ಬೆಂಗಳೂರು: ಲಕ್ಷ್ಮಣ ಸವದಿ ಪಾಲಿಗೆ ಅಧಿಕಾರದ ಜೊತೆ ಅಪಸ್ವರವೂ ಜೊತೆಯಾಗಿಯೇ ಬರುತ್ತಿದೆ. ಒಂದಲ್ಲ ಒಂದು ಸುದ್ದಿಗೆ ಗ್ರಾಸವಾಗಿರುವ ಸವದಿ ಈಗ ಇನ್ನೊಂದು ವಿಚಾರದಲ್ಲಿ ಸುದ್ದಿಯಾಗಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು, ಬಿಎಸ್ ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ ಸಚಿವರಾದಾಗಲೇ ಸವದಿ ವಿರುದ್ದ ದೊಡ್ಡಮಟ್ಟದ ಅಪಸ್ವರ ಕೇಳಿಬಂದಿತ್ತು. ಇದಾದ ಬಳಿಕ ಅವರು ಉಪಮುಖ್ಯಮಂತ್ರಿ ಎಂದು ಘೋಷಣೆಯಾದಾಗ ಅಪಸ್ವರ ಇನ್ನಷ್ಟು ಹೆಚ್ಚಾಗಿತ್ತು. ಬಿಜೆಪಿಯಲ್ಲಿ ಇವರನ್ನು ವಿರೋಧಿಸಿದವರೇ ಇಲ್ಲ ಎನ್ನುವ ಸ್ಥಿತಿ ತಲುಪಿದ್ದ ಸಂದರ್ಭದಲ್ಲಿಯೇ. ಸಚಿವ ಸವದಿಗೆ ನೀಡಲಾಗಿದ್ದ ವಿಕಾಸಸೌಧದ ಕೊಠಡಿಯ ನಾಮಫಲಕದಲ್ಲಿ ದೊಡ್ಡ ಯಡವಟ್ಟಾಗಿದೆ.
ಲಕ್ಷ್ಮಣ ಸವದಿ ಹೆಸರಿನ ನಾಮಫಲಕದಲ್ಲಿ ಕನ್ನಡ ಸರಿಯಾಗಿದ್ದರೂ ಆಂಗ್ಲ ಪದ ಬರೆಯುವಾಗ ಎಡವಟ್ಟಾಗಿದೆ. LAKSHMAN ಆಗಬೇಕಿದ್ದ ಅವರ ಹೆಸರು ಯಡವಟ್ಟಿನಿಂದಾಗಿ LAKXHMAN ಎಂದಾಗಿದೆ. ಅಲ್ಲಿಗೆ ಅವರ ಹೆಸರನ್ನು ನಾಲ್ಕನೇ ಶಬ್ದ S ಬದಲು X ಎಂದು ಆಗಿದೆ. ಫಲಕ ಬರೆಯುವವರ ಯಡವಟ್ಟು, ಮತ್ತು ವಿಧಾನಸೌಧ ಸಿಬ್ಬಂದಿ ತಪ್ಪಿನಿಂದಾಗಿ ಈ ಪ್ರಮಾದವಾಗಿದೆ ಎನ್ನಲಾಗುತ್ತಿದೆ.
ನಮ್ಮ ತಪ್ಪಲ್ಲ ಅಂದ್ರು ವಿಧಾನಸೌಧ ಸಿಬ್ಬಂದಿ :
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಧಾನಸೌಧ ಸಿಬ್ಬಂದಿ , ಸಚಿವರ ಆಪ್ತರು ಬರೆದುಕೊಟ್ಟಂತೆ ನಾವು ಬರೆದಿದ್ದೇವೆ. ಇದರಲ್ಲಿ ನಮ್ಮ ತಪ್ಪೇನೂ ಇಲ್ಲ ಎಂದಿದ್ದಾರೆ. ಇಂದು ಬೆಳಗ್ಗೆ ಕಚೇರಿ ಪೂಜೆ ನೆರವೇರಿದ್ದು,ಸಂಜೆ ಹೊತ್ತಿಗೆ ಹೆಸರಿನ ಯಡವಟ್ಟಿನಿಂದಾಗಿ ಕಚೇರಿ ನಾಮಫಲಕ ತೆರವುಗೊಳಿಸುವಂತಾಗಿದೆ. ಸದ್ಯ ವಿಕಾಸ ಸೌಧದ ಮೂರನೇ ಮಹಡಿಯಲ್ಲಿರುವ ಸವದಿ ಕೊಠಡಿಯಲ್ಲಿ ನಾಮಫಲಕವಿಲ್ಲ. ಆದಷ್ಟು ಬೇಗ ಹೊಸ ಬೋರ್ಡ್ ಅಳವಡಿಸಲಾಗುವುದು ಎಂದು ವಿಧಾನಸೌಧ ಸಿಬ್ಬಂದಿ ತಿಳಿಸಿದ್ದಾರೆ.