ಹಲ್ಲೆಗೊಳಗಾದ ವ್ಯಕ್ತಿ ಮೈಲಾರಪ್ಪ ಅವರು ಮಾತನಾಡಿದರು ದೇವನಹಳ್ಳಿ (ಬೆಂಗಳೂರು) : ಹಬ್ಬದ ದಿನ ಬಾಜಿಕಟ್ಟಿಕೊಂಡು ಚೌಕಬಾರ ಆಡ್ತಿದ್ದ ಯುವಕರಿಗೆ ಬುದ್ಧಿವಾದ ಹೇಳಿದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಬೈಕ್ಗೆ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ತಮ್ಮೇನಹಳ್ಳಿಯಲ್ಲಿ ನಡೆದಿದೆ.
ಅಂದಹಾಗೆ ಕಳೆದೊಂದು ವಾರದ ಹಿಂದೆ ಯುಗಾದಿ ಹಬ್ಬ. ಹಬ್ಬದ ದಿನ ಸರ್ವೆ ಸಾಮಾನ್ಯ ಅಂತಾ ಗ್ರಾಮದಲ್ಲಿ ಯುವಕರ ಗುಂಪೊಂದು ಬಾಜಿ ಕಟ್ಟಿಕೊಂಡು ಚೌಕಬಾರ ಆಟವನ್ನ ಆಡ್ತಿದ್ದರು. ಈ ವೇಳೆ ಯುವಕರ ಗುಂಪಿನಲ್ಲಿಯೇ ಗಲಾಟೆ ಜಗಳವಾಡ್ತಿದ್ದಾಗ, ಗ್ರಾಮದ ಮೈಲಾರಪ್ಪ ಎಂಬಾತ ಎಂಟ್ರಿ ಕೊಟ್ಟಿದ್ದು, ಯುವಕರಿಗೆ ಬುದ್ಧಿವಾದ ಹೇಳಿದ್ದರಂತೆ.
ಬುದ್ಧಿವಾದ ಹೇಳಿದ ಮೈಲಾರಪ್ಪನ ಮೇಲೆ ಹಲ್ಲೆ : ಈ ವೇಳೆ ಬುದ್ಧಿವಾದ ಹೇಳಲು ಹೋದ ಮೈಲಾರಪ್ಪನ ಮೇಲೆಯೇ ಯುವಕರು ಕ್ಯಾತೆ ತೆಗೆದು ಜಗಳವಾಗಿ ವಿಚಾರ ಅಂತ್ಯವಾಗಿತ್ತು. ಆದ್ರೆ ಈ ಗಲಾಟೆಯಾಗಿ ಒಂದು ವಾರಕ್ಕೆ ಯುವಕರ ಗುಂಪು ಮೈಲಾರಪ್ಪನ ಮೇಲೆ ಕಳೆದ ರಾತ್ರಿ ಅಟ್ಟಹಾಸ ಮೆರೆದಿದ್ದಾರೆ. ಬೈಕ್ ಅನ್ನು ಸುಟ್ಟು ಹಾಕಿ ಮೈಲಾರಪ್ಪನ ಮೇಲೆ ಹಲ್ಲೆ ನಡೆಸಿರುವ ಪುಂಡರು ಎಸ್ಕೇಪ್ ಆಗಿದ್ದಾರೆ.
ರಾತ್ರಿ 9 ಗಂಟೆ ವೇಳೆಯಲ್ಲಿ ಮೈಲಾರಪ್ಪ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಯುವಕರ ಗ್ಯಾಂಗ್ನಲ್ಲಿ ಮಧು ಎಂಬಾತ ಹೇ ಎಲ್ಲಿದ್ದಿಯಾ? ಅವತ್ತು ನನ್ನ ಮೇಲೆ ಜಗಳ ಆಡಿದ್ದಿಯಾ, ಊರಿನ ಗೇಟ್ ಬಳಿ ಬಾರೋ ಎಂದಿದ್ದಾರೆ. ಇನ್ನು ತಮ್ಮೇನಹಳ್ಳಿ ಗೇಟ್ ಬಳಿ ಹೋಗ್ತಿದ್ದಂತೆ ಮಧು, ಶಶಿ, ರಂಜಿತ್ ಎಂಬ ಮೂವರು ತನ್ನ ಸಹಚರರನ್ನು ಕರೆದುಕೊಂಡು ಬಂದು ಮೈಲಾರಪ್ಪನನ್ನು ಥಳಿಸಿ ಹಲ್ಲೆ ನಡೆಸಿದ್ದಾರೆ.
ಬೈಕ್ಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದ ಯುವಕರು : ಜೊತೆಗೆ ನನಗೆ ಆಟ ಆಡಬೇಡ ಅಂತಾ ಹೇಳ್ತಿಯೇನೋ. ನಾವ್ಯಾರು ಅಂತಾ ನಿನಗೆ ಗೊತ್ತಿಲ್ಲ ಎಂದು ಜಾತಿ ನಿಂದನೆ ಮಾಡಿ ಮೈಲಾರಪ್ಪನ ಬೈಕ್ಗೆ ಬೆಂಕಿಯನ್ನ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ ಎಂದು ಮೈಲಾರಪ್ಪ ಆರೋಪಿಸಿದ್ದಾರೆ. ಜೊತೆಗೆ ಕೃತ್ಯವೆಸಗಿದ ಆರೋಪಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಇನ್ನು ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬುದ್ಧಿವಾದ ಹೇಳಿದ್ದಕ್ಕೆ ಹಲ್ಲೆ ನಡೆಸಿದ ಹುಡುಗರು : 'ಮಧು ಎಂಬುವವನು ಕರೆ ಮಾಡಿ ಎಲ್ಲಿದ್ದೀಯಾ ಎಂದು ವಿಚಾರಿಸಿದ, ಆಗ ನಾನು ಯಲಹಂಕದಲ್ಲಿ ಇದ್ದೇನೆ ಎಂದು ಹೇಳಿದೆ. ನಂತರ ಅವನು ಕೋಪದಿಂದ ಯಾವ ಸ್ಥಳದಲ್ಲಿಯಾ ಎಂದ. ಆಗ ನಾನು ಏನಾಗಬೇಕು? ನೀನು ಎಲ್ಲಿದ್ದೀಯಾ ಹೇಳು ನಾನೇ ಬರುತ್ತೇನೆ ಎಂದೆ. ನಾನು ಪೊಲೀಸ್ ಸ್ಟೇಷನ್ಗೆ ಕಂಪ್ಲೆಂಟ್ ಕೊಟ್ಟು ಮರಳಿ ಬರುವಾಗ ಇಲ್ಲಿ 25 ಜನ ಗುಂಪುಕಟ್ಟಿಕೊಂಡು ಕುಳಿತಿದ್ದರು. ನಂತರ ನನಗೆ ಹೊಡೆದು ಬೈಕ್ ಅನ್ನು ಸುಟ್ಟು ಹಾಕಿದ್ರು. ನಾನು ಬುದ್ಧಿವಾದ ಹೇಳಿದ್ದನ್ನೇ ಇವನು ದೊಡ್ಡದಾಗಿ ಮಾಡಿ ಗಲಾಟೆ ತೆಗೆದಿದ್ದಾನೆ. ನಾನು ಬೈದಿದ್ದು ಶಶಿಗೆ. ಆದರೆ ಮಧು ನನ್ನ ಮೇಲೆ ಗಲಾಟೆಗೆ ಬಂದಿದ್ದಾನೆ. ಅವನೇ ಗಲಾಟೆಯನ್ನು ಕ್ರಿಯೇಟ್ ಮಾಡಿದ್ದಾನೆ' ಎಂದು ಹಲ್ಲೆಗೊಳಗಾದ ಮೈಲಾರಪ್ಪ ತಿಳಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತೇವೆ-ಡಿವೈಎಸ್ಪಿ: 'ಮಧು, ಶಶಿ, ರಂಜಿತ್ ಎಂಬುವವರು ಜೊತೆಗೂಡಿ ಚೌಕಾಬಾರ ಆಟವಾಡಿದ್ದಾರೆ. ಆ ಸಂದರ್ಭದಲ್ಲಿ ಮೈಲಾರಪ್ಪ ಎಂಬುವವರು ಏನು ಗಲಾಟೆ ಮಾಡಿಕೊಳ್ಳುತ್ತಿದ್ದೀರಿ ಎಂದು ಬೈದಿದ್ದಾರೆ. ನಿನ್ನೆ ಸಂಜೆ ಅವರು ಕುಡಿದುಕೊಂಡು ಬಂದು ಮೈಲಾರಪ್ಪ ಅವರನ್ನು ಅಡ್ಡಹಾಕಿದ್ದಾರೆ. ಅಲ್ಲದೆ, ನಮಗೇನು ನೀವು ಹೇಳೋದು ಎಂದು ಜಗಳ ಮಾಡಿದ್ದಾರೆ. ಇದರ ಬಗ್ಗೆ ಈಗಾಗಲೇ ಪ್ರಕರಣ ದಾಖಲಾಗಿದೆ. ಇವರ ಮಧ್ಯೆ ಯಾವುದೇ ಹಳೆಯ ದ್ವೇಷ ಇರಲಿಲ್ಲ. ಬೈದಿದ್ದಾರೆ ಎಂಬುದನ್ನೇ ಇವರು ನೆನಪಿಟ್ಟುಕೊಂಡು ಬೈಕ್ ಅನ್ನು ಸುಟ್ಟಿದ್ದಾರೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಂಡು ಕ್ರಮ ಕೈಗೊಳ್ಳುತ್ತೇವೆ' ಎಂದು ದೊಡ್ಡಬಳ್ಳಾಪುರ ಉಪವಿಭಾಗ ಡಿವೈಎಸ್ಪಿ ನಾಗರಾಜ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಯುವತಿಗೆ ಬಸ್ನಲ್ಲಿ ಬಣ್ಣ ಹಚ್ಚಿ ರಾದ್ಧಾಂತ: ಸುಪಾರಿ ಕೊಟ್ಟು ಯುವಕನ ಕಿಡ್ನಾಪ್, ಹಲ್ಲೆ.. ಯುವತಿ ವಿರುದ್ಧ ಗಂಭೀರ ಆರೋಪ