ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲೇ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಎರಡನೇ ಪಟ್ಟಿ ತರುವ ಸಿದ್ಧತೆ ನಡೆದಿದೆ. ಬಳಿಕ ಭುಗಿಲೇಳುವ ಅಸಮಾಧಾನಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ಚಿಂತನೆ ನಡೆಸಿದೆ.
ಬಿಜೆಪಿ ಹಾಗೂ ಜೆಡಿಎಸ್ಗೆ ರಾಜೀನಾಮೆ ನೀಡಿ ಸಾಲು ಸಾಲಾಗಿ ಹಾಲಿ ಹಾಗೂ ಮಾಜಿ ಶಾಸಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಆದರೆ ಇದಕ್ಕೂ ಮುನ್ನವೇ ಕಾಂಗ್ರೆಸ್ ಪಕ್ಷ ತಮ್ಮ ನಾಯಕರಲ್ಲಿ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಎಂದು ತಿಳಿಸಿ ಅವರಿಂದ ಅರ್ಜಿ ನಮೂನೆಗೆ 5 ಸಾವಿರ ಹಾಗೂ ಅರ್ಜಿ ಸ್ವೀಕಾರಕ್ಕೆ ಸಾಮಾನ್ಯ ವರ್ಗದವರಿಂದ 2 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ, ಪಂಗಡದವರಿಂದ 1 ಲಕ್ಷ ರೂ. ಸ್ವೀಕರಿಸಿದೆ. ಆದರೆ ಈಗ ಹೊರಗಿನಿಂದ ಬಂದವರಿಗೆ ಮಣೆ ಹಾಕುವುದು ಅನಿವಾರ್ಯವಾಗಿದೆ.
ಅದಕ್ಕೆ ಸೂಕ್ತ ಉದಾಹರಣೆ ಮೊದಲ ಪಟ್ಟಿ. ಇದರಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಪುಟ್ಟಣ್ಣ (ರಾಜಾಜಿನಗರ), ಯು.ಬಿ. ಬಣಕಾರ್ (ಹಿರೆಕೆರೂರ್), ಕಿರಣ್ ಕುಮಾರ್ (ಚಿಕ್ಕನಾಯ್ಕನಹಳ್ಳಿ) ಮೊದಲ ಪಟ್ಟಿಯಲ್ಲೇ ಟಿಕೆಟ್ ಗಿಟ್ಟಿಸಿದ್ದಾರೆ. ಈ ಕ್ಷೇತ್ರದಿಂದ ಸಾಕಷ್ಟು ಆಕಾಂಕ್ಷಿಗಳು ಮೊದಲೇ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಬೇಗುದಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಆದರೆ ಎರಡನೇ ಪಟ್ಟಿಯಲ್ಲಿ ಇಂತಹ ಹತ್ತಾರು ಮಂದಿ ಹೆಸರು ಬರಲಿದೆ. ಆಗ ಏಳುವ ಅಸಮಾಧಾನಕ್ಕೆ ಕಾಂಗ್ರೆಸ್ ನಾಯಕರು ಹೇಗೆ ಪರಿಹಾರ ಹುಡುಕುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ.
ಸಾಲು ಸಾಲು ಸೇರ್ಪಡೆ: ಇತ್ತೀಚಿನ ದಿನಗಳಲ್ಲಿ ಸಾಲು ಸಾಲಾಗಿ ಮುಖಂಡರು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಸದ್ಯವೇ ಶಿವಮೊಗ್ಗ ನಗರದಿಂದ ಕಾಂಗ್ರೆಸ್ ಟಿಕೆಟ್ ನಿರೀಕ್ಷಿಸಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸೇರ್ಪಡೆ ಆಗಲಿದ್ದಾರೆ ಎನ್ನಲಾಗಿದೆ. ಅವರು ಸೇರಿದಂತೆ ಈಗಾಗಲೇ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿ ಏಳಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದವರಿದ್ದಾರೆ. ರಾಜಾಜಿನಗರದಲ್ಲಿ ಮಾಜಿ ಮೇಯರ್ ಪದ್ಮಾವತಿ ಸೇರಿದಂತೆ 10ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದರು. ಅಲ್ಲಿ ಈಗ ಭುಗಿಲೆದ್ದಿರುವ ಅಸಮಾಧಾನ ಶಮನ ಕಾಂಗ್ರೆಸ್ ರಾಜ್ಯ ನಾಯಕರಿಗೆ ಕಗ್ಗಂಟಾಗಿದೆ.
ಶಿಗ್ಗಾಂವಿ ಕ್ಷೇತ್ರದ ಮಾಜಿ ಸಂಸದ ಮಂಜುನಾಥ್ ಕುನ್ನೂರು, ಅವರ ಪುತ್ರ ರಾಜು ಕುನ್ನೂರು ಕೈ ಹಿಡಿದಿದ್ದಾರೆ. ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಸಿಗಬಹುದು. ಕೊಳ್ಳೆಗಾಲ ಮಾಜಿ ಶಾಸಕ ನಂಜುಂಡಸ್ವಾಮಿ, ದೊಡ್ಡಬಳ್ಳಾಪುರ ಮಾಜಿ ಶಾಸಕ ಜೆ. ನರಸಿಂಹಸ್ವಾಮಿ ಹಾಗೂ ವಿಜಯಪುರ ಮಾಜಿ ಶಾಸಕ ಮನೋಹರ್ ಐನಾಪುರ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಜೆಡಿಎಸ್ ಮಾಜಿ ಶಾಸಕ ಗುಬ್ಬಿ ಶ್ರೀನಿವಾಸ್, ವಿಜಯಪುರದ ಮುದ್ದೇಬಿಹಾಳದ ಬಿಜೆಪಿ ಮುಖಂಡರಾದ ಶಾಂತಗೌಡ ಎಸ್ ಪಾಟೀಲ ನಡಹಳ್ಳಿ, ಕೂಡ್ಲಿಗಿ ಬಿಜೆಪಿ ಶಾಸಕ ಎನ್.ವೈ. ಗೋಪಾಲಕೃಷ್ಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಸದ್ಯವೇ ಕಾಂಗ್ರೆಸ್ ಸೇರಲಿದ್ದಾರೆ. ಗುರುಮಿಟ್ಕಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಬಾಬೂರಾವ್ ಚಿಂಚನ್ಸೂರ್ ಸಹ ಕೈ ಹಿಡಿದಿದ್ದಾರೆ.
ಆಕ್ರೋಶ: ಇನ್ನೊಂದೆಡೆ ಕಾಂಗ್ರೆಸ್ ನಾಯಕರಿಗೆ ಮೊದಲ ಪಟ್ಟಿಯಲ್ಲಿ ಘೋಷಣೆಯಾದ ಹೆಸರಿನ ವಿಚಾರದಲ್ಲೇ ಸಾಕಷ್ಟು ಕಿರಿ ಕಿರಿ ಎದುರಾಗುತ್ತಿದೆ. ಇತ್ತೀಚೆಗೆ ಸಿದ್ದರಾಮಯ್ಯ ಮನೆ ಮುಂದೆ ದಾಸರಹಳ್ಳಿಯಲ್ಲಿ ಧನಂಜಯ್ಗೆ ಟಿಕೆಟ್ ನೀಡುವುದು ಬೇಡ ಎಂದು ಕೆಲ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಯೋಗೇಶ್ಗೆ ಟಿಕೆಟ್ ನೀಡುವಂತೆ ಮೊಳಕಾಲ್ಮೂರು ಕ್ಷೇತ್ರದವರಿಂದ ಪ್ರತಿಭಟನೆ ನಡೆದಿದೆ.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಟಿಕೆಟ್ ಕೊಡದಿದ್ದರೆ, ನಮ್ಮೊಳಗೆ ಒಬ್ಬರನ್ನು ಕಣಕ್ಕಿಳಿಸುವುದು ನಿಶ್ಚಿತ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪಿ.ಎಚ್. ನೀರಲಕೇರಿ ಸುದ್ದಿಗೋಷ್ಠಿ ನಡೆಸಿ ಎಚ್ಚರಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ಟಿಕೆಟ್ ಬಯಸಿ ಒಟ್ಟು 11 ಜನ ಅರ್ಜಿ ಸಲ್ಲಿಸಿದ್ದು, ಇವರ ಬದಲು ಇತ್ತೀಚೆಗೆ ಪಕ್ಷ ಸೇರಿರುವ ಮೋಹನ್ ಲಿಂಬಿಕಾಯಿಗೆ ಟಿಕೆಟ್ ಕೊಟ್ಟರೆ ನಮ್ಮ ಮುಂದಿನ ತೀರ್ಮಾನ ಕೈಕೊಳ್ಳುತ್ತೇವೆ ಎಂದು ನಾಯಕರು ಎಚ್ಚರಿಸಿದ್ದಾರೆ.
ರಾಜ್ಯದ ವಿವಿಧೆಡೆ ಕಾಂಗ್ರೆಸ್ ಮೊದಲ ಪಟ್ಟಿ ಘೋಷಣೆ ನಂತರ ಅಸಮಾಧಾನ ಕೊಂಚ ಮಟ್ಟಿಗೆ ಹೊರಬಿದ್ದಿದೆ. ಆದರೆ ಎರಡನೇ ಪಟ್ಟಿ ಬಿಡುಗಡೆ ಆದರೆ ಇನ್ನಷ್ಟು ಅಸಮಾಧಾನ ಭುಗಿಲೇಳಲಿದೆ. ಈ ಮಧ್ಯೆ ರಾಹುಲ್ ಗಾಂಧಿ ಕೋಲಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅದೇ ವೇದಿಕೆ ಮೇಲೆ ಎರಡನೇ ಪಟ್ಟಿಯನ್ನೂ ಬಿಡುಗಡೆ ಮಾಡಿಸುವ ಸಿದ್ಧತೆಯಲ್ಲಿರುವ ಕಾಂಗ್ರೆಸ್ ನಾಯಕರಿಗೆ ಅಸಮಾಧಾನವೂ ಕೊಂಚ ತಲೆಬಿಸಿಯಾಗಿ ಕಾಡಿದೆ. ಇದರಿಂದಲೇ ಇದಕ್ಕೊಂದು ಪರಿಹಾರ ಹುಡುಕಿ ರಾಹುಲ್ ಗಾಂಧಿ ಇರುವ ವೇದಿಕೆಯಲ್ಲೇ ಪಟ್ಟಿ ಬಿಡುಗಡೆ ಮಾಡಿಸಿ, ಹೈಕಮಾಂಡ್ನಿಂದಲೇ ಪಟ್ಟಿ ಬಿಡುಗಡೆ ಆಗಿದೆ ಎಂದು ತೋರಿಸುವ ಯತ್ನವನ್ನು ರಾಜ್ಯ ಕಾಂಗ್ರೆಸ್ ನಾಯಕರು ಮಾಡಲು ಮುಂದಾಗಿದ್ದಾರೆ.
ಎರಡನೇ ಪಟ್ಟಿ ಕುರಿತು ಚರ್ಚೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪ್ರಕಾರ, ಎರಡನೇ ಪಟ್ಟಿ ಸಂಬಂಧ ಸ್ಕ್ರೀನಿಂಗ್ ಕಮಿಟಿ ಸಭೆ ಮುಗಿದಿದೆ. ಸಾಧ್ಯವಾದಷ್ಟು ಒಬ್ಬ ಅಭ್ಯರ್ಥಿಯನ್ನು ಅಂತಿಮಗೊಳಿಸಿ ಹೈಕಮಾಂಡ್ಗೆ ಪಟ್ಟಿ ಕಳುಹಿಸಲಾಗಿದೆ. ಮೊದಲ ವಾರದಲ್ಲೇ ಪಟ್ಟಿ ಪ್ರಕಟಿಸುವ ಗುರಿ ಹೊಂದಿದ್ದೇವೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ನಮ್ಮ ಪಟ್ಟಿ ಬಂದ ಬಳಿಕ ಪಟ್ಟಿ ಪ್ರಕಟಿಸುವ ಇರಾದೆ ಹೊಂದಿವೆ. ನಾವು ಈ ಸಾರಿ ಅಧಿಕಾರಕ್ಕೆ ಬರುವುದು ಖಚಿತ. ಇದರಿಂದ ನಮ್ಮ ನಾಯಕರು ಬೇಸರಗೊಂಡವರ ಮನವೊಲಿಸುತ್ತಾರೆ. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಯತ್ನಿಸಿದ ಎಲ್ಲರಿಗೂ ಮುಂದೆ ಅವಕಾಶ ಸಿಗಲಿದೆ ಎಂದಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ಕೋಲಾರ ಸಮಾವೇಶ ಏ. 9ಕ್ಕೆ ಮುಂದೂಡಿಕೆ: ಕೈ ನಾಯಕರಿಂದ ಪೂರ್ವಭಾವಿ ಸಭೆ