ಬಾಗಲಕೋಟೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಾತ್ಮಾ ಗಾಂಧೀಜಿಯವರ 150ನೇ ವರ್ಷಾಚರಣೆ ಅಂಗವಾಗಿ ನವನಗರದ ಹೊಸ ಬಸ್ ನಿಲ್ದಾಣದಲ್ಲಿ 3 ದಿನಗಳ ಕಾಲ ಹಮ್ಮಿಕೊಂಡ ಗಾಂಧೀಜಿಯವರ ಅಪರೂಪದ ಛಾಯಾಚಿತ್ರ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ರವಿವಾರ ಚಾಲನೆ ನೀಡಿದರು.
![DC inaugurated Gandhiji photographic exhibition, ಮಹಾತ್ಮಾ ಗಾಂಧೀಜಿಯವರ 150ನೇ ವರ್ಷಾಚರಣೆ](https://etvbharatimages.akamaized.net/etvbharat/prod-images/kn-bgk-03-gandhiji-av-script-7202182_03112019183851_0311f_1572786531_459.jpg)
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ. ಉಪಕಾರ್ಯದರ್ಶಿ ಎ.ಜಿ.ತೋಟದ, ಆಹಾರ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಅಪರೂಪದ ಛಾಯಾಚಿತ್ರ ಪ್ರದರ್ಶನದಲ್ಲಿ ಇಡಲಾದ ಮಹಾತ್ಮಾ ಗಾಂಧೀಜಿಯವರ ಮೂರ್ತಿಗೆ ನೂಲಿನ ಹಾರ ಹಾಕಿ ಪುಷ್ಪ ಅರ್ಪಿಸಿದರು. ನಂತರ ಗಾಂಧೀಜಿಯವರ ಅಪರೂಪದ ಛಾಯಾಚಿತ್ರಗಳನ್ನು ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಮಹಾತ್ಮಾ ಗಾಂಧೀಜಿಯವರ ಚಿಂತನೆ, ಸಂದೇಶಗಳನ್ನು ಯುವಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಗಾಂಧೀಜಿಯವರ 150 ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಇದೇ ರೀತಿ ಗಾಂಧೀಜಿಯವರ ಸ್ಮರಣೆ ನಿರಂತರವಾಗಿ ನಡೆಯಲಿದೆ ಎಂದರು.
ಈ ವೇಳೆ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಮಾತನಾಡಿ, ಮಹಾತ್ಮಾ ಗಾಂದೀಜಿಯವರ ಅಪರೂಪದ ಛಾಯಾಚಿತ್ರ ಪ್ರದರ್ಶನ ನವೆಂಬರ್ 3ರ ರಿಂದ ಮೂರು ದಿನಗಳ ಕಾಲ ಬೆಳಗ್ಗೆಯಿಂದ ಸಂಜೆ 8 ಗಂಟೆವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಲು ತಿಳಿಸಿದರು.
![DC inaugurated Gandhiji photographic exhibition, https://etvbharatimages.akamaized.net/etvbharat/prod-images/kn-bgk-03-gandhiji-av-script-7202182_03112019183851_0311f_1572786531_279.jpg](https://etvbharatimages.akamaized.net/etvbharat/prod-images/kn-bgk-03-gandhiji-av-script-7202182_03112019183851_0311f_1572786531_279.jpg)
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರತಂದ ಪಾಪು ಬಾಪು ಕಿರು ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿತರಿಸಲಾಯಿತು. ಅನಂತರ ಶಾಲಾ ಮಕ್ಕಳಿಗೆ ಸಿಹಿ ಹಂಚಲಾಯಿತು. ಕಾರ್ಯಕ್ರಮದ ಪೂರ್ವದಲ್ಲಿ ವಿವಿಧ ಶಾಲಾ ಮಕ್ಕಳು ಜಿಲ್ಲಾಧಿಕಾರಿಗಳಿಗೆ ಪುಷ್ಪ ನೀಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮಕ್ಕಳು ಹಾಗೂ ಸಹ ಶಿಕ್ಷಕರು ಹಾಗೂ ಮುಖ್ಯೋಪಾದ್ಯಾಯರು ಪಾಲ್ಗೊಂಡಿದ್ದರು.
ಪ್ರದರ್ಶನದಲ್ಲಿ ಏನೇನಿತ್ತು?:
ಪ್ರದರ್ಶನದಲ್ಲಿ ಬಾಪೂ ಭೇಟಿ ನೀಡಿದ್ದ ರಾಜ್ಯದ ಸ್ಥಳಗಳ ಮಾಹಿತಿ, ಗಾಂಧೀಜಿಯವರ ಜೀವನ ಮತ್ತು ಸಾಧನೆ, ಬಾಲ್ಯ ಜೀವನ, ಎಪಿಕ್ ಪ್ರಯಾಣ, ಜಲಿಯನ್ ವಾಲಾಬಾಗ್, ದೇವಾಲಯ ಪ್ರವೇಶ, ವೈಸ್ರಾಯರೊಂದಿಗಿನ ಮಾತುಕತೆ, ಏಕಾಂಗಿ ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿ ಠರಾವು, ಪೇಶಾವರದಲ್ಲಿ ಸಾರ್ವಜನಿಕ ಸಭೆ, ರಾಜಕೋಟದ ಉಪವಾಸ, ಸರ್ವರ ಬಗ್ಗೆ ಸಮಾನ ಗೌರವ, ಪ್ರಾಣಿಗಳ ಮೇಲೆ ಇರುವ ಪ್ರೀತಿ, ಮದ್ರಾಸ್ನಲ್ಲಿ ದಲಿತರಿಗಾಗಿ ಕಾರ್ಯಕ್ರಮ, ಕುಷ್ಟರೋಗಿಗಳ ಉಪಚಾರ, ಮೂರನೇ ದರ್ಜೆ ರೈಲು ಪ್ರಯಾಣ, ವ್ಯಕ್ತಿ ಪ್ರೀತಿ ಹಾಗೂ ಲಂಡನ್ನಿಗೆ ಪ್ರಯಾಣ ಸೇರಿದಂತೆ ಇತರೆ ಸನ್ನಿವೇಶಗಳ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು.