ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಜಯನಗರ 2ನೇ ಬ್ಲಾಕ್ನ 9ನೇ ಮುಖ್ಯ ರಸ್ತೆಗೆ ನಟಭೈರವ ವಿ ವಜ್ರಮುನಿ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಬಹುತೇಕ 15 ವರ್ಷಗಳ ಬಳಿಕ ಇದೀಗ ಸಾಕಾರಗೊಂಡಿದ್ದು, ಭಾನುವಾರ ರಸ್ತೆ ನಾಮಕರಣ ಕಾರ್ಯಕ್ರಮ ನಡೆಯಿತು.
2007ರಲ್ಲಿ ನಟಭೈರವ ವಜ್ರಮುನಿ ಸಾಂಸ್ಕೃತಿಕ ಹಾಗೂ ಕಲಾ ಸಂಘ ಹಾಗೂ ಸ್ಥಳೀಯ ಪ್ರತಿನಿಧಿಗಳು ರಸ್ತೆಗೆ ನಟ ವಜ್ರಮುನಿ ಹೆಸರು ಇಡುವಂತೆ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಆಗಿನ ಬಿಬಿಎಂಪಿ ಆಡಳಿತಾಧಿಕಾರಿ ದಿಲೀಪ್ ರಾವ್ ರಸ್ತೆಗೆ ಮರುನಾಮಕರಣದ ಪ್ರಸ್ತಾವನೆಗೆ ಅನುಮೋದನೆಯನ್ನೂ ನೀಡಿದ್ದರು. ಆದರೆ ಅದು ಇದುವರೆಗೂ ಸಾಕಾರಗೊಂಡಿರಲಿಲ್ಲ. ವಜ್ರಮುನಿಯವರ ಕುಟುಂಬಸ್ಥರು, ಅಭಿಮಾನಿಗಳ ನಿರಂತರ ಒತ್ತಡಕ್ಕೆ ಮಣಿದ ಬಿಬಿಎಂಪಿ ನಟಭೈರವ ವಿ ವಜ್ರಮುನಿ ರಸ್ತೆ ಎಂದು ಮರುನಾಮಕರಣ ಮಾಡಿದೆ.
ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ ತೆರೆ ಮೇಲೆ ಆರ್ಭಟಿಸಿ, ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೇ ಉಳಿದ ವಜ್ರಮುನಿ ಜಯನಗರದ ಕನಕನಪಾಳ್ಯದಲ್ಲಿ ಜನಿಸಿದ್ದರು. ಸದಾನಂದ ಸಾಗರ ಎಂಬ ಹೆಸರಿನ ಅವರು ಬಳಿಕ ಸಿನಿಮಾ ಲೋಕದಲ್ಲಿ ವಜ್ರಮುನಿಯಾಗಿ ಜನಪ್ರಿಯತೆ ಗಳಿಸಿದ್ದರು. ಅವರ ನಿಧನದ 15 ವರ್ಷದ ನಂತರ ಬೆಂಗಳೂರಿನ ರಸ್ತೆಗೆ ವಜ್ರಮುನಿ ರಸ್ತೆ ಎಂದು ನಾಮಕರಣ ಮಾಡುವ ಮೂಲಕ ದಿಗ್ಗಜ ನಟನಿಗೆ ಗೌರವ ಸಲ್ಲಿಸಲಾಗಿದೆ.
ರಸ್ತೆ ನಾಮಕರಣ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್. ಅಶೋಕ್, ಶಾಸಕ ಉದಯ ಗರುಡಾಚಾರ್, ಲಕ್ಷ್ಮೀ ವಜ್ರಮುನಿ, ಪುತ್ರ ಜಗದೀಶ್ ವಜ್ರಮುನಿ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
ಇದನ್ನೂ ಓದಿ: ಇಂಜಿನಿಯರಿಂಗ್ ವಿದ್ಯಾರ್ಥಿನಿಯರಿಂದ ಪೋಷಕರ ಪಾದಪೂಜೆ.. ಅಪ್ಪಾ ಕಾಲೇಜಿನಲ್ಲಿ ಮಮ್ಮಿ ಬದಲು 'ಅಮ್ಮ' ಪಾಠ