ಬೆಂಗಳೂರು: ಕಳಪೆ ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ ವಿತರಣೆ ಮಾಡಿದ್ದು ಕಂಡು ಬಂದರೆ, ಅಂಥವರ ಲೈಸನ್ಸ್ ರದ್ದು ಮಾಡಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ನಗರ ವ್ಯಾಪ್ತಿಯ ಸಭೆ ನಡೆಸಿದ್ದೇನೆ. ಲಾಕ್ ಡೌನ್ ನಿಂದಾಗಿ ಎಲ್ಲ ತರಕಾರಿಗಳ ಬೆಲೆ ಇಳಿದಿದೆ. ಬೆಳೆಯಲ್ಲೂ ಭಾರೀ ಕಡಿಮೆಯಾಗಿದೆ. ಹೂವು, ತರಕಾರಿ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಪಾಲಿ ಹೌಸ್ಗೆ ವಿಧಿಸುತ್ತಿರುವ ವಿದ್ಯುತ್ ಬಿಲ್ ಮನ್ನಾ ಮಾಡಲು ಬೇಡಿಕೆ ಬಂದಿದೆ. ಸಿಎಂ ಜತೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು, ಕಳಪೆ ಗುಣಮಟ್ಟ ಬೀಜ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ವಿಜಿಲೆನ್ಸ್ ಟೀಂ ಕಾರ್ಯನಿರ್ವಹಣೆ ಮಾಡಲಿದೆ. ಕಳಪೆ ರಾಸಾಯನಿಕ ವಸ್ತುಗಳು, ಬಿತ್ತನೆ ಬೀಜ ವಿತರಣೆ ಮಾಡಬಾರದು. ಒಂದು ವೇಳೆ ಸಿಕ್ಕಿ ಬಿದ್ದರೆ ಲೈಸನ್ಸ್ ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಲಾಕ್ ಡೌನ್ ನಂತರ ಬೆಂಗಳೂರು ನಗರ ರೈತರಿಗೆ 259 ಕೋಟಿ ನಷ್ಟವಾಗಿದೆ. ರೈತರು ಬೆಳೆದ ಬೆಳೆ ಮಾರಲು ಮಾರುಕಟ್ಟೆಗಳಲ್ಲಿ ಸೂಕ್ತ ವ್ಯವಸ್ಥೆ ಮಾಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಪ್ರಕೃತಿ ವಿಕೋಪದಿಂದಾಗಿ ರೈತರಿಗೆ ಆಗಿರುವ ನಷ್ಟದ ವಿಚಾರ ಸಂಬಂಧ ಮುಖ್ಯಮಂತ್ರಿಗಳಿಗೆ ವರದಿ ನೀಡಲಾಗಿದೆ. ಈ ಬಗ್ಗೆ ಸಿಎಂ ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ. ನಮ್ಮ ಮೊದಲ ಬೇಡಿಕೆಯಂತೆ ಆಲಿಕಲ್ಲು ಮಳೆಯಿಂದ ಬೆಳೆ ನಷ್ಟಕ್ಕೆ ವಿಪತ್ತು ಪರಿಹಾರ ನಿಧಿಯಿಂದ ಸಿಎಂ 45 ಕೋಟಿ ಬಿಡುಗಡೆ ಮಾಡಿದ್ದಾರೆ. ಲಾಕ್ ಡೌನ್ ನಂತರ ಕೃಷಿ ಇಲಾಖೆಯಲ್ಲಿ ಕೆಲಸದ ಒತ್ತಡ ಹೆಚ್ಚಾಗಿದ್ದು, ಬೇರೆ ಇಲಾಖೆಗೆ ನಿಯೋಜನೆಗೊಂಡ ಅಧಿಕಾರಿಗಳನ್ನು ಮರಳಿ ಕೃಷಿ ಇಲಾಖೆಗೆ ಕರೆಸಿಕೊಳ್ಳಲಾಗುತ್ತದೆ. ನಮಗೂ ಅಧಿಕಾರಿಗಳ ಕೊರತೆ ಇದೆ ಹೀಗಾಗಿ ಮಾತೃ ಇಲಾಖೆಗೆ ನಮ್ಮ ಅಧಿಕಾರಿಗಳನ್ನ ವಾಪಸ್ ಕರೆಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.