ಬೆಂಗಳೂರು: ನಗರದಲ್ಲಿ ಮಳೆಯಿಂದ ಭಾರಿ ಅನಾಹುತ ಉಂಟಾದ ಹಿನ್ನೆಲೆ ಬರೋಬ್ಬರಿ 60 ಮರಗಳಿಗೆ ಕೊಡಲಿ ಹಾಕಲು ಪಾಲಿಕೆ ಮುಂದಾಗಿದೆ. ಸತತವಾಗಿ ಸುರಿದ ಮಳೆಯಿಂದ ಕಂಗೆಟ್ಟಿರುವ ನಗರದ ನ್ಯೂ ಬಿಇಎಲ್ ರಸ್ತೆಯ ಡಾಲರ್ಸ್ ಕಾಲೋನಿಯ ರಾಜಕಾಲುವೆಯನ್ನು ಅಗಲಗೊಳಿಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಸುಮಾರು 60 ಮರಗಳನ್ನು ಧರೆಗುರುಳಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಿವಾಸಿಗಳು ಬಿಬಿಎಂಪಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಈ ಕಾಲೋನಿಯಲ್ಲಿ ಕೊಳಚೆ ನೀರಿನಿಂದ ಗಬ್ಬು ವಾಸನೆ ಬರುತ್ತಿದೆ. ಈಗಲೂ ಈ ಭಾಗದಲ್ಲಿ ಕೊಳಚೆ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಮರ ಕಡಿಯುವುದು ಅನಿವಾರ್ಯ: ಬಿಬಿಎಂಪಿ ಅಧಿಕಾರಿಗಳು ಪಕ್ಕದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕಚೇರಿಯ ಸಮೀಪದ ಮಳೆನೀರು ಚರಂಡಿಯನ್ನು ವಿಸ್ತರಿಸಲು ಮುಂದಾಗಿದ್ದೇವೆ. ಇಲ್ಲಿನ ಸಮಸ್ಯೆ ಬಗೆಹರಿಸಬೇಕಾದರೆ ಚರಂಡಿ ಮೇಲೆಲ್ಲ ಆವರಿಸಿರುವ ದಟ್ಟವಾದ ಅನೇಕ ಮರಗಳ ಪೈಕಿ ಕನಿಷ್ಠ 60 ಮರಗಳನ್ನು ತೆರವು ಮಾಡಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪುನಃ ಗರ್ಜಿಸಿದ ಜೆಸಿಬಿಗಳು: 5 ಕಡೆ ಯಶಸ್ವಿ ತೆರವು ಕಾರ್ಯಾಚರಣೆ ನಡೆಸಿದ ಪಾಲಿಕೆ
ಕೆಲ ನಿವಾಸಿಗಳ ವಿರೋಧ: ಬಿಬಿಎಂಪಿಯು ಯೋಜನೆಗಾಗಿ ಅಲ್ಲಿನ ಮರಗಳನ್ನು ಕಡಿಯಲು ಬಿಡುವುದಿಲ್ಲ ಎಂದು ಕೆಲ ನಿವಾಸಿಗಳು ತಿಳಿಸಿದ್ದಾರೆ. ವಿವಾದದ ಬೆನ್ನಲ್ಲೇ ಇಲ್ಲಿನ ಮರಗಳನ್ನು ಕಡಿಯದೇ ಬೇರೆಡೆ ಸ್ಥಳಾಂತರಿಸಲು ಬಿಬಿಎಂಪಿಯು ಅರಣ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಬಿಬಿಎಂಪಿ ಒಳಚರಂಡಿ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.