ಬೆಂಗಳೂರು: ಯುದ್ದಪೀಡಿತ ಉಕ್ರೇನ್ನಲ್ಲಿ 695 ವಿದ್ಯಾರ್ಥಿಗಳು ಸಿಲುಕಿದ್ದು, ಸುಮಾರು 77 ಕನ್ನಡಿಗರು ಕರುನಾಡಿಗೆ ವಾಪಸಾಗಿದ್ದಾರೆ. ಈ ಸಂಬಂಧ ನೋಡಲ್ ಅಧಿಕಾರಿ ಮನೋಜ್ ರಾಜನ್ ಮಾತನಾಡಿದ್ದು, ನವೀನ್ ಸಾವಿನ ವಿಚಾರ ಬಂದ ನಂತರ ಕಾರ್ಯಾಚರಣೆ ಚುರುಕು ಮಾಡಲಾಗಿದೆ. 413 ಜನ ವಿದ್ಯಾರ್ಥಿಗಳ ಕುಟುಂಬದ ಜೊತೆ ಮಾತನಾಡಲಾಗಿದೆ. ಆಯಾ ಜಿಲ್ಲಾವಾರು ಅಧಿಕಾರಿಗಳು ಕುಟುಂಬಗಳ ಜೊತೆ ಮಾತನಾಡುತ್ತಿದ್ದಾರೆ. ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು.
ಕಾಲ್ ಸೆಂಟರ್ ಪ್ರಕಾರ 695 ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿದ್ದಾರೆ. ಈವರೆಗೆ 9 ಬ್ಯಾಚ್ವರೆಗೆ ಕನ್ನಡಿಗ ವಿದ್ಯಾರ್ಥಿಗಳು ಬಂದಿದ್ದಾರೆ. ಸಂಜೆ ಆರೂವರೆ ವೇಳೆಗೆ 8 ಜನ ವಿದ್ಯಾರ್ಥಿಗಳು ಬರಲಿದ್ದಾರೆ. ಮಧ್ಯಾಹ್ನದ ವೇಳೆಗೆ 6 ಜನ ಬಂದಿದ್ದಾರೆ. ಒಟ್ಟು 23 ಜನ ವಿದ್ಯಾರ್ಥಿಗಳು ಇಂದು ಬೆಂಗಳೂರಿಗೆ ಬರುವವರಿದ್ದಾರೆ. ವಿಮಾನ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕ ಸರ್ಕಾರದಿಂದ ಎರಡು ಹೆಲ್ಪ್ಡೆಸ್ಕ್ ತೆರೆದಿದ್ದೇವೆ. ಯಾವುದೇ ವಿದ್ಯಾರ್ಥಿಯ ಕುಟುಂಬದವರು ದೆಹಲಿ, ಮುಂಬೈ ಹೋಗುವ ಅವಶ್ಯಕತೆ ಇಲ್ಲ. ಬೆಂಗಳೂರಿಗೆ ಅವರನ್ನು ಕರೆತರುವ ತನಕ ನಾವು ವ್ಯವಸ್ಥೆ ಮಾಡಿದ್ದೇವೆ. ಯಾವುದೇ ಒಂದು ರೂಪಾಯಿ ಖರ್ಚು ಮಾಡುವ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾವೇ ಎಲ್ಲಾ ಖರ್ಚನ್ನು ನೋಡಿಕೊಳ್ಳುತ್ತಾ ಇದ್ದೇವೆ. ನವೀನ್ ಸ್ನೇಹಿತರನ್ನು ಕೂಡ ನಾನು ಸಂಪರ್ಕ ಮಾಡಿದ್ದೇನೆ. ದಿನಸಿ ತರಲು ನವೀನ್ ಹೊರ ಹೋಗಿದ್ದರು. ಆಗ ದುಡ್ಡಿಲ್ಲ ಅಂತ ಹೇಳಿದರು. ಆಗ ಶೆಲ್ ದಾಳಿ ನಡೆದಿದೆ ಎಂದಿದ್ದಾರೆ. ಇನ್ನೊಬ್ಬರಿಗೆ ಗಾಯ ಆಗಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದರು.
ಸಚಿವಾಲಯ ನವೀನ್ ದೇಹವನ್ನು ಇಲ್ಲಿಗೆ ತರುವ ಕುರಿತು ಪ್ರಯತ್ನ ಮಾಡ್ತಾ ಇದೆ. ಬಾರ್ಡರ್ಗೆ ಬಂದಿದ್ದೇವೆ ಅಂತ ಅನೇಕ ಹುಡುಗರು ಹೇಳ್ತಾ ಇದ್ದಾರೆ. ಅವರಿಗೆ ನಾನು ಎಂಬಸ್ಸಿ ಜೊತೆ ಮಾತನಾಡುವ ಕುರಿತು ಹೇಳಿದ್ದೇನೆ. ತುಂಬಾ ಹುಷಾರಾಗಿ ಇರಿ, ಎಲ್ಲೆಲ್ಲೋ ಓಡಾಡಬೇಡಿ. ಎಂಬಸ್ಸಿ ಸಂಪರ್ಕದಲ್ಲಿ ಇರಿ ಎಂದು ಹೇಳಿದ್ದೇವೆ. ಆದಷ್ಟು ಬೇಗ ಕನ್ನಡಿಗರನ್ನು ಕರೆ ತರುವ ಪ್ರಯತ್ನ ಆಗ್ತಾ ಇದೆ ಎಂದು ಹೇಳಿದರು.
ಓದಿ: 'ನವೀನ್ ಸಾವಿನ ನೆಪದಲ್ಲಿ ಜಾತಿ, ಮೀಸಲಾತಿ ವ್ಯವಸ್ಥೆ ಬಗ್ಗೆ ಮಾತನಾಡುವುದು ಅನುಚಿತ'