ಬೆಂಗಳೂರು : ನಗರದ ಯಲಹಂಕ ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಜಾಗಗಳಲ್ಲಿ ಹಾಡು, ಅಭಿನಯದ ಮೂಲಕ ಜನರಿಗೆ ಕೊರೊನಾ ಮಹಾಮಾರಿಯ ಕುರಿತು ಜಾಗೃತಿ ಮೂಡಿಸುವ ದೃಶ್ಯರೂಪಕ ಪ್ರದರ್ಶಿಸಲಾಯಿತು.
ವಿಶ್ವಭಾರತಿ ಚಾರಿಟಬಲ್ ಟ್ರಸ್ಟ್ನ ಕಲಾವಿದರು ಹಾಡು ಹಾಗೂ ನೃತ್ಯರೂಪಕವನ್ನು ಪ್ರದರ್ಶಿಸಿದರು. ಕೊರೊನಾ ಕುರಿತು ಎಚ್ಚರಿಕೆಯಿಂದ ಇರಿ, ಮಾಸ್ಕ್ ಬಳಸಿ, ದೈಹಿಕ ಅಂತರ ಕಾಪಾಡಿ, ಎಲ್ಲೆಂದರಲ್ಲಿ ಉಗುಳಬೇಡಿ, ಹಿರಿಯರು, ಮಕ್ಕಳು ಗರ್ಭಿಣಿಯರು ಮನೆಯಲ್ಲೇ ಇರಿ. ಅನಗತ್ಯ ಅಲೆದಾಟ ಬಿಡಿ ಇದರಿಂದ ಮನುಕುಲಕ್ಕೆ ಮಾರಕವಾದ ಕೊರೊನಾವನ್ನು ತಡೆಯಬಹುದು ಎಂದು ಹಾಡಿನ ಮೂಲಕ ಜನರಿಗೆ ತಿಳಿವಳಿಕೆ ಮೂಡಿಸಲಾಯಿತು.
ಪೊಲೀಸ್ ಸಿಬ್ಬಂದಿ ಹಾಗೂ ಯಲಹಂಕ ತಾಲೂಕು ಆಡಳಿತ ಮಂಡಳಿಯ ಸಹಯೋಗದಲ್ಲಿ ಈ ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಕಲಾವಿದರಾದ ಆನಂದ್ ಮಾತನಾಡಿ, ಬಿಸಿನೀರು ಸೇವನೆ ಮಾಡುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದರಿಂದ ಕೊರೊನಾದಿಂದ ದೂರ ಇರಬಹುದು. ಇದಕ್ಕೆ ಸೋಂಕಿತರ ಸಂಖ್ಯೆಯನ್ನು ಸೊನ್ನೆಗೆ ಇಳಿಸಿದ ನ್ಯೂಜಿಲ್ಯಾಂಡ್ ದೇಶ ಮಾದರಿ ಎಂದರು.