ಬಾಗಲಕೋಟೆ: ಕರುಣೆಯ ಗೋಡೆ ಹೆಸರಿನಲ್ಲಿ ಬಡವರ ಸೇವೆಗೆ ಮುಂದಾಗಿರುವುದು ದಾನ, ಧರ್ಮ, ಸಾಮಾಜಿಕ ಸೇವೆಯ ದಿಸೆಯಲ್ಲಿ ಇಟ್ಟಿರುವ ವಿನೂತನ ಹೆಜ್ಜೆಯಾಗಿದೆ. ಇದು ಇನ್ನೂ ಹೆಮ್ಮರವಾಗಿ ಬೆಳೆಯಬೇಕು. ಬಡವರು ತಮಗೆ ಬೇಕಾದ ವಸ್ತುಗಳನ್ನು ಯಾವ ಸಂಕೋಚವಿಲ್ಲದೇ ಇಲ್ಲಿಗೆ ಬಂದು ಪಡೆಯಬೇಕು ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ನಗರದ ತುಳಸಿಗಿರೀಶ ಮಧುಮೇಹ ಆಸ್ಪತ್ರೆ ಮತ್ತು ಮಧುಮೇಹ ಸಂಶೋಧನಾ ಪ್ರತಿಷ್ಠಾನದ 'ಕರುಣೆಯ ಗೋಡೆ' ಸಾಮಾಜಿಕ ಸೇವೆಗೆ ಚಾಲನೆ ನೀಡಿ ಮಾತನಾಡಿದರು. ತಾವು ಬಳಸಿ ಬೇಡವಾದ ವಸ್ತುಗಳನ್ನು ಇಲ್ಲಿಟ್ಟು, ತಮಗೆ ಅಗತ್ಯವಾಗಿರುವ ವಸ್ತುಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗಬಹುದು. ವಿದೇಶಗಳಲ್ಲಿ ತಮಗೆ ಬೇಡವಾದ ವಸ್ತುಗಳನ್ನು ತಮ್ಮ ಮನೆಯ ಎದುರಿನ ರಸ್ತೆಯ ಬದಿಗೆ ಇಟ್ಟಿರುತ್ತಾರೆ. ಅಗತ್ಯಬಿದ್ದವರು ಆ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಇಂತಹ ದಾನದ ಸೇವೆ ವಿದೇಶದಲ್ಲಿ ನೋಡಿದ್ದೆ, ನಮ್ಮಲ್ಲಿ ಇರಲಿಲ್ಲ. ಬಾಗಲಕೋಟೆಯಲ್ಲಿ ಇದೀಗ ಈ ಪರಂಪರೆ ಆರಂಭಿಸಿರುವುದು ಬಹಳ ಸಂತೋಷ. ಇದು ಎಲ್ಲ ಬಡವರ ಪಾಲಿನ ಬದುಕಿನ ಗೋಡೆಯಾಗಬೇಕು ಎಂದು ಆಶಿಸಿದರು.
ವಸ್ತುಗಳು ಇದ್ದವರು ಇಲ್ಲಿ ಕೊಡೋದು, ಅಗತ್ಯ ಇದ್ದವರು ತಗೋಳ್ಳುವುದು. ಕೊಟ್ಟೆ ಎಂಬ ಭಾವ ಅವರಿಗೂ ಇರಲ್ಲ, ತೆಗೆದುಕೊಂಡೇ ಎಂಬ ಭಾವ ಇವರಿಗೂ ಇರಲ್ಲ. ಕೊಟ್ಟವರಿಗೆ, ಇಂತವರಿಗೆ ಕೊಟ್ಟೆ ಎಂಬುದು ಗೊತ್ತಾಗುವುದಿಲ್ಲ. ಸ್ವಾಭಿಮಾನಿಗಳು ನಡೆಸುವ ದಾನದ ಪದ್ಧತಿ ಇದು. ನಮ್ಮಲ್ಲಿ ನಾಲ್ಕಾರು ವಸ್ತುಗಳಿದ್ದರೆ, ಅದರಲ್ಲಿ ಒಂದೆರಡು ಇಲ್ಲಿಡಿ. ಬೇಕಾದವರೆ ಪಡೆಯುತ್ತಾರೆ. ಇಟ್ಟವರಿಗೂ, ಪಡೆದವರಿಗೂ ಧನ್ಯತಾ ಭಾವ ಬರುತ್ತದೆ ಎಂದು ಹೇಳಿದರು.
ದೇವರು ನಮಗೆ ಮಳೆ, ಗಾಳಿ, ನೀರು ಕೊಟ್ಟಿದ್ದಾನೆ. ದೇವರಿಗೆ ನಾನು ಕೊಟ್ಟೇ ಎಂಬ ಭಾವ ಇರಲ್ಲ. ಮೌನವಾಗಿ ಕೊಡುತ್ತಲೇ ಇರುತ್ತಾನೆ. ನಾವೆಲ್ಲ ಪಡೆಯುತ್ತಲೇ ಇರುತ್ತೇವೆ. ಪಡೆದ ನಾವೆಲ್ಲ ಒಂದಷ್ಟು ದಾನ-ಧರ್ಮ ಮಾಡಬೇಕು. ಈ ಕರುಣೆಯ ಗೋಡೆ ಮೇಲೆ ಎಲ್ಲರೂ ಒಂದಷ್ಟು ವಸ್ತುಗಳನ್ನು ಇಡೋಣ. ದಾನದ ಹೊಸ ಪದ್ಧತಿ ಇದು. ಸತ್ಯಂ ವಧ-ಧರ್ಮಂ ಚರ ಎಂಬಂತೆ ಪ್ರಾಮಾಣಿಕತೆ ಹಾಗೂ ಸುಂದರ ಕಾರ್ಯ ಮಾಡಬೇಕು ಎಂದು ಹಿರಿಯರು ಹೇಳಿದ್ದಾರೆ. ಇದೊಂದು ಸಮಾಧಾನದ ಕಾರ್ಯ. ಇಟ್ಟವರು, ಪಡೆದವರು ಇಬ್ಬರಲ್ಲೂ ದೇವರ ಭಾವನೆ ಶುರುವಾಗುತ್ತದೆ. ಇಡಲು ಈ ಗೋಡೆ ಸಾಲಬಾರದು. ಮೌನವಾಗಿ ಮಾಡಿದ ದಾನ, ಮೌನವಾಗಿ ಸ್ವೀಕಾರವಾಗಬೇಕು. ಹಾಗೆ ನಡೆದರೆ ಬಡವರು ಅನ್ನೋರು ಉಳಿಯಲ್ಲ. ಇದೊಂದು ಒಳ್ಳೆಯ ಸಂಸ್ಕೃತಿ ಎಂದು ಬಣ್ಣಿಸಿದರು.
ಕೇಸರಟ್ಟಿಯ ಬಾಲಶಿವಯೋಗಿ ಸೋಮಲಿಂಗ ಸ್ವಾಮೀಜಿ ಮಾತನಾಡಿ, ದಯವೇ ಧರ್ಮದ ಮೂಲವಯ್ಯ ಎಂಬಂತೆ ಕರುಣೆಯ ಗೋಡೆ ಸಾಮಾಜಿಕ ಸೇವೆಗೆ ಸಜ್ಜಾಗಿದೆ. ಬಡವರು, ಹಿಂದುಳಿದವರಿಗೆ ಇದು ಸಹಕಾರಿಯಾಗಲಿದೆ. ಇದ್ದವರು, ಬೇಡವಾದ ವಸ್ತುಗಳನ್ನು ಬೀಸಾಡುವ ಬದಲು ಇಲ್ಲಿಡಿ. ಅದನ್ನು ಬಡವರು ಪಡೆಯುತ್ತಾರೆ. ಬಡವರ ಬದುಕಿನ ಗೋಡೆಯಾಗಿ ಇದು ಪರಿವರ್ತನೆಯಾಗಲಿದೆ. ಎಲ್ಲರಲ್ಲೂ ದಾನ ಮಾಡುವ ಸ್ವಭಾವ ಬೆಳೆಯಬೇಕು. ಆಸೆ ಇಲ್ಲದ ಸೇವೆ ಇರಬೇಕು ಎಂದು ತಿಳಿಸಿದರು.
ತುಳಸಿಗಿರೀಶ ಮಧುಮೇಹ ಆಸ್ಪತ್ರೆ ಮತ್ತು ಮಧುಮೇಹ ಸಂಶೋಧನಾ ಪ್ರತಿಷ್ಠಾನದ ಮುಖ್ಯಸ್ಥ ಡಾ.ಬಾಬುರಾಜೇಂದ್ರ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮಲ್ಲಿ ಎಷ್ಟೋ ವಸ್ತುಗಳನ್ನು ಬಳಸದೇ ಹಾಗೆ ಇಡುತ್ತೇವೆ. ಕೆಲವರು ಎಸೆಯುತ್ತಾರೆ. ಅಂತಹ ವಸ್ತುಗಳು ಬಡವರ ಮನೆ ಸೇರಬೇಕು. ಅವರಿಗೆ ನಿತ್ಯ ಬಳಕೆಗೆ ಬರುವ ವಸ್ತುಗಳು ದೊರೆಯಬೇಕು. ಅದಕ್ಕಾಗಿ ಕರುಣೆಯ ಗೋಡೆ ಎಂಬ ಹೊಸ ಪರಿಕಲ್ಪನೆಯ ಸೇವೆ ಆರಂಭಿಸಲಾಗಿದೆ. ನಗರದ ಜನರು, ತಮಗೆ ಬೇಡವಾದ, ಬಳಸಲು ಅಗತ್ಯವಾಗುವ ವಸ್ತುಗಳನ್ನು ಇಲ್ಲಿಗೆ ತಂದು ಇಡಬೇಕು. ಯಾರಿಗೇ ಯಾವುದೇ ವಸ್ತು ಬೇಕಾದರೂ ಅದನ್ನು ತೆಗೆದುಕೊಂಡು ಹೋಗಬಹುದು. ಇಂತಹವೊಂದು ಸಾಮಾಜಿಕ ಕಾರ್ಯಕ್ಕೆ ತುಳಸಿಗಿರೀಶ ಪ್ರತಿಷ್ಠಾನ, ರಾಷ್ಟ್ರೀಯ ಸೇವಾ ವೈದ್ಯರ ಸಂಘ, ವಿಜಯಪುರದ ಮೆಡ್ ಮಂಥನ ಹೆಲ್ತಕೇರ್ ಪ್ರೈವೆಟ್ ಲಿ, ಸಂತ ಸೇವಾಲಾಲ ಬಂಜಾರಾ ಪತ್ತಿನ ಸಹಕಾರ ಸಂಘ, ಬಾಗಲಕೋಟೆ ಸಾಮಾಜಿಕ ಕಾರ್ಯಕರ್ತರ ತಂಡ ಸಹಕಾರ ನೀಡಿವೆ. ಬಾಗಲಕೋಟೆಯಲ್ಲಿ ಪ್ರಥಮ ಬಾರಿಗೆ ಆರಂಭವಾದ ಈ ಕರುಣೆಯ ಗೋಡೆಗೆ ಎಲ್ಲರ ಸಹಕಾರ ಇರಲಿ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಶಂಕರಲಿಂಗೇಶ್ವರ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು. ಕರುಣೆಯ ಗೋಡೆ ಎಂಬ ಸೇವಾ ಕಾರ್ಯ ಆರಂಭಿಸಿದ ಡಾ. ಬಾಬುರಾಜೇಂದ್ರ ನಾಯಕ ಮತ್ತು ಡಾ. ಶೀತಲ್ ನಾಯಕ ಅವರನ್ನು ಸಿದ್ದೇಶ್ವರ ಸ್ವಾಮೀಜಿ ಸನ್ಮಾನಿಸಿದರು.