ದೇವನಹಳ್ಳಿ: ಚೀನಾ ದೇಶದಲ್ಲಿ ಕೊರೊನಾ ಒಮಿಕ್ರಾನ್ ಉಪತಳಿಯ ಆರ್ಭಟದ ಹಿನ್ನೆಲೆ ರಾಜ್ಯದಲ್ಲಿಯೂ ಆರೋಗ್ಯ ಇಲಾಖೆ ಮುಂಜಾಗ್ರತೆ ವಹಿಸಲು ಕ್ರಮವಹಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ನಿನ್ನೆಯಿಂದ ಸ್ಕ್ರೀನಿಂಗ್ ಓಪನ್ ಮಾಡಲಾಗಿದೆ.
ಏರ್ಪೋರ್ಟ್ನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ನಿನ್ನೆಯಿಂದ ಪ್ರಯಾಣಿಕರ ಸ್ಕ್ರೀನಿಂಗ್ ಮಾಡಿ ಜ್ವರ ಮತ್ತು ಕೊರೊನಾ ಲಕ್ಷಣಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಮೂರು ಪಾಳಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರೋಗ್ಯ ಇಲಾಖೆ ಸಿಬ್ಬಂದಿ ನೇಮಕ ಮಾಡಲಾಗಿದ್ದು, ವಿದೇಶದಿಂದ ಬರುವ ಪ್ರಯಾಣಿಕರಿಗೆ ಮಾತ್ರ ಸ್ಕ್ರೀನಿಂಗ್ ಮಾಡಲಾಗುತ್ತಿದೆ.
ಆರೋಗ್ಯ ಇಲಾಖೆಯ 10 ಮಂದಿಯನ್ನು ಒಂದು ಪಾಳಯದಂತೆ ಕೆಲಸ ಮಾಡಲು ನಿಯೋಜಿಸಲಾಗಿದೆ. ಇದರ ನಡುವೆ ಏರ್ಪೋರ್ಟ್ನಲ್ಲಿ ಮಾಸ್ಕ್ ಮರೀಚಿಕೆಯಾಗಿದ್ದು, ಕೆಲ ಪ್ರಯಾಣಿಕರು ಮಾಸ್ಕ್ ಹಾಕಿದರೆ ಮತ್ತೆ ಕೆಲವರು ಮಾಸ್ಕ್ ಹಾಕದೇ ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನೂ ಈ ಬಗ್ಗೆ ಗೈಡೆನ್ಸ್ಗೆ ಆರೋಗ್ಯ ಇಲಾಖೆ ಕಾಯುತ್ತಿದೆ. ಅಗತ್ಯ ಮಾರ್ಗಸೂಚಿಗಳು ಸರ್ಕಾರದಿಂದ ಬಂದ ನಂತರ ಏರ್ಪೋರ್ಟ್ನಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಕೊರೊನಾ ಭೀತಿ: ಮುಂಜಾಗ್ರತಾ ಕ್ರಮದ ಬಗ್ಗೆ ಚರ್ಚಿಸಲು ಸಿಎಂ ಮಹತ್ವದ ಸಭೆ