ಕಾಮಗಾರಿಯ ಅಂದಾಜು ವೆಚ್ಚ ಹಾಗೂ ಕೊಠಡಿಗಳ ಅಳತೆಯನ್ನು ಮತ್ತೊಮ್ಮೆ ಪರಿಶೀಲಿಸಲು ಮುಖ್ಯಮಂತ್ರಿಗಳು ಆದೇಶಿಸಿದರು.
- 50 ದೇವಸ್ಥಾನಗಳಿಗೆ ಆನ್ಲೈನ್ ಬುಕಿಂಗ್ ಸೇವೆಯ ವಿಸ್ತರಣೆ
- ಸರಳ ವಿವಾಹ: 50 ಜನರಿಗೆ ಸೀಮಿತಗೊಳಿಸಿ ಮದುವೆ ಮಾಡಿಸಲು ತೀರ್ಮಾನ
ಕಂದಾಯ ಇಲಾಖೆ:
- ಅನುಭವ ಮಂಟಪ ಸ್ಥಾಪನೆಗೆ 100 ಕೋಟಿ ರೂ.ಗಳನ್ನು ಒದಗಿಸಲು ನಿರ್ಧರಿಸಲಾಯಿತು.
- ಭೂ ಸುಧಾರಣೆ: 164 ತಾಲೂಕುಗಳಲ್ಲಿ ಭೂ ನ್ಯಾಯ ಮಂಡಳಿ ರಚಿಲು ಮುಖ್ಯಮಂತ್ರಿಗಳು ಸೂಚಿಸಿದರು.
- ಡ್ರೋನ್ ಆಧಾರಿತ ಸರ್ವೆ ಸಮಿತ್ವ ಯೋಜನೆಯಡಿ 16,000 ಗ್ರಾಮಗಳನ್ನು ಗುರುತಿಸಲಾಗಿದೆ. ಗ್ರಾಮ ನಿವಾಸಿಗಳಿಗೆ ಅವರ ವಾಸಸ್ಥಳದ ಆಸ್ತಿಗಳಿಗೆ ಪ್ರಾಪರ್ಟಿ ಕಾರ್ಡ್ ವಿತರಿಸುವ ಯೋಜನೆ ಇದಾಗಿದೆ. ದೇಶದ 7 ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯದಲ್ಲಿಯೂ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯ ಅನುಷ್ಠಾನವನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಮುಖ್ಯಮಂತ್ರಿಗಳು ಸೂಚಿಸಿದರು.
ನೋಂದಣಿ ಮತ್ತು ಮುದ್ರಾಂಕ ಇಲಾಖೆ:
- ಕೋವಿಡ್- 19 ಹಿನ್ನೆಲೆ 2020-21 ನೇ ಸಾಲಿನಲ್ಲಿ 3,524 ಕೋಟಿ ರೂ.ಗಳಷ್ಟು ಕಡಿಮೆ ರಾಜಸ್ವ ಸಂಗ್ರಹವಾಗಬಹುದೆಂದು ಅಂದಾಜಿಸಲಾಗಿದೆ.
- ಕೈಗೆಟಕುವ ದರಗಳ ಮನೆಗಳನ್ನು ಪ್ರೋತ್ಸಾಹಿಸಲು ರೂ.20 ಲಕ್ಷ ಮೌಲ್ಯದ ಅಪಾರ್ಟ್ಮೆಂಟ್ಗಳ ಮೊದಲ ನೋಂದಣಿಗೆ ಮುದ್ರಾಂಕ ಶುಲ್ಕವನ್ನು ಶೇ 5 ರಿಂದ 2 ಕ್ಕೆ ಇಳಿಸಲು ಹಾಗೂ ರೂ.35 ಲಕ್ಷ ಮೌಲ್ಯದವರೆಗಿನ ನೋಂದಣಿಗೆ ಶೇ. 5 ರಿಂದ ಶೇ. 3ಕ್ಕೆ ಇಳಿಸಲು ಮುಖ್ಯಮಂತ್ರಿಗಳು ಸೂಚಿಸಿದರು.ಸಿಎಂ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ
ಈ ಕುರಿತು ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಾಮಾಜಿಕ ಅಂತರ ಪಾಲನೆ ಮಾಡುವ ಮೂಲಕ ದೇವಸ್ಥಾನ ತೆರೆಯಲು ಸಿಎಂ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಜೂ.1 ರಿಂದ ದೇವಸ್ಥಾನಗಳು ತೆರೆಯಲಿವೆ. ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳನ್ನು ತೆರೆದು ಪೂಜಾ ಕೈಂಕರ್ಯಗಳಿಗೆ ಅವಕಾಶ ನೀಡಲಾಗುತ್ತದೆ. ಆದರೆ, ಮಸೀದಿ, ಚರ್ಚ್ಗಳ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ತಿಳಿಸಿದರು.