ಬೆಂಗಳೂರು: ರಾಜ್ಯದಲ್ಲಿ ಕಾಲೇಜು ಆರಂಭಿಸಿದ ನಂತರ ಮತ್ತೆ ಕೊರೊನಾ ಕಳವಳ ಶುರುವಾಗಿದೆ. ಕಾಲೇಜು ಆರಂಭ ಮಾಡಿ ಸರ್ಕಾರ ತಪ್ಪು ಮಾಡ್ತಾ? ಕೊರೊನಾ ಇರುವಾಗ ಕಾಲೇಜು ಆರಂಭ ಬೇಕಿತ್ತಾ? ಎನ್ನುವ ಪ್ರಶ್ನೆಗಳು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಪದವಿ - ಸ್ನಾತಕೋತ್ತರ ಪದವಿ ಕಾಲೇಜು ಆರಂಭವಾಗಿ ನಾಲ್ಕೇ ದಿನ ಕಳೆದಿದ್ದು, ಜಸ್ಟ್ 4 ದಿನಗಳಲ್ಲಿ 123 ಕಾಲೇಜು ವಿದ್ಯಾರ್ಥಿ, ಸಿಬ್ಬಂದಿಗಳಲ್ಲಿ ಕೊರೊನಾ ಕಾಣಿಸಿಕೊಂಡಿದೆ.
ಸರ್ಕಾರವೇನೋ ಕಾಲೇಜಿಗೆ ಬರೋದು ವಿದ್ಯಾರ್ಥಿಗಳಿಗೆ ಬಿಟ್ಟ ಆಯ್ಕೆ ಅಂತ ಅಡ್ಡಗೋಡೆ ಮೇಲೆ ದೀಪ ಇಟ್ಟು ನುಣುಚಿಕೊಳ್ಳುತ್ತಿದೆ. ಆದರೆ ಇತ್ತ ವಿದ್ಯಾರ್ಥಿಗಳ ಪಾಡು ಯಾರು ಕೇಳೋರಿಲ್ಲದಂತಾಗಿದ್ದು, ಭವಿಷ್ಯದ ದೃಷ್ಟಿಯಿಂದ ಕಾಲೇಜಿಗೆ ಬರಬೇಕೋ ಅಥವಾ ಆರೋಗ್ಯದ ಕಾರಣಕ್ಕೆ ಮನೆಯಲ್ಲೇ ಇರಬೇಕೋ ಅನ್ನೋ ಗೊಂದಲಕ್ಕೆ ಸಿಲುಕಿದ್ದಾರೆ. ಹೊರೆಗೆ ಬಂದರೆ ಕೊರೊನಾ, ಮನೆಯಲ್ಲೇ ಇರೋಣಾ ಅಂದರೆ ಆನ್ಲೈನ್ ಪಾಠಗಳಲ್ಲಿ ಗೊಂದಲ. ಪೋಷಕರಿಗೆ ಮನವೊಲಿಸಿ ಕಾಲೇಜಿಗೆ ಬಂದರೆ ಕೊರೊನಾ ಆತಂಕ ಅಂತ ದುಗುಡ ಶುರುವಾಗಿದೆ.
ಅಂದಹಾಗೇ, ನವೆಂಬರ್ 17ರಿಂದ ರಾಜ್ಯಾದ್ಯಂತ ಪದವಿ- ಸ್ನಾತಕೋತ್ತರ ಪದವಿ ಕಾಲೇಜುಗಳು ಆರಂಭವಾಗಿವೆ. ಕೇವಲ 4 ದಿನಗಳಲ್ಲೇ ಬೆಂಗಳೂರಿನಲ್ಲಿ 89 ಮಂದಿಗೆ ಸೋಂಕು ದೃಢಪಟ್ಟಿದೆ. ನವೆಂಬರ್ 16 ರಿಂದ 19ರವರೆಗೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸೇರಿದಂತೆ ಕಾಲೇಜು ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡಲಾಗಿದೆ. ಸುಮಾರು 13,037 ಮಂದಿಗೆ ಕೋವಿಡ್ ಟೆಸ್ಟ್ ಮಾಡಿಸಿದ್ದು, ಇದರಲ್ಲಿ 89 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಪಾಸಿಟಿವ್ ರೇಟ್ ಶೇ. 0.68 ರಷ್ಟು ಇದೆ. ಬೆಂಗಳೂರಿನಲ್ಲಿ ಈ ರೀತಿಯಾದರೆ ಇತ್ತ ಬಳ್ಳಾರಿಯಲ್ಲಿ 7, ಹೊಸಪೇಟೆ 3, ಕೂಡ್ಲಿ 2, ಹಾಸನ 6 , ವಿಜಯಪುರದಲ್ಲಿ ಇಬ್ಬರಿಗೆ ಹಾಗೂ ಬಾಗಲಕೋಟೆಯಲ್ಲಿ 10 ಮಂದಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಬೆಂಗಳೂರಿನಲ್ಲಿ ಕೋವಿಡ್ ವರದಿ ವಿಳಂಬ:
ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರಲು ಇಚ್ಚಿಸಿದ್ದರೂ ಕೋವಿಡ್ ವರದಿ ಕೈ ಸೇರುವುದು ತಡವಾಗುತ್ತಿದೆ ಅನ್ನೋ ಆರೋಪವಿದೆ. ಹೀಗಾಗಿ, ಈ ಸಂಬಂಧ ಮಾತಾನಾಡಿದ ಪಾಲಿಕೆಯ ವಿಶೇಷ ಆಯುಕ್ತ ರಾಜೇಂದ್ರ ಚೋಳನ್, ಕಾಲೇಜುಗಳಲ್ಲಿ ನಡೆಯುತ್ತಿರುವ ಕೋವಿಡ್ ಟೆಸ್ಟ್ ರಿಪೋರ್ಟ್ ಬರುವುದು ತಡವಾಗುತ್ತಿದೆ. ಹೀಗಾಗಿ, ಲ್ಯಾಬ್ನಿಂದಲ್ಲೇ ರಿಪೋರ್ಟ್ ನೇರ ಕಾಲೇಜಿಗೆ ತಲುಪಿಸುವ ಕೆಲಸ ಮಾಡಲಾಗುವುದು ಅಂದರು.
ಅನ್ಯ ರಾಜ್ಯಗಳಲ್ಲಿ ಶಾಲಾ-ಕಾಲೇಜು ಆರಂಭಕ್ಕೆ ಬ್ರೇಕ್:
ಈಗಾಗಲೇ ಹಲವು ರಾಜ್ಯಗಳಲ್ಲಿ ಶಾಲಾ-ಕಾಲೇಜು ಆರಂಭಿಸಲಾಗಿತ್ತು. ಆದರೆ ಸೋಂಕು ಹೆಚ್ಚಾದ ಹಿನ್ನೆಲೆ ಮಹಾರಾಷ್ಟ್ರದಲ್ಲಿ ನವೆಂಬರ್ 23 ರಿಂದ ಆರಂಭವಾಗಬೇಕಿದ್ದ ಶಾಲಾ-ಕಾಲೇಜುಗಳಿಗೆ ಬ್ರೇಕ್ ಹಾಕಿದೆ. ಗುಜರಾತ್ ಸರ್ಕಾರ ಡಿಸೆಂಬರ್ 31 ರವರೆಗೆ ಶಾಲೆ ತೆರೆಯದಿರಲು ನಿರ್ಧಾರ ಮಾಡಲಾಗಿದೆ. ಇತ್ತ ಹರಿಯಾಣದಲ್ಲೂ ಸೋಂಕಿತರ ಸಂಖ್ಯೆ ಏರುತ್ತಲ್ಲಿದ್ದು, ಅಲ್ಲೂ ಸುಮಾರು 174 ವಿದ್ಯಾರ್ಥಿಗಳಿಗೆ 107 ಶಿಕ್ಷಕರಿಗೆ ಕೊರೊನಾ ಸೋಂಕು ಕಾಣಿಡಿಕೊಂಡಿದೆ. ಹೀಗಾಗಿ ನವೆಂಬರ್ 30 ರವರೆಗೆ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.
ಒಟ್ಟಾರೆ, ಕಾಲೇಜು ಆರಂಭವಾದರೂ ಕಷ್ಟ, ಆಗದೇ ಇದ್ದರೆ ನಷ್ಟ ಎಂಬ ಸ್ಥಿತಿ ವಿದ್ಯಾರ್ಥಿಗಳದ್ದಾಗಿದೆ.