ಅಹಮದಾಬಾದ್: ಇಂಗ್ಲೆಂಡ್ ವಿರುದ್ಧ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದು, ಇದರ ಜತೆಗೆ ವೇಗವಾಗಿ 400 ವಿಕೆಟ್ ಪಡೆದುಕೊಂಡ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ. ಇದೇ ವಿಚಾರವಾಗಿ ಹರಭಜನ್ ಸಿಂಗ್ ಮಾತನಾಡಿದ್ದಾರೆ.
ಟೀಂ ಇಂಡಿಯಾದ ಅನಿಲ್ ಕುಂಬ್ಳೆ ಹಾಗೂ ಹರಭಜನ್ ಸಿಂಗ್ ನಿವೃತ್ತಿ ಪಡೆದುಕೊಂಡ ಬಳಿಕ ಆರ್. ಅಶ್ವಿನ್ ಆ ಜಾಗ ತುಂಬಿದ್ದು, ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಟೆಸ್ಟ್ ಕ್ರಿಕೆಟ್ನಲ್ಲಿ 400 ವಿಕೆಟ್ ಪಡೆದುಕೊಳ್ಳುವುದು ಅತಿದೊಡ್ಡ ಸಾಧನೆ. ಮಾನಸಿಕವಾಗಿ, ದೈಹಿಕವಾಗಿ ಇಲ್ಲಿ ಸದೃಢವಾಗಿರುವುದು ಅತಿ ಅವಶ್ಯ. ನಿಜಕ್ಕೂ ಆರ್. ಅಶ್ವಿನ್ ದಂತಕಥೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹರಭಜನ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಸರಾಸರಿ ವಿಕೆಟ್ ದಾಖಲೆಯಲ್ಲಿ ಕುಂಬ್ಳೆ, ಹರ್ಭಜನ್ ಸಿಂಗ್ಗಿಂತಲೂ ಮುಂದಿದ್ದಾರೆ ಅಶ್ವಿನ್
ಟೆಸ್ಟ್ ಪಂದ್ಯಗಳಲ್ಲಿ ಭಾರತದ ಗೆಲುವಿಗೆ ಅನೇಕ ಸಲ ಅಶ್ವಿನ್ ಕಾರಣವಾಗಿದ್ದು, ವಿರಾಟ್ ಕೊಹ್ಲಿ ಅಶ್ವಿನ್ ಅವರನ್ನ ದಂತಕಥೆ ಎಂದು ಕರೆದಿರುವುದು ನಿಜಕ್ಕೂ ತುಂಬಾ ಸಂತೋಷವಾಯಿತು ಎಂದಿದ್ದು, ಮುಂದಿನ ಸಲ ಅವರನ್ನ ಭೇಟಿಯಾದಾಗ ನಾನು ಹಾಗೇ ಕರೆಯುತ್ತೇನೆ ಎಂದಿದ್ದಾರೆ. ಅಶ್ವಿನ್ ಟೀಂ ಇಂಡಿಯಾ ತಂಡ ಸಮಯದಿಂದಲೂ ಚೆನ್ನಾಗಿ ಆಡುತ್ತಿದ್ದು, ಮುಂದಿನ ದಿನಗಳಲ್ಲೂ ಮುಂದುವರಿಸುತ್ತಾರೆ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಅಶ್ವಿನ್ ಪ್ರಮುಖ ಬ್ಯಾಟ್ಸಮನ್ಗಳ ವಿಕೆಟ್ ಪಡೆದುಕೊಳ್ಳುವ ಜಾಣ್ಮೆ ಹೊಂದಿದ್ದು, ಡೇವಿಡ್ ವಾರ್ನರ್ ಅವರನ್ನ ಟೆಸ್ಟ್ ಪಂದ್ಯಗಳಲ್ಲಿ 10 ಸಲ ಔಟ್ ಮಾಡಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲೂ ಸ್ಮಿತ್ ಅವರಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ.