ನೆಲಮಂಗಲ: ಪೋಷಕರು ಬಾಲಕಿಯ ವಯಸ್ಸು ಮುಚ್ಚಿಟ್ಟು ಮದುವೆ ಮಾಡಲು ಮುಂದಾದಾಗ, ವಿಷಯ ತಿಳಿದು ಕಲ್ಯಾಣ ಮಂಟಕ್ಕೆ ಆಗಮಿಸಿದ ಮಕ್ಕಳು ಸಹಾಯವಾಣಿ ಅಧಿಕಾರಿಗಳು ಬಾಲ್ಯ ವಿವಾಹ ತಡೆದು ಬಾಲಕಿಯ ರಕ್ಷಣೆ ಮಾಡಿದ್ದಾರೆ.
ನೆಲಮಂಗಲ ತಾಲೂಕು ಶಿವಗಂಗೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಮದುವೆಗೆ ಸಿದ್ದತೆ ಮಾಡಲಾಗಿತ್ತು, ಬಾಲ್ಯ ವಿವಾಹದ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರು ಬಂದ ಹಿನ್ನೆಲೆಯಲ್ಲಿ ಮಕ್ಕಳ ಸಹಾಯವಾಣಿ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಕಲ್ಯಾಣ ಮಂಟಪಕ್ಕೆ ಆಗಮಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ.
ಬಾಲಕಿಯನ್ನು ಬಚ್ಚಿಟ್ಟ ಪೋಷಕರು
ಅಧಿಕಾರಿಗಳು ದಾಳಿ ನಡೆಸಿದಾಗ ಮಂಟಪದಲ್ಲಿ ವರನ ಕಡೆಯವರು ಮಾತ್ರ ಇದ್ದು, ವಧುವಿನ ಕಡೆಯವರಿಗೆ ವಿಷಯ ತಿಳಿದು ಮದುವೆ ಮಂಟಪಕ್ಕೆ ಬಾರದೆ ಹುಡುಗಿಯನ್ನು ಬಚ್ಚಿಟ್ಟು ಹುಡುಗಿ ಇಲ್ಲವೆಂದು ನಾಟಕವಾಡಿದ್ದರು. ಈ ವೇಳೆ ಪೋಷಕರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು ಮದುವೆ ನಿಲ್ಲಿಸುವಲ್ಲಿ ಯಶಸ್ವಿಯಾದರು.
'ನಮಗೆ ಹುಡುಗಿಯ ವಯಸ್ಸೇ ಗೊತ್ತಿಲ್ಲ' ಎಂದ ವರನ ಕಡೆಯವರು
ಈ ಬಗ್ಗೆ ಅಧಿಕಾರಿಗಳು ವರನನ್ನು ವಿಚಾರಿಸಿದಾಗ ಹುಡುಗಿಗೆ 18 ವರ್ಷ ತುಂಬಿಲ್ಲ ಎಂಬ ಮಾಹಿತಿಯನ್ನು ಮುಚ್ಚಿಟ್ಟಿದ್ದರು. ಈ ಬಗ್ಗೆ ನನಗೆನೂ ಗೊತ್ತಿಲ್ಲ, ಹುಡುಗಿಯನ್ನು ಸೋಮವಾರ ಕರೆತಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಒಪ್ಪಿಸುತ್ತೇನೆಂದು ತಿಳಿಸಿದರು. ಆದರೆ, ಅಧಿಕಾರಿಗಳು ಇಂದೇ ಒಪ್ಪಿಸುವಂತೆ ಪಟ್ಟು ಹಿಡಿದ ಪರಿಣಾಮ ಬಾಲಕಿಯನ್ನು ಕಡೆಗೆ ಒಪ್ಪಿಸಲಾಯಿತು. ಸದ್ಯ ರಕ್ಷಣೆ ಮಾಡಿರುವ ಅಪ್ರಾಪ್ತೆಯನ್ನು ಬಾಲಕಿಯರ ಮಂದಿರದಲ್ಲಿ ಆಶ್ರಯಕ್ಕೆ ನೀಡಲಾಗಿದೆ.
ಓದಿ : ಟಾಲಿವುಡ್ ನಟ ವಿಜಯ್ ರಂಗರಾಜು ವಿರುದ್ಧ ವಿಷ್ಣು ಅಭಿಮಾನಿಗಳ ಆಕ್ರೋಶ