ಬೆಂಗಳೂರು: ದೆಹಲಿಯ ಏಮ್ಸ್ ಆಸ್ಪತ್ರೆ ಮಾದರಿಯಲ್ಲಿ ರಾಜ್ಯದಲ್ಲಿಯೂ ವಿಶೇಷ ವೈದ್ಯಕೀಯ ವ್ಯವಸ್ಥೆ ಜಾರಿಗೆ ತರುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ವಿಧನಸೌಧದಲ್ಲಿ ತಮ್ಮ ಕಚೇರಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ದೆಹಲಿಯ ಏಮ್ಸ್ ಆಸ್ಪತ್ರೆಯನ್ನು ನಾನು ಸಂಸದನಾಗಿದ್ದ ಸಂದರ್ಭದಲ್ಲಿ ನೋಡಿದ್ದೆ. ಅಲ್ಲಿ ಕೇವಲ ಬ್ಲಡ್ ಸ್ಯಾಂಪಲ್ ತೆಗೆದುಕೊಂಡು ಎಲ್ಲಾ ಕಾಯಿಲೆ ಪತ್ತೆ ಹಚ್ಚುತ್ತಾರೆ ಮತ್ತು ಸಂಬಂಧಿಸಿದ ಕಾಯಿಲೆಗೆ ಚಿಕಿತ್ಸೆ ಕೊಡುತ್ತಾರೆ. ದೆಹಲಿಯಲ್ಲಿರೋ ಮಾದರಿಯಲ್ಲಿ ಒಂದು ಬಾರಿ ರಕ್ತ ಪಡೆದರೆ, 16 ಕ್ಕೂ ಹೆಚ್ಚು ಟೆಸ್ಟ್ ಗಳನ್ನು ಮಾಡುವ ರೀತಿಯ ತಂತ್ರಜ್ಞಾನದಂತೆಯೇ ರಾಜ್ಯದಲ್ಲಿಯೂ ಈ ವ್ಯವಸ್ಥೆ ಜಾರಿಗೆ ತರುವ ಯೋಚನೆ ಇದೆ ಎಂದರು.
ನಾನು ಯಾವಾಗಲೂ ಬಡವರ ಪರ ಇರುವವನು. ಸರ್ಕಾರಿ ಆಸ್ಪತ್ರೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ 24 ಗಂಟೆ ಕೆಲಸ ಮಾಡುವೆ. ಖಾಲಿ ಇರೋ ವೈದ್ಯರ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳುವೆ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಸಚಿವ ಶ್ರೀರಾಮುಲು ಅವರು, ವಿಧಾನಸೌಧದ ಮೂರನೇ ಮಹಡಿಯಲ್ಲಿರೋ ಕಚೇರಿಗೆ ಪೂಜೆ ನೆರವೇರಿಸಿದರು. ನನಗೆ ಕೊಟ್ಟಿರುವ ಈ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವೆ. ಇಲ್ಲಿ ಅನೇಕ ಸಮಸ್ಯೆಗಳಿವೆ, ಎಲ್ಲದಕ್ಕೂ ಒಂದು ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದು ತಿಳಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಔಷಧಿ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಚಾರದ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳುವೆ. ಜೊತೆಗೆ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಕಾಪಾಡಲು ಹೆಚ್ಚಿನ ಗಮನ ಹರಿಸುವೆ ಎಂದು ಭರವಸೆ ನೀಡಿದರು.