ಬೆಂಗಳೂರು: ಶಿವಾಜಿನಗರದಲ್ಲಿ 44 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಈ ಮಧ್ಯೆ ಇಲ್ಲಿ ಯಾವುದೇ ಸುರಕ್ಷಿತ ಸೌಲಭ್ಯಗಳಿಲ್ಲದೆ ಪೌರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ದೃಶ್ಯಗಳು ಈಟಿವಿ ಭಾರತಕ್ಕೆ ಲಭ್ಯವಾಗಿವೆ.
ಶಿವಾಜಿನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ವಲಯ ಕಂಟೇನ್ಮೆಂಟ್ ಝೋನ್ ಆಗಿ ಹದಿನೈದು ದಿನ ಕಳೆದಿದೆ. ಇಲ್ಲಿಯವರೆಗೂ ಈ ವಲಯದಲ್ಲಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರ ಸುರಕ್ಷತೆಗೆ ಕನಿಷ್ಠ ಸೌಲಭ್ಯ ನೀಡದೆ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ.
ಕಂಟೈನ್ಮೆಂಟ್ ಝೋನ್ನಲ್ಲಿರುವ ಪ್ರತಿ ಮನೆಗಳಿಗೆ ಹೋಗಿ ಇವರು ಸಾರ್ವಜನಿಕರು ಕೊಡುವ ಕಸವನ್ನು ಬರಿಗೈಯಲ್ಲಿ ತೆಗೆದುಕೊಂಡು ಬರುತ್ತಿದ್ದಾರೆ. ಅಲ್ಲಿದೆ ಅಲ್ಲಿ ಬಿದ್ದಿರುವ ಕಸದ ರಾಶಿ, ಬ್ಲಾಕ್ಸ್ಪಾಟ್ನಲ್ಲಿ ಕೂಡಾ ಪಿಪಿಇ ಕಿಟ್ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ತಾವು ಅನುಭವಿಸುತ್ತಿರುವ ಸಮಸ್ಯೆಗನ್ನು ಹೇಳಿಕೊಳ್ಳಲಾಗದೆ ಪೌರಕಾರ್ಮಿಕರು ಒದ್ದಾಡುತ್ತಿದ್ದು, ಈ ಕುರಿತು ದೂರು ನೀಡದೆ ಕೆಲಸ ಮಾಡುವಂತೆ ಸ್ಥಳೀಯ ಆರೋಗ್ಯಾಧಿಕಾರಿಗಳು ಇವರ ಮೇಲೆ ಒತ್ತಡ ಹೇರುತ್ತಿದ್ದಾರೆ.
![BBMP not given PPP Kit to Civil Workers at Bangalore](https://etvbharatimages.akamaized.net/etvbharat/prod-images/kn-bng-01-shivajinagar-pk-prblm-exlusive-7202707_18052020101909_1805f_1589777349_508.jpg)
ಗ್ಲೌಸ್, ಮಾಸ್ಕ್, ಕಿಟ್ ಕೊಡದೆ ನಮ್ಮ ಬಳಿ ಕೆಲಸ ಮಾಡಿಸುತ್ತಿದ್ದಾರೆ. ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಈ ಜಾಗಕ್ಕೆ ಬಂದು ಕೆಲಸ ಮಾಡುವುದಕ್ಕೆ ನಮಗೆ ಭಯವಾಗುತ್ತಿದೆ. ಆದರೂ ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದೇವೆ. ಸ್ಥಳಕ್ಕೆ ಯಾವುದೇ ಹೆಲ್ತ್ ಇನ್ಸ್ಪೆಕ್ಟರ್ ಸ್ಥಳಕ್ಕೆ ಬಂದು ಸಮಸ್ಯೆ ಕೇಳುತ್ತಿಲ್ಲ. ನಾವು ಕೆಲಸ ಮಾಡದಿದ್ದರೆ ಮೇಸ್ತ್ರಿಗಳು ರಜೆ ಹಾಕಿ ಕೆಲಸದಿಂದ ತೆಗೆದು ಹಾಕುತ್ತೇವೆಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಪೌರ ಕಾರ್ಮಿಕರು ಈಟಿವಿ ಭಾರತದೊಂದಿಗೆ ಅಳಲನ್ನು ತೋಡಿಕೊಂಡರು.
![BBMP not given PPP Kit to Civil Workers at Bangalore](https://etvbharatimages.akamaized.net/etvbharat/prod-images/kn-bng-01-shivajinagar-pk-prblm-exlusive-7202707_18052020101909_1805f_1589777349_38.jpg)
ಈ ವಾರ್ಡ್ನ ಸ್ಥಳೀಯ ಆರೋಗ್ಯಾಧಿಕಾರಿಯಾಗಿರುವ ವೆಂಕಟೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಾರನಾಥ್ ಇತ್ತ ಕಡೆ ಮುಖವೇ ಹಾಕಿಲ್ಲ. ಎಲ್ಲಾ ಸೌಲಭ್ಯ ಕೊಡಲು ಬಿಲ್ ಮಾಡಿಸಿಕೊಂಡರೂ ಸುರಕ್ಷತಾ ಕಿಟ್ಗಳು ಇನ್ನೂ ತಲುಪಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಪೂರ್ವ ವಿಭಾಗದ ಜಂಟಿ ಆಯುಕ್ತರಾದ ಪಲ್ಲವಿಯವರನ್ನು ಕೇಳಿದರೆ, ಕಂಟೇನ್ಮೆಂಟ್ ಝೋನ್ಗೆ ಪಿಪಿಇ ಕಿಟ್ ಇಲ್ಲದೆ ಪ್ರವೇಶಿಸಬೇಡಿ ಎಂದು ಹೇಳಲಾಗಿದೆ. ಪಿಪಿಇ ಕಿಟ್ ಕೊಟ್ಟಿಲ್ಲದಿದ್ದರೆ ಇದು ತಪ್ಪು, ನಿಯಮ ಉಲ್ಲಂಘನೆಯಾಗುತ್ತದೆ ಎಂದು ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್ ಅವರು ಹೇಳುತ್ತಿದ್ದಾರೆ.