ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ತೋದಲಬಾಗಿ ಗ್ರಾಮದ ಜನತಾ ಪ್ಲಾಟ್ ಮತ್ತು ಲಕ್ಷೀನಗರದ ಆಶ್ರಯ ಮನೆಯ ಫಲಾನುಭವಿಗಳು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಧರಣಿ ಕುಳಿತಿದ್ದರೂ ಯಾವ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
1995ರಲ್ಲಿ ಮಂಜೂರಾದ ಈ ಮನೆಗಳಿಗೆ ಯಾವುದೇ ರೀತಿಯ ಉತಾರ ಹಾಗೂ ಹಕ್ಕುಪತ್ರ ನೀಡಿಲ್ಲ. 150 ಮನೆಗಳಲ್ಲಿ ಕೆಲ ಮನೆಗಳ ಕಟ್ಟಡಗಳು ಪೂರ್ಣಗೊಂಡಿವೆ. ಇನ್ನೂ ಕೆಲವು ಮನೆಗಳ ನಿರ್ಮಾಣ ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ. ಈ ಪ್ಲಾಟ್ಗಳ ಪಹಣಿ ಕೂಡಾ ಕೊಟ್ಟಿಲ್ಲ. ಇದರ ಬಗ್ಗೆ ಪಂಚಾಯಿತಿ ಅಧಿಕಾರಗಳನ್ನು ಕೇಳಿದರೆ ಉಡಾಫೆ ಉತ್ತರ ಕೊಡುತ್ತಾರೆ. ಇದರಿಂದ ತೊಂದರೆ ಆಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿ ತಮ್ಮ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.