ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ರಾಧಾರಮಣ' ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ರಮಣ್ ಪಾತ್ರಧಾರಿಯಾಗಿ ಕಿರುತೆರೆಪ್ರಿಯರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಕಾಫಿನಾಡಿನ ಚೆಲುವ ಸ್ಕಂದ ಅಶೋಕ್ ತಮ್ಮ ಅಭಿಮಾನಿಗಳಿಗಾಗಿ ಭಾವನಾತ್ಮಕ ಫೋಸ್ಟ್ ಒಂದನ್ನು ಹಾಕಿದ್ದಾರೆ.
![scanda](https://etvbharatimages.akamaized.net/etvbharat/prod-images/4644882_scandanew.jpg)
'ನನ್ನನ್ನು ರಮಣನಾಗಿ ಸ್ವೀಕರಿಸಿದ ನಿಮಗೆ ನಾನು ಅದೆಷ್ಟು ಧನ್ಯವಾದ ಹೇಳಿದರೂ ಸಾಲದು. ಕಿರುತೆರೆಯಲ್ಲಿ ನನ್ನ ಈ ಮೂರು ವರ್ಷದ ಪಯಣ ನಿಜಕ್ಕೂ ಅದ್ಭುತವಾಗಿತ್ತು. ನನಗೆ ಅದನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ನನ್ನನ್ನು ಜನ ಮೆಚ್ಚಿದ ನಾಯಕನಾಗಿ ಆಯ್ಕೆ ಮಾಡಿದ್ದೀರಿ. ಜೊತೆಗೆ ನಮ್ಮ ತಂಡಕ್ಕೆ ಜನ ಮೆಚ್ಚಿದ ಸಂಸಾರ ಪ್ರಶಸ್ತಿ ಕೂಡಾ ದೊರಕಿದೆ. ಧನ್ಯವಾದ ಕರ್ನಾಟಕ' ಎಂದು ಬರೆದಿದ್ದಾರೆ. 'ರಾಧಾರಮಣ' ಧಾರಾವಾಹಿಯ ರಮಣ್ ಪಾತ್ರಧಾರಿ ನಿಜ ಹೆಸರು ಸ್ಕಂದ ಅಶೋಕ್ ಎಂಬುದು ಹಲವರಿಗೆ ತಿಳಿದಿಲ್ಲ. ಏಕೆಂದರೆ ಬಣ್ಣದ ಲೋಕದಲ್ಲಿ ಅವರು ಇಂದು ರಮಣ್ ಎಂದೇ ಜನಪ್ರಿಯ. ಇಂತಿಪ್ಪ ಚಿಕ್ಕಮಗಳೂರಿನ ಚೆಲುವ ನಟನಾ ರಂಗಕ್ಕೆ ಕಾಲಿಟ್ಟ ಸಂಗತಿ ನಿಜಕ್ಕೂ ಅಚ್ಚರಿ.
![skanda ashok](https://etvbharatimages.akamaized.net/etvbharat/prod-images/kn-bng-skandaashok-radharamana-serial-ka10018_04102019083441_0410f_1570158281_279.jpg)
ಕಾಲೇಜು ದಿನಗಳಲ್ಲಿ ಟಿವಿ ಮತ್ತು ಮುದ್ರಣ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದು ಸ್ಕಂದ ಅವರಿಗೆ ವರದಾನವಾಯಿತು ಎಂದರೆ ತಪ್ಪಾಗಲಾರದು. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರೋಷನ್ ಆ್ಯಂಡ್ರೂಸ್ ನಿರ್ದೇಶನದ ಮಲಯಾಳಂ ಚಿತ್ರ 'ನೋಟ್ ಬುಕ್' ನಲ್ಲಿ ನಾಯಕನಾಗಿ ನಟಿಸುವ ಮೂಲಕ ನಟನಾ ರಂಗಕ್ಕೆ ಕಾಲಿಟ್ಟ ಸ್ಕಂದ ಅಶೋಕ್ ಆ ಚಿತ್ರದ ಅಭಿನಯಕ್ಕೆ ಬೆಸ್ಟ್ ನ್ಯೂ ಕಮರ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾದರು. ಮುಂದೆ 'ಪಾಸಿಟಿವ್' ಮತ್ತು 'ಎಲೆಕ್ಟ್ರಾ' ಸಿನಿಮಾಗಳಲ್ಲಿ ಸ್ಕಂದ ನಟಿಸಿದರು. 'ಎಲೆಕ್ಟ್ರಾ' ಸಿನಿಮಾದಲ್ಲಿ ಪ್ರಕಾಶ್ ರೈ, ಮನೀಷಾ ಕೊಯಿರಾಲ, ನಯನತಾರಾ ಅವರೊಂದಿಗೆ ನಟಿಸಿದ್ದಾರೆ. ತಮಿಳಿನ ಅಂಗುಂಸ್ಯಂ, ಮುಪ್ಪರಿಮಾನಂ, ತೆಲುಗು ಸಿನಿಮಾವೊಂದರಲ್ಲಿ ಕೂಡಾ ನಟಿಸಿರುವ ಸ್ಕಂದ ಹೆಸರು ಇದೀಗ ಕನ್ನಡ ಕಿರುತೆರೆಯಲ್ಲಿ ಹೆಚ್ಚು ಕೇಳಿಬರುತ್ತಿರುವ ಹೆಸರು ಎಂದರೆ ತಪ್ಪಾಗಲಾರದು.
![Skanda Ashok](https://etvbharatimages.akamaized.net/etvbharat/prod-images/kn-bng-skandaashok-radharamana-serial-ka10018_04102019083441_0410f_1570158281_682.jpg)
'ಕಲರ್ಸ್ ಕನ್ನಡ ಚಾನೆಲ್ನಿಂದ 'ರಾಧಾರಮಣ' ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ನಟಿಸುವಂತೆ ಕರೆ ಬಂದಾಗ ಏನು ಮಾಡಬೇಕೆಂದು ತಿಳಿದಿರಲಿಲ್ಲ. ಏಕೆಂದರೆ ನನಗೆ ಸೀರಿಯಲ್ ಬಗ್ಗೆ ಏನೂ ಗೊತ್ತಿರಲಿಲ್ಲ. ಅಮ್ಮನ ಜೊತೆ ಮಾತನಾಡಿ ಅಸ್ತು ಎಂದೆ. ಅದೇ ನನ್ನ ಭವಿಷ್ಯವನ್ನು ಬದಲಾಯಿಸಿತು. ಇಂದು ನಾನು ಜನರ ಪ್ರೀತಿಯ ರಮಣ್ ಆಗಿದ್ದೇನೆ. ಸೀರಿಯಲ್ ಎಂದಾಗ ಏನೋ ಒಂದು ರೀತಿಯ ಆತಂಕವಿದ್ದುದು ನಿಜ. ಆದರೆ ಜನರ ಮನಸ್ಸಲ್ಲಿ ಶಾಶ್ವತ ಸ್ಥಾನ ಪಡೆಯಬೇಕಿದ್ದರೆ ಸಿನಿಮಾಗಿಂತ ಸೀರಿಯಲ್ ಮುಖ್ಯ' ಎನ್ನುವ ಈ ಚಾಕೊಲೇಟ್ ಬಾಯ್ ಚಂದನವನದಲ್ಲೂ ತಮ್ಮ ಛಾಪು ಮೂಡಿಸಿದ್ದಾಗಿದೆ. 'ಚಾರುಲತಾ' ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಚಂದನವನದಲ್ಲಿ ತಮ್ಮ ಸಿನಿ ಜರ್ನಿ ಆರಂಭಿಸಿದ ಸ್ಕಂದ, ಯೂಟರ್ನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 'ಕಾನೂರಾಯಣ' ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ ಸ್ಕಂದ ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿಯಲ್ಲೂ ಬಣ್ಣ ಹಚ್ಚಿದ್ದಾರೆ.
![Skanda Ashok](https://etvbharatimages.akamaized.net/etvbharat/prod-images/kn-bng-skandaashok-radharamana-serial-ka10018_04102019083441_0410f_1570158281_263.jpg)