ಬಾಗಲಕೋಟೆ: ಕೊರೊನಾ ವೈರಸ್ ತಬ್ಲಿಘಿ ಸಂಘಟನೆಯಿಂದ ಹರಡಿಲ್ಲ. ಕೋಮುವಾದಿಗಳು ಒಂದು ಸಮುದಾಯದವರ ಮೇಲೆ ಗೂಬೆ ಕೂರಿಸುವುದಕ್ಕೆ ಸುಳ್ಳು ಹೇಳಿ ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬಾದಾಮಿ ಪಟ್ಟಣದಲ್ಲಿ ಕೋವಿಡ್-19 ತಡೆಯಲು ವಾರಿಯರ್ಸ್ ಆಗಿ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಮೆರಿಕ, ಚೀನಾ, ಇಂಗ್ಲೆಂಡ್ ಹಾಗೂ ಫ್ರಾನ್ಸ್ ಸೇರಿದಂತೆ ಇತರ ರಾಷ್ಟ್ರದಲ್ಲಿ ಕೊರೊನಾ ಹರಡಿರುವುದು ತಬ್ಲಿಘಿಗಳಿಂದ ಅಲ್ಲ. ಫೆಬ್ರವರಿ ತಿಂಗಳಿನಲ್ಲೇ ವಿಮಾನ ಹಾರಾಟ ರದ್ದು ಮಾಡಿದ್ದಿದ್ದರೆ ಯಾರೂ ವಿದೇಶದಿಂದ ಬರುತ್ತಿರಲಿಲ್ಲ. ಕೊರೊನಾ ಹತೋಟಿಗೆ ಬರುತ್ತಿತ್ತು ಎಂದರು.
ಆದರೆ ಪ್ರಧಾನಿ ಮೋದಿಯವರು ಟ್ರಂಪ್ ಅವರನ್ನು ಕರೆದುಕೊಂಡು ಬಂದು ಚಪ್ಪಾಳೆ ತಟ್ಟಿದರು ಎಂದು ವ್ಯಂಗ್ಯವಾಡಿದ್ರು. ಪ್ರಧಾನಿ ಮೋದಿಯವರು ಲಾಕ್ಡೌನ್ ಘೋಷಣೆ ಮಾಡುವ ಸಮಯದಲ್ಲಿ ರಾತ್ರಿ ಮಾಹಿತಿ ನೀಡಿ ನಾಳೆಯಿಂದ ಲಾಕ್ಡೌನ್ ಅಂತ ಹೇಳುತ್ತಾರೆ. ಅದೇ ನಾಲ್ಕು ದಿನ ಬಿಟ್ಟು ಲಾಕ್ಡೌನ್ ಮಾಡುವುದಾಗಿ ಮಾಹಿತಿ ನೀಡಿದ್ರೆ ಜನ ತಮ್ಮ ತಮ್ಮ ಊರಿಗೆ ಸೇರುತ್ತಿದ್ದರು. ಆದರೆ ಈಗ ಎಲ್ಲವೂ ಹೆಚ್ಚಾದ ಮೇಲೆ ಊರು ಸೇರುತ್ತಿರುವುದು ಇನ್ನಷ್ಟು ರೋಗ ಹರಡುವಂತಾಗಿದೆ ಎಂದರು.