ಆನೇಕಲ್: ದೇಶಾದ್ಯಂತ ಕೊರೊನಾ ಎರಡನೇ ಅಲೆ ಅತಿ ವೇಗದಲ್ಲಿ ಹಬ್ಬುತ್ತಿರುವ ಸಂದರ್ಭದಲ್ಲಿ ಬೆಂಗಳೂರು-ಹೊಸೂರು ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಮಾತ್ರ ಆಡಳಿತ ಮಂಡಳಿಯ ದಿವ್ಯ ನಿರ್ಲಕ್ಷ್ಯದಿಂದ ದಿನದಿಂದ ದಿನಕ್ಕೆ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಕಳೆದ ಎರಡು ದಿನಗಳಲ್ಲಿ ಅತ್ತಿಬೆಲೆಯ ಕಾಲೇಜಿನಲ್ಲಿ ಕೊರೊನಾದಿಂದ ಸುಮಾರು 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸರಿಯಾದ ರೀತಿಯಲ್ಲಿ ರೋಗಿಗಳಿಗೆ ಚಿಕಿತ್ಸೆಯನ್ನು ಅವರು ನೀಡುತ್ತಿಲ್ಲ ಎಂಬುದು ರೋಗಿಗಳ ಕುಟುಂಬಸ್ಥರ ಆರೋಪವಾಗಿದೆ. ಜೊತೆಗೆ ಈಗಾಗಲೇ ಕೊರೊನಾ ರೋಗಿಗಳ ಮೊಬೈಲ್ ಫೋನ್ ಇದ್ದಕ್ಕಿದ್ದ ಹಾಗೆ ಸ್ವಿಚ್ ಆಫ್ ಆಗುತ್ತದೆ. ಜೊತೆಗೆ ರೋಗಿಗಳ ಜೊತೆ ಮೊಬೈಲ್ ಫೋನ್ನಲ್ಲಿ ಮಾತನಾಡಲು ಸಹ ಸಾಧ್ಯವಾಗದೆ ಆಸ್ಪತ್ರೆಯ ಮುಂಭಾಗದಲ್ಲಿ ಸಂಬಂಧಿಕರು ಬೀಡುಬಿಟ್ಟಿರುವ ದೃಶ್ಯಗಳು ಸಹ ಕಂಡುಬರುತ್ತಿವೆ.
ಇದೆಲ್ಲದಕ್ಕೂ ಕಾರಣ ಆಸ್ಪತ್ರೆಯ ಆಡಳಿತ ಮಂಡಳಿಯ ವೈಫಲ್ಯವೇ ಎಂದು ಆರೋಪ ಮಾಡುತ್ತಿದ್ದಾರೆ ರೋಗಿಗಳ ಸಂಬಂಧಿಕರು. ಇಷ್ಟೆಲ್ಲಾ ನಡೆಯುತ್ತಿದ್ದರೂ ಸಹ ತಹಶೀಲ್ದಾರ್ ದಿನೇಶ್ ಹಾಗೂ ವೈದ್ಯಾಧಿಕಾರಿ ಇದುವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎನ್ನಲಾಗಿದೆ.