ಬೆಂಗಳೂರು: ಕೊರೊನಾ ಸೋಂಕಿನಿಂದ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸುವ ನಿಟ್ಟಿನಲ್ಲಿ ಅವರಿಗೆ ಮಾಸ್ಕ್, ಸ್ಯಾನಿಟೈಸರ್ಗಳನ್ನು ಸಾಕಷ್ಟು ಪ್ರಮಾಣದಲ್ಲಿ ವಿತರಿಸುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ರಾಜ್ಯಾದ್ಯಂತ ಲಾಕ್ ಡೌನ್ ಇರುವ ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯು ಕಾಡ್ಗಿಚ್ಚು, ಕಳ್ಳಬೇಟೆ, ಅರಣ್ಯ ಪ್ರದೇಶಗಳ ಒತ್ತುವರಿಗಳನ್ನು ತಡೆಗಟ್ಟುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದು, ಇಂತಹ ಸಂಕಷ್ಟಕರ ಪರಿಸ್ಥಿತಿಯಲ್ಲೂ ಅರಣ್ಯ ಸಂಪತ್ತನ್ನು ರಕ್ಷಿಸುವಲ್ಲಿ ಇಲಾಖೆಯ ಅಧಿಕಾರಿ/ಸಿಬ್ಬಂದಿ ಜವಾಬ್ದಾರಿಯುತವಾಗಿ ಸಹಕರಿಸುತ್ತಿರುವುದು ಇಲಾಖೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಶ್ಲಾಘಿಸಿದ್ದಾರೆ.
![Action taken by Forest Department not to spread corona](https://etvbharatimages.akamaized.net/etvbharat/prod-images/kn-bng-08-protection-for-forest-staff-script-9024736_01042020205814_0104f_1585754894_486.jpg)
ಕ್ಷೇತ್ರದ ಸಿಬ್ಬಂದಿ ನಿರಂತರವಾಗಿ ಪಾಳಿ ಮೇಲೆ ಗಸ್ತು ತಿರುಗುತ್ತಿದ್ದು, ಕೊರೊನಾ ಸೋಂಕು ತಗುಲದಂತೆಯೂ ಎಚ್ಚರಿಕೆ ವಹಿಸುತ್ತಿದ್ದಾರೆ. ಕೆಲವು ಸೂಕ್ಷ್ಮ ವನ್ಯಪ್ರದೇಶಗಳಲ್ಲಿ ಗನ್ ಸಮೇತ ಅರಣ್ಯಕ್ಕೆ ಪ್ರವೇಶಿಸುತ್ತಿರುವುದನ್ನು ಗಮನಿಸಿ, ಅಂತಹವರನ್ನು ಹಿಡಿದು ಕಾನೂನು ರೀತಿ ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿದೆ. ಹಾಗೇ ಒತ್ತುವರಿ ಪ್ರಕರಣಗಳನ್ನು ಸಹ ದಾಖಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಅರಣ್ಯ ಪ್ರದೇಶಗಳ ಒತ್ತುವರಿಗಳನ್ನು ಗುರುತಿಸಲು ಇಲಾಖೆಯು ಹೊಸ ತಂತ್ರಜ್ಞಾನವನ್ನು ಬಳಸುತ್ತಿದ್ದು, ಈ ತಂತ್ರಜ್ಞಾನದಿಂದ ಬಾಹ್ಯಾಕಾಶ ಚಿತ್ರಗಳು, ಜಿಪಿಎಸ್ (ಅಕ್ಷಾಂಶ, ರೇಖಾಂಶ) ಸಮೇತ 10 ಸ್ಕ್ವ.ಮೀ ವರೆಗೂ ಒತ್ತುವರಿ ಪ್ರದೇಶವನ್ನು 15 ದಿನಗಳಿಗೊಮ್ಮೆ ಗುರುತಿಸಲಾಗುತ್ತಿದೆ. ಲಾಕ್ ಡೌನ್ ಸಮಯದಲ್ಲಿ ಇದು ಹೊಸದಾಗಿ ಒತ್ತುವರಿಯಾದ ಪ್ರದೇಶಗಳನ್ನು ಗುರುತಿಸಿ ಮಾಹಿತಿ ನೀಡುತ್ತದೆ. ಅರಣ್ಯದಲ್ಲಿ ಬೆಂಕಿ ನಿಯಂತ್ರಿಸಲು ವೀಕ್ಷಣಾ ಗೋಪುರ ಮತ್ತು ಕ್ಷೇತ್ರ ಸಿಬ್ಬಂದಿ ತಂಡ ರಚಿಸಿದ್ದು, ಸದರಿ ತಂಡಗಳು ನಿರಂತರವಾಗಿ ರಾತ್ರಿ, ಹಗಲು ಗಸ್ತು ತಿರುಗುತ್ತಿರುತ್ತಾರೆ. ಹಾಗೆಯೇ
ಬೆಂಕಿ ಬಿದ್ದ ತಕ್ಷಣ ತುರ್ತು ಕ್ರಮಗಳನ್ನು ಕೈಗೊಂಡು ಬೆಂಕಿ ನಿಯಂತ್ರಿಸುತ್ತಿದ್ದಾರೆ. ಅದೇ ರೀತಿ ಕಳ್ಳಬೇಟೆ ಮತ್ತು ಮರಗಳ ಕಳ್ಳ ಸಾಗಾಣೆಕೆಯನ್ನು ತಡೆಯುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಡಿಸೆಂಬರ್ ನಲ್ಲಿ ಬೆಂಕಿ ನಿಯಂತ್ರಿಸುವ ಕುರಿತು ತರಬೇತಿಗಳನ್ನು ನೀಡಿ ಅವಶ್ಯಕ ಸಲಕರಣೆಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅರಣ್ಯದಲ್ಲಿ ಬೆಂಕಿ ಬೀಳುವ ಪ್ರದೇಶಗಳನ್ನು ಜಿಪಿಎಸ್ ಸಮೇತ ತಿಳಿದುಕೊಳ್ಳುವ ಸಲುವಾಗಿ ಅರಣ್ಯ ಇಲಾಖೆಯ ಐ.ಸಿ.ಟಿ. ಘಟಕವು ಕೆಎಸ್ಆರ್ಎಸ್ಎಸಿಯೊಂದಿಗೆ ತಂತ್ರಾಂಶವನ್ನು ತಯಾರಿಸಿದ್ದು, ಬೆಂಕಿ ಬಿದ್ದ ಮಾಹಿತಿ ಉಪವಲಯ ಅರಣ್ಯಾಧಿಕಾರಿಯಿಂದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿವರೆಗೂ ಕ್ಷೇತ್ರಗಳ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೂ ಎಸ್.ಎಂ.ಎಸ್ ಮುಖಾಂತರ ಅಲರ್ಟ್ (ಎಚ್ಚರಿಕೆ ಸಂದೇಶ) ಬರುತ್ತದೆ. ಇದರಿಂದ ಸಿಬ್ಬಂದಿಗಳು ತಕ್ಷಣ ಕಾರ್ಯ ಪ್ರವೃತ್ತರಾಗಿ ಬೆಂಕಿಬಿದ್ದ ಸ್ಥಳಕ್ಕೆ ತೆರಳಿ ಬೆಂಕಿ ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಮಾರ್ಚ್ 21 ರಿಂದ ಮಾರ್ಚ್ 31ರವರೆಗೆ 1,777 ಬೆಂಕಿ ಸ್ಥಳಗಳನ್ನು ಗುರುತಿಸಿದ್ದು, ಅದೇ ದಿನ ನಂದಿಸುವ ಕೆಲಸ ಮಾಡಲಾಗಿದೆ. ರಾಜ್ಯ ಸರ್ಕಾರ ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ನ್ನು ಬೆಂಕಿ ನಿಯಂತ್ರಿಸುವ ಕಾರ್ಯಕ್ಕೆ ಸಹಕರಿಸಲು ಕೋರಿದ್ದು, ಅವರು ಒದಗಿಸುವ ಭರವಸೆಯನ್ನು ನೀಡಿದ್ದಾರೆ. ಕೇಂದ್ರ ಕಚೇರಿಯಲ್ಲಿರುವ ಅಧಿಕಾರಿಗಳು, ಎಲ್ಲಾ ವೃತ್ತಗಳ ನೋಡಲ್ ಅಧಿಕಾರಿಗಳಾದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಕಾಲ ಕಾಲಕ್ಕೆ ಅರಣ್ಯಗಳನ್ನು ರಕ್ಷಿಸುವ ಕಳ್ಳಬೇಟೆ ತಡೆಯುವ ಬೆಂಕಿ ನಿಯಂತ್ರಿಸುವ ಹಾಗೆ ಕೋವಿಡ್- 19 ರ ಕುರಿತು ಜಾಗೃತಿ ಮೂಡಿಸುವ ಕೆಲಸಗಳಿಗೆ ಸಲಹೆ ಸೂಚನೆಗಳನ್ನು ನೀಡಿ, ಕ್ಷೇತ್ರ ಮಟ್ಟದಲ್ಲಿ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.