ಹೈದರಾಬಾದ್: ಸದ್ಯ ಟೀಂ ಇಂಡಿಯಾದಲ್ಲಿ ಮಿಂಚುತ್ತಿರುವ ಕನ್ನಡಿಗ ಕೆ.ಎಲ್.ರಾಹುಲ್ ತಮಗೆ ನೀಡಿದ್ದ ಪಂದ್ಯ ಶ್ರೇಷ್ಠ ಪ್ರಶಸ್ತಿಯ ನಗದು ಬಹುಮಾನವನ್ನ ಪ್ರಾಣಿಗಳ ಔಷಧಾಲಯಕ್ಕೆ ನೀಡಿ ಎಲ್ಲರ ಹೃದಯ ಗೆದ್ದಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ದ್ವಿತೀಯ ಏಕದಿನ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ರಾಹುಲ್, ಅದರಿಂದ ತಮಗೆ ಬಂದಿದ್ದ ಹಣವನ್ನ ಪ್ರಾಣಿಗಳ ಕಲ್ಯಾಣಕ್ಕಾಗಿ ಚೆನ್ನೈನ ಪ್ರಾಣಿ ಹಕ್ಕುಗಳ ಕಾರ್ಯಕರ್ತ ಶ್ರವಣ್ ಕೃಷ್ಣನ್ ಅವರಿಗೆ ನೀಡಿದ್ದಾರೆ. ಅಲ್ಲದೆ ಮುಂಬರುವ ಪಂದ್ಯದಲ್ಲಿ ಪ್ರಶಸ್ತಿ ಪಡೆದರೆ ಆ ಹಣವನ್ನೂ ನೀಡುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶ್ರವಣ್ ಕೃಷ್ಣನ್, ರಾಹುಲ್ ಹಣ ಕಳಿಸುತ್ತಾರೆ ಎಂದು ನನಗೆ ಗೊತ್ತಿತ್ತು. ಆಶ್ಚರ್ಯ ಎಂದರೆ ಅವರಿಗೆ ಬಹುಮಾನವಾಗಿ ಬಂದಿದ್ದು 1 ಲಕ್ಷ ರೂಪಾಯಿ. ಅದರೆ, ಬೆಸೆಂಟ್ ಮೆಮೋರಿಯಲ್ ಅನಿಮಲ್ ಡಿಸ್ಪೆನ್ಸರಿಗೆ 2 ಲಕ್ಷ ರೂಪಾಯಿ ಹಣ ಕಳಿಸಿದ್ದಾರೆ ಎಂದಿದ್ದಾರೆ.
ತಮಿಳುನಾಡು ಕ್ರಿಕೆಟ್ ಆಟಗಾರನಾಗಿದ್ದ ಶ್ರವಣ್ ಕೃಷ್ಣನ್, ಪ್ರಾಣಿ ಪ್ರಿಯರಾಗಿ ಬದಲಾಗಿದ್ದು ರಾಹುಲ್ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ರಾಹುಲ್ ಮತ್ತು ನಾನು ಯಾವಾಗಲೂ ಸಂಪರ್ಕದಲ್ಲಿದ್ದೇವೆ. ಗಾಯಗೊಂಡ ಪ್ರಾಣಿಗಳ ಫೊಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದಾಗ ಅವುಗಳನ್ನು ನೋಡುವುದಕ್ಕೂ ಕಷ್ಟವಾಗುತ್ತದೆ ಎಂದು ಹೇಳುತ್ತಿದ್ದರು. ಅಲ್ಲದೆ ಯಾವುದೇ ಹಣಕಾಸಿನ ಸಹಾಯಕ್ಕಾಗಿ ನನ್ನನ್ನ ಸಂಪರ್ಕಿಸುವಂತೆ ತಿಳಿಸಿದ್ದಾರೆ ಎಂದು ಶ್ರವಣ್ ಹೇಳಿಕೊಂಡಿದ್ದಾರೆ.