ಬಾಗಲಕೋಟೆ :'ಜಾಗೃತಿ ದೇವರು' ಎಂದು ಹೆಸರುವಾಸಿಯಾಗಿರುವ ತುಳಸಿಗೇರಿ ಆಂಜನೇಯ ದೇವಾಲಯದ ಕಾರ್ತಿಕೋತ್ಸವವನ್ನು ಈ ಬಾರಿ ನಿಷೇಧ ಮಾಡಲಾಗಿದೆ.
ಉತ್ತರ ಕರ್ನಾಟಕದಲ್ಲಿ ಹೆಸರುವಾಸಿಯಾಗಿರುವ ತುಳಸಿಗೇರಿ ಆಂಜನೇಯ ದೇವಾಲಯ ಕಾರ್ತಿಕೋತ್ಸಕ್ಕೆ ಹೆಚ್ಚು ಜನ ಆಗಮಿಸುತ್ತಿದ್ದರಿಂದ ಜನದಟ್ಟಣೆ ಉಂಟಾಗುತ್ತಿತ್ತು. ಈ ಕಾರಣಕ್ಕೆ ಕೊರೊನಾ ರೋಗದ ಭೀತಿ ಹಿನ್ನೆಲೆ ಜಿಲ್ಲಾಡಳಿತ ಕಾರ್ತಿಕೋತ್ಸವ ನಿಷೇಧ ಮಾಡಿದೆ.

ಪ್ರತಿವರ್ಷ ಉತ್ತರಕರ್ನಾಟಕದ ವಿವಿಧ ಪ್ರದೇಶಗಳಿಂದ ಭಕ್ತರು ಆಗಮಿಸಿ ಕಾರ್ತಿಕೋತ್ಸವದ ಜಾತ್ರೆಯ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಶನಿವಾರ ಮತ್ತು ಭಾನುವಾರ ಕಾರ್ತಿಕೋತ್ಸವ ಸಮಾರಂಭ ನಡೆಯಬೇಕಿತ್ತು.
ಆದರೆ, ನಿಷೇಧಗೊಂಡಿರುವ ಹಿನ್ನೆಲೆ ದೇವಾಲಯದ ಮುಂಭಾಗ ಪೊಲೀಸರು ಬ್ಯಾರಿಕೇಡ್ ಹಾಕಿ ಭಕ್ತರಿಗೆ ಪ್ರವೇಶ ನಿರಾಕರಿಸಿದ್ದಾರೆ. ಬೇಡಿಕೆ ಈಡೇರಿಸುವ ತುಳಸಿಗೇರಿ ಆಂಜನೇಯ ದೇವರ ದರ್ಶನ ಪಡೆಯಲು ಸಾಧ್ಯವಾಗದೇ ಬೇಸರಗೊಂಡ ಭಕ್ತರು ಬಂದ ದಾರಿಗೆ ಸುಂಕ ಇಲ್ಲ ಎಂದು ವಾಪಸ್ಸು ಹೋಗುತ್ತಿದ್ದಾರೆ.
ಇಂದು, ನಾಳೆ ಮಾತ್ರವಲ್ಲದೇ, ಮುಂದಿನ ಶನಿವಾರ ಸಹ ಜಾತ್ರೆ ಮಾದರಿಯಲ್ಲಿ ಆಂಜನೇಯ ಕಾರ್ತಿಕೋತ್ಸವ ನಡೆಯಬೇಕಿತ್ತು. ಇದರ ಮೇಲೂ ಕೊರೊನಾದ ಕರಿಛಾಯೆ ಬಿದ್ದಿದ್ದು, ಅದನ್ನೂ ಕ್ಯಾನ್ಸಲ್ ಮಾಡಲಾಗಿದೆ.
ಇದನ್ನೂ ಓದಿ:ಐಎಂಎ ಮುಗಿತು, ಈಗ ಮತ್ತೊಂದು ಕಂಪನಿಯಿಂದ ಗ್ರಾಹಕರಿಗೆ ಕೋಟ್ಯಂತರ ರೂ. ವಂಚನೆ