ಬೆಂಗಳೂರು: ದೇಶಾದ್ಯಂತ ಲಾಕ್ಡೌನ್ ಮೇ 3ರವರೆಗೆ ವಿಸ್ತರಿಸಿದ್ದು, ತೆರವಿನ ಬಳಿಕ ಸಾರಿಗೆ ಸಂಸ್ಥೆಯ ಬಸ್ಗಳು ಬ್ರೇಕ್ ಡೌನ್ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚಾಗಿದೆ.
![KSRTC buses](https://etvbharatimages.akamaized.net/etvbharat/prod-images/kn-bng-05-lockdown-after-breakdown-story-video-9020923_14042020184959_1404f_02677_370.jpg)
ರಾಜ್ಯ ರಸ್ತೆ ಸಾರಿಗೆ ನಿಗಮದ 4 ವಿಭಾಗಗಳಿಂದ 25 ಸಾವಿರದಷ್ಟು ಬಸ್ಗಳಿದ್ದು, ಸದ್ಯ ಬಿಎಂಟಿಸಿಯ ಬೆರಳೆಣಿಕೆಯಷ್ಟು ಬಸ್ ಹೊರತುಪಡಿಸಿದರೆ ಉಳಿದೆಲ್ಲಾ ಬಸ್ಗಳು ನಿಲ್ದಾಣ ಹಾಗೂ ಘಟಕಗಳಲ್ಲಿ ನಿಂತಿವೆ. ಸಾಮಾನ್ಯ ಚಾಲನೆಯಲ್ಲಿರುವ ವಾಹನ ಕೆಲಕಾಲ ನಿಂತರೆ ಅದು ವಿವಿಧ ರೀತಿಯ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತದೆ.
ನೂರಾರು ಕಿ.ಮೀ. ಸಂಚರಿಸುವ ಬಸ್ಗಳು ಏಕಾಏಕಿ ನಿಂತಿರುವ ಹಿನ್ನೆಲೆ ಯಾವ ರೀತಿಯ ಸಮಸ್ಯೆಗಳು ಮುಂದೆ ಎದುರಿಸುತ್ತವೆಯೋ ಎಂಬ ಆತಂಕ ಕೆಎಸ್ಆರ್ಟಿಸಿ ಅಧಿಕಾರಿಗಳನ್ನು ಕಾಡುತ್ತಿದೆ. ಸಾಮಾನ್ಯವಾಗಿ ಬಸ್ಅನ್ನ ಕನಿಷ್ಠ 4 ಲಕ್ಷ ಕಿ.ಮೀ. ಓಡಿಸುವ ಕಾರ್ಯವನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೊದಲಿನಿಂದಲೂ ರೂಢಿಸಿಕೊಂಡಿದೆ.
ಎಲ್ಲಾ ಸರಿ ಇರುವ ಸಂದರ್ಭದಲ್ಲಿಯೇ ಆಗಾಗ ಬಸ್ಗಳು ಕೆಟ್ಟು ಮಾರ್ಗ ಮಧ್ಯೆ ನಿಲ್ಲುವುದನ್ನು ಸಾಕಷ್ಟು ಕಡೆ ಕಂಡಿದ್ದೇವೆ. ಇದೀಗ ತಿಂಗಳಿಂದ ಘಟಕದಲ್ಲಿ ನಿಂತಿರುವ ಬಸ್ಗಳು ಸಹಜವಾಗಿಯೇ ಲಾಕ್ಡೌನ್ ತೆರವಿನ ನಂತರ ಸಮಸ್ಯೆಗಳನ್ನು ಎದುರಿಸಲಿವೆ ಎಂದು ಆಟೋ ಮೊಬೈಲ್ ವಿಭಾಗದ ತಜ್ಞರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೇ 4ರಿಂದ ಸಂಚಾರ ಆರಂಭಿಸಿದರೂ ಸಾಕಷ್ಟು ಕಡೆ ಹಾಳಾಗಿ ನಿಲ್ಲುವ ಆತಂಕ ಇದೆ. ಒಂದೆರಡು ವಾಹನಗಳಿದ್ದರೆ ಅದನ್ನು ಹೇಗೋ ನಿಭಾಯಿಸಬಹುದು. ಒಂದೊಂದು ಘಟಕ ಹಾಗೂ ನಿಲ್ದಾಣಗಳಲ್ಲಿ ನೂರಾರು ಬಸ್ಗಳು ನಿಂತಿವೆ. ಇವನ್ನು ದಿನಕ್ಕೊಮ್ಮೆ ಆನ್ ಮಾಡಿ, ಇಲ್ಲವೇ ಚಾಲನೆ ಮಾಡಿ ಪರೀಕ್ಷಿಸುವುದು ಸಾಧ್ಯವಾಗುವ ಮಾತಲ್ಲ. ಮೇ 4ರ ನಂತರ ಒಮ್ಮೆಲೇ ಬಸ್ಗಳು ರಸ್ತೆಗಿಳಿಯಲು ಮುಂದಾದರೆ ಸಾಕಷ್ಟು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
‘ಸೂಕ್ತ ಪರಿಶೀಲನೆ ಮಾಡುತ್ತಿದ್ದೇವೆ. ಆದರೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೆಕ್ಯಾನಿಕ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯಂತೆ, ನಾವು ಸಂಸ್ಥೆಯ ಘಟಕಗಳಲ್ಲಿ ಕೆಲ ಸಿಬ್ಬಂದಿ ಕಾರ್ಯನಿರ್ವಹಣೆಯನ್ನು ಜಾರಿಯಲ್ಲಿಟ್ಟಿದ್ದೇವೆ. ನಿಂತ ವಾಹನಗಳ ನಿರಂತರ ತಪಾಸಣೆ ಹಾಗೂ ಅವುಗಳ ಕಾರ್ಯದಕ್ಷತೆಯ ಪರಿಶೀಲನೆ ನಡೆಸುತ್ತಿದ್ದೇವೆ. ಲಾಕ್ಡೌನ್ ತೆರವಿನ ನಂತರ ಕೆಲವೆಡೆ ಬಸ್ಗಳು ಬ್ರೇಕ್ ಡೌನ್ ಆಗುವ ಸಾಧ್ಯತೆಯನ್ನು ಸಂಪೂರ್ಣವಾಗಿ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ನಾವು ಇದರ ನಿರ್ವಹಣೆಗೆ ಸೂಕ್ತ ಸಿಬ್ಬಂದಿಯನ್ನು ಹೊಂದಿದ್ದು, ಪ್ರಯಾಣಿಕರಿಗೆ ಸಂಸ್ಥೆಯಿಂದ ಯಾವುದೇ ತೊಂದರೆ ಹಾಗೂ ಅಡೆತಡೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಕೆಎಸ್ಆರ್ಟಿಸಿ ಮೇಲಾಧಿಕಾರಿಯೊಬ್ಬರು ತಿಳಿಸಿದ್ದಾರೆ.