ನೆಲಮಂಗಲ: ಪ್ರವಾಸಕ್ಕೆಂದು ತೆರಳುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡು ಚಲಿಸುತ್ತಿದ್ದ ಕಾರು ಸುಟ್ಟು ಕರಕಲಾಗಿರುವ ಘಟನೆ ನೆಲಮಂಗಲದ ಕುಣಿಗಲ್ ಬಳಿಯ ಹೆದ್ದಾರಿಯಲ್ಲಿ ನಡೆದಿದೆ.
ಶಿವಮೊಗ್ಗ ಮೂಲದ ಶ್ರೀಧರ್ ಎಂಬುವರ ಇಡೀ ಕುಟುಂಬ ತಮ್ಮ ಫೋರ್ಡ್ ಫಿಯಾಸ್ಟ್ ಕಾರಿನಲ್ಲಿ ಪ್ರವಾಸಕ್ಕೆಂದು ತೆರಳಿದ್ದರು. ಸಕಲೇಶಪುರ ಪ್ರವಾಸ ಮುಗಿಸಿಕೊಂಡು ಬೆಂಗಳೂರಿನತ್ತ ಪ್ರಯಾಣ ಬೆಳಸಿದ್ದರು. ಬೆಂಗಳೂರು- ಮಂಗಳೂರು ರಸ್ತೆಯಲ್ಲಿ ಬರುವಾಗ ನೆಲಮಂಗಲ ಕುಣಿಗಲ್ ರಸ್ತೆಯಲ್ಲಿ ಇದ್ದಕ್ಕಿದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು, ತಕ್ಷಣ ಹೊತ್ತಿ ಉರಿದಿದೆ.
ಅದೃಷ್ಟವಶಾತ್ ಕಾರಿನಲ್ಲಿದ್ದ ಇಡೀ ಕುಟುಂಬ ಬೆಂಕಿ ಅವಘಡದಿಂದ ಪಾರಾಗಿದೆ. ಕಾರಿನಲ್ಲಿ ಶ್ರೀಧರ್ ಕುಟುಂಬ ಸದಸ್ಯರಾದ ಪಟೇಲ್ ಮೋನಿಕಾ, ಚಂದನ್ ಪಟೇಲ್, ಮಕ್ಕಳಾದ ಮನೋಜ್ಞ (6), ಚಿಂತನ್ (2) ಬೆಂಕಿ ಅವಘಡದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.