ಬೆಂಗಳೂರು: ವಿಧಾನಸೌಧದ ಮೊದಲ ಮಹಡಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Opposition leader Siddaramaiah) ಅವರ ಕಚೇರಿ ಹೊರಗೆ ಹಾಕಿರುವ ಅವರ ನಾಮಫಲಕದ ಮೇಲೆ ಇಂದು ಸಂಜೆ ಕಾಗೆಯೊಂದು ಸ್ವಲ್ಪ ಹೊತ್ತು ಕುಳಿತು (Crow sits on siddaramaiah name board) ಹೋಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಸಾಮಾನ್ಯವಾಗಿ ವಿಧಾನಸೌಧದ ಒಳಗೆ ಕಾಗೆಗಳು ಬರುವುದಿಲ್ಲ. ಏನೋ ಕೆಟ್ಟ ಮುನ್ಸೂಚನೆ ಇರಬಹುದು ಎನ್ನುವ ಮಾತುಗಳು ಕೆಲವರಿಂದ ವ್ಯಕ್ತವಾಗಿವೆ. ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೂ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಳೆಯಿಂದ ರಕ್ಷಿಸಿಕೊಳ್ಳಲು ಕಾಗೆ ವಿಧಾನಸೌಧದ ಒಳಗೆ ಬಂದಿದೆ ಎಂಬ ಅಭಿಪ್ರಾಯಗಳು ಕೆಲವರಿಂದ ವ್ಯಕ್ತವಾಗಿವೆ.
ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂದರೆ 2016 ಜೂನ್ 2 ರಂದು ಸಿಎಂ ಕಚೇರಿ ಕೃಷ್ಣಾದಲ್ಲಿ ಇದೇ ರೀತಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕಾಗೆ ಕುಳಿತಿತ್ತು. ಆಗ ಜ್ಯೋತಿಷಿಗಳು ಎಚ್ಚರಿಕೆ ಸಂದೇಶದ ಮಾತುಗಳನ್ನು ಆಡಿದ್ದರು.
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಿಎಂ ಕಚೇರಿಯ ಮುಂದೆ ಅದೇ ವರ್ಷ ಆಗಸ್ಟ್ನಲ್ಲಿ ಗೂಬೆಯೊಂದು ಸ್ವಲ್ಪಹೊತ್ತು ಕುಳಿತಿತ್ತು. ಇದು ಸಿದ್ದರಾಮಯ್ಯ ಅವರಿಗೆ ಅಪಶಕುನ ಎಂದು ಜ್ಯೋತಿಷಿಗಳು ಮಾತನಾಡಿದ್ದರು. ಇದು ದೊಡ್ಡ ಚರ್ಚೆಗೂ ಗ್ರಾಸವಾಗಿತ್ತು.
ಆ ಘಟನೆ ನಡೆದ ನಂತರ ಮತ್ತೆ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕಾಗೆ ಕುಳಿತಿತ್ತು. ಆ ಸಮಯದಲ್ಲಿ ಅವರು ಕಾರನ್ನೇ ಬದಲಾಯಿಸಿದ್ದರು. ಈ ಎಲ್ಲಾ ವಿಚಾರಗಳ ಮೇಲಿನ ಶುಭಶಕುನ, ಅಪಶಕುನದ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ನಡೆದಿದ್ದವು. ಆ ಸಂದರ್ಭದಲ್ಲಿ ಜ್ಯೋತಿಷಿಗಳನ್ನು ಸಿದ್ದರಾಮಯ್ಯ ಅವರು ತರಾಟೆಗೆ ತೆಗೆದುಕೊಂಡಿದ್ದರು.
ಓದಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸಮಿತಿ ಅಧ್ಯಕ್ಷರ ನೇಮಕ ಅಸಿಂಧುಗೊಳಿಸಿದ ಹೈಕೋರ್ಟ್