ಮಹದೇವಪುರ : ವಲಯ ವ್ಯಾಪ್ತಿಯ ಕಂಟೇನ್ಮೆಂಟ್ ಝೋನ್ಗಳಿಗೆ ಬಿಬಿಎಂಪಿ ಸ್ಪೆಷಲ್ ಕಮಿಷನರ್ ಕುಮಾರ್ ನಾಯಕ್ ಭೇಟಿ ನೀಡಿ ಪರಿಶೀಲಿಸಿದರು. ಅಯ್ಯಪ್ಪನಗರ, ಕೊಡಿಗೇಹಳ್ಳಿ, ಬೆಳತೂರು ಕಂಟೇನ್ಮೆಂಟ್ ಝೋನ್ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾತನಾಡಿದ ಕುಮಾರ್ ನಾಯಕ್ ಅವರು, ಕಂಟೇನ್ಮೆಂಟ್ ವಲಯದಲ್ಲಿರುವ ರೇಷನ್ ಹಾಗೂ ಅಗತ್ಯ ವಸ್ತುಗಳು ತಲುಪುತ್ತಿವೆಯಾ ಎಂದು ಪರಿಶೀಲನೆ ಮಾಡಿದ್ದೇನೆ. ಮಹದೇವಪುರ ವಲಯದಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಕಂಟೇನ್ಮೆಂಟ್ ವಲಯದ ಕುರಿತು ಜನರಿಗೆ ಮಾಹಿತಿ ನೀಡಬೇಕು. ಅಲ್ಲದೆ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಬೇಕು. ಗುಡಿಸಲು ಹಾಗೂ ಸ್ಲಂ ಜಾಗಗಳಲ್ಲಿ ದಿನನಿತ್ಯ ಕೆಲಸ ಮಾಡಿ ಜೀವನ ನಡೆಸುವ ಜಾಗಗಳಲ್ಲಿ ರೇಷನ್ ಕಿಟ್ ಹಾಗೂ ಅಲ್ಲಿಗೆ ಬೇಕಿರುವ ಸಾಮಗ್ರಿಗಳನ್ನು ವಿತರಿಸುವ ಕೆಲಸ ಬಿಬಿಎಂಪಿ ವತಿಯಿಂದ ಮಾಡಲಾಗುತ್ತಿದೆ ಎಂದರು.
ಈಗಾಗಲೇ ಹೈಕೋರ್ಟ್ ನಿರ್ದೇಶನ ನೀಡಿರುವಂತೆ ಕಂಟೇನ್ಮೆಂಟ್ ಜಾಗದಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಆರೋಗ್ಯ ಸಮಸ್ಯೆ ಕಂಡು ಬಂದರೆ ಅವರಿಗೂ ಸಹ ಅವಶ್ಯಕ ಅನುಕೂಲ ಮಾಡಿಕೊಡಲಾಗುತ್ತಿದೆ. ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ ಎಂದರು.