ಬೆಂಗಳೂರು: ನಗರದಲ್ಲಿಂದು ಕೊರೊನಾ ಸೋಂಕಿಗೆ ಆಗ ತಾನೇ ಜನಿಸಿದ ಹಸುಗೂಸು ಬಲಿಯಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದೊಡ್ಡಬಳ್ಳಾಪುರ ಮೂಲದ ದಂಪತಿಗೆ ಜನಿಸಿದ್ದ ಮಗು ಹುಟ್ಟಿದ ನಾಲ್ಕು ಗಂಟೆಗಳಲ್ಲೇ ಮೃತಪಟ್ಟಿದೆ.
ನವಜಾತ ಶಿಶುವಿಗೆ ಮಹಾಮಾರಿ ಕೋವಿಡ್ ಸೋಂಕು ತಗುಲಿದ ಕಾರಣ ಮೃತದೇಹವನ್ನು ಆಂಬ್ಯುಲೆನ್ಸ್ ಸಿಬ್ಬಂದಿಯೇ ಜೆ.ಜೆ. ಆರ್ ನಗರದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು.
ಮಗುವಿನ ತಾಯಿಗೆ ಕೊರೊನಾ ಪಾಸಿಟಿವ್ ಇದ್ದು, ಅದು ಮಗುವಿಗೂ ಹರಡಿದೆ. ತಂದೆ ಕೂಡ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಶಾಸಕ ಜಮೀರ್ ಸೂಚನೆ ಮೇರೆಗೆ ಅವರ ಕಾರ್ಯಕರ್ತರು, ಆ್ಯಂಬುಲೆನ್ಸ್ ಸಿಬ್ಬಂದಿಯೇ ಸೇರಿ ಅಂತ್ಯ ಸಂಸ್ಕಾರ ನೆರವೇರಿಸಿದರು.