ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ನಾಯಕ ಅಗಸ್ತ್ಯ ರಾಥೋಡ್ ಸೋದರತ್ತೆ ಸುಧಾ ಆಗಿ ಅಭಿನಯಿಸುತ್ತಿರುವ ವೈಜಯಂತಿ ಕಾಶಿ ಕೇವಲ ನಟಿಯಾಗಿ ಮಾತ್ರವಲ್ಲದೆ ನೃತ್ಯಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕಿರುತೆರೆ ಮತ್ತು ಹಿರಿತೆರೆ ನಟ ವಿಜಯ್ ಕಾಶಿ ಪತ್ನಿಯಾಗಿರುವ ವೈಜಯಂತಿ ಕಾಶಿ ಜನಪ್ರಿಯ ನಾಟಕ ನಿರ್ದೇಶಕ ಗುಬ್ಬಿ ವೀರಣ್ಣ ಅವರ ಕುಟುಂಬಕ್ಕೆ ಸೇರಿದವರು ಎಂಬುದು ಹಲವರಿಗೆ ತಿಳಿದಿಲ್ಲ.
ನಟನೆಯ ಜೊತೆಗೆ ಕೂಚುಪುಡಿ ನೃತ್ಯಗಾರ್ತಿಯಾಗಿಯೂ ಗುರುತಿಸಿಕೊಂಡಿರುವ ವೈಜಯಂತಿ ಕಾಶಿ ಮೊದಲ ಬಾರಿ ನೃತ್ಯ ಕಲಿಯಲಾರಂಭಿಸಿದಾಗ ಕೇವಲ 6 ವರ್ಷಗಳು. ಕರ್ನಾಟಕದ ನಂಬರ್ ಒನ್ ನೃತ್ಯಗಾರ್ತಿಯಾಗಿ ಚಿನ್ನದ ಪದಕ ಪಡೆದಿರುವ ವೈಜಯಂತಿ ಕಾಶಿ, ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್ ನ ಆರ್ಟಿಸ್ಟಿಕ್ ಡೈರೆಕ್ಟರ್ ಹಾಗೂ ಕೊರಿಯೋಗ್ರಾಫರ್ ಆಗಿ ಜನಪ್ರಿಯತೆ ಪಡೆದಿದ್ದಾರೆ. ಭಾರತೀಯ ಸಾಂಪ್ರದಾಯಿಕ ನೃತ್ಯ ಪ್ರಾಕಾರಗಳಾದ ಭರತನಾಟ್ಯ, ಕೂಚಿಪುಡಿ ಮತ್ತು ದೇವಾಲಯ ರಿಚ್ಯುಯಲ್ ನೃತ್ಯಗಳನ್ನು ಗುರು ಸಿ. ಆರ್. ಆಚಾರ್ಯ, ವೇದಾಂತಮಂ ಪ್ರಹ್ಲಾದ ಶರ್ಮಾ, ಪದ್ಮಶ್ರೀ ವೇದಾಂತಂ ಸತ್ಯನಾರಾಯಣ ಶರ್ಮಾ, ಭರತಕಾಲ ಪ್ರಪೂರಣ, ಕೊರಡ ನರಸಿಂಹ ರಾವ್ ಅವರಿಂದ ಕಲಿತ ವೈಜಯಂತಿ ಕಾಶಿ ನೃತ್ಯಕ್ಕಾಗಿ ಬ್ಯಾಂಕ್ ಕೆಲಸವನ್ನು ಕೂಡಾ ಬಿಟ್ಟರು.
ಇದನ್ನೂ ಓದಿ: ನಾಲ್ಕು ವರ್ಷಗಳ ಬಳಿಕ ಮತ್ತೆ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಸುಮಂತ್ ಶೈಲೇಂದ್ರ...!
ಕರ್ನಾಟಕ, ಭಾರತ ಮಾತ್ರವಲ್ಲದೇ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಕೂಚಿಪುಡಿ ನೃತ್ಯ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ವೈಜಯಂತಿ ಕಾಶಿ ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಮುಕ್ತ ಮುಕ್ತ, ಮನ್ವಂತರ, ಮಳೆಬಿಲ್ಲು ಧಾರಾವಾಹಿಗಳಲ್ಲಿ ಅಭಿನಯಿಸಿರುವ ವೈಜಯಂತಿ ಕಾಶಿ ಸದ್ಯ ಕಲರ್ಸ್ ವಾಹಿನಿಯ 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಸುಧಾ ಆಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ.