ರಾಜಾ.ಬಿ, ಶೆಟ್ಟಿ ಹಾಗೂ ವರ್ಜೀನಿಯ ರೊಡ್ರಿಗೀಸ್ ನಟಿಸಿರುವ ಮಹಿರ ಚಿತ್ರ ಇಂದು ತೆರೆಕಂಡಿದ್ದು, ಇದರ ವಿಮರ್ಶೆ ಇಲ್ಲಿದೆ ನೋಡಿ.
ಮಾಯಾ (ವರ್ಜೀನಿಯ ರೊಡ್ರಿಗೀಸ್) ಹಾಗೂ ಅವರ ಮಗಳು ಆದ್ಯ (ಚೈತ್ರ ಆಚಾರ್) ಕಡಲ ತೀರದ ಬಳಿ ಹೊಟೇಲ್ ನಡೆಸುತ್ತಿರುತ್ತಾರೆ. ಇವರ ನೆಮ್ಮದಿಗೆ ಭಂಗ ಬರುವುದು ಫೇಸ್ ಬುಕ್ ಅಲ್ಲಿ ಆದ್ಯ ಕಾಲೇಜಿನ ಹುಡುಗನಿಗೆ ಹೊಡೆದ ಸನ್ನಿವೇಶದಿಂದ. ಆದ್ಯ ಕಾಲೇಜಿನಲ್ಲಿ ಬಜಾರಿ ಹುಡುಗಿ. ಅವಳ ಬಜಾರಿತನ ಪತ್ರಿಕೆಯಲ್ಲೂ ಪ್ರಕಟ ಆಗುವಾಗ ಅವಳ ಅಮ್ಮ ಮಾಯಾ ಫೋಟೋ ಸಹ ಅಚ್ಚಾಗುವುದು. ಆಗ ಗೊತ್ತಾಗುವುದೇ ಈ ಮಾಯಾ ಬೇರಾರೂ ಅಲ್ಲ ಅಂಡರ್ ಕವರ್ ಏಜೆಂಟ್ ಇಂಡಿಯ ಇಂಟೆಲಿಜೆನ್ಸ್ ವಿಭಾಗದಲ್ಲಿ ದೇವಕಿ ಆಗಿ ದೊಡ್ಡ ಹೆಸರು ಮಾಡಿರುವ ವ್ಯಕ್ತಿ ಎಂದು.
ಟೆರರಿಸ್ಟ್ ಜಾಲ ಭೇದಿಸುವಾಗ ತೌಸಿಫ್ ಬಳಿ ಇರುವ ಅಮೂಲ್ಯವಾದ ಮಾಹಿತಿ ಪಡೆದಿದ್ದಾಳೆ ಎಂದು ಅವಳ ಸಂಸ್ಥೆಯ ತಿಳಿವಳಿಕೆ. ಆದರೆ, ವಿಚಾರ ಬೇರೇನೆ ಇರುತ್ತದೆ. ದೇವಕಿ ಹಾಗೂ ಅವರ ಪತಿ ಕಿಶೋರ್ (ದಿಲೀಪ್ ರಾಜ್) ಮಾಡುವ ದೊಡ್ಡ ಸಾಹಸದಲ್ಲಿ ತೌಸಿಫ್ ಕಡೆಯವರು ಕಿಶೋರ್ ಅನ್ನು ಹತ್ಯೆ ಮಾಡಿದಾಗ, ದೇವಕಿ ತೌಸಿಫ್ನನ್ನು ಮುಗಿಸುತ್ತಾಳೆ. ಆದರೆ, ಅವರ ಡಿಪಾರ್ಟ್ಮೆಂಟ್ ವ್ಯಕ್ತಿಗಳು ತೌಸಿಫ್ ನಿಂದ ದೇವಕಿ ಅಮೂಲ್ಯವಾದ ಡಾಟಾ ಪಡೆದಿದ್ದಾಳೆ ಎಂದು ತಿಳಿದುಕೊಳ್ಳುತ್ತಾರೆ. ಅತ್ತ ಕಡೆ ಟೆರರಿಸ್ಟ್ ಗುಂಪು ಸಹ ದೇವಕಿ ಮೇಲೆ ಸೇಡು ತಿರಿಕೊಳ್ಳಲು ಹೊಂಚು ಹಾಕುತ್ತಿರುತ್ತದೆ.
![mahira](https://etvbharatimages.akamaized.net/etvbharat/prod-images/mahira-poster-11564107801474-16_2607email_1564107812_541.jpg)
ದೇವಕಿ ಕೆಲವು ವರ್ಷಗಳು ಕಣ್ಮರೆಯಾಗಿ ನೆಮ್ಮದಿಯ ಜೀವನಕ್ಕೆ ಮುಂದಾಗಿರುವಾಗ ಅವಳ ಫೋಟೋ ಪತ್ರಿಕೆಯಲ್ಲಿ ಬರುವುದು ಎಲ್ಲ ಯಡವಟ್ಟಿಗೆ ಕಾರಣ ಆಗುತ್ತದೆ. ಬೆಳದ ಮಗಳು ಆದ್ಯ ಜೊತೆ ಅವಳಿಗೆ ದಾರೀನೇ ಇಲ್ಲದ ಜೀವನ. ದೇವಕಿ ಅಲಿಯಾಸ್ ಮಾಯಾ ಈಗ ತನ್ನ ಮೇಲಿರುವ ಆರೋಪವನ್ನು ಸರಿಗಟ್ಟಬೇಕು. ಆಗ ದೇವಕಿ ರಕ್ಷಣೆಗೆ ಬರುವುದೇ ಪ್ರತಾಪ್ (ರಾಜ್.ಬಿ. ಶೆಟ್ಟಿ). ತನ್ನ ಮೇಲಧಿಕಾರಿಯೇ ಮಾಡುತ್ತಿರುವ ಕೃತ್ಯವನ್ನು ತನ್ನದೇ ಆದ ರೀತಿಯಲ್ಲಿ ಪ್ರತಾಪ್ ಲೆಕ್ಕ ಹಾಕುವುದು ದೇವಕಿ ದಾರಿಗೆ ಸ್ವಲ್ಪವಾದರೂ ರಕ್ಷಣೆ ಸಿಕ್ಕುತ್ತದೆ.
ದೇವಕಿ ತನ್ನ ಬಳಿ ಇಲ್ಲದೇ ಇರುವ ಅಮೂಲ್ಯವಾದ ಡೇಟಾ ಹೇಗೆ ಪಡೆಯುತ್ತಾಳೆ, ಒಂದು ಕಡೆ ಟೆರರಿಸ್ಟ್ ಹಾಗೂ ತನ್ನ ಸಂಸ್ಥೆಯ ವಿರೋಧ ಕಟ್ಟಿಕೊಂಡಿರುವುದನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದನ್ನೂ ನೀವು ತೆರೆಯ ಮೇಲೆ ನೋಡಬಹುದು.
ಮೊದಲ ಕನ್ನಡ ಚಿತ್ರದಲ್ಲಿ ವರ್ಜೀನಿಯ ರೊಡ್ರಿಗೀಸ್ ಕಷ್ಟ ಪಟ್ಟಿದ್ದಾರೆ. ತಮ್ಮ ಪಾತ್ರವನ್ನು ಅರ್ಥ ಮಾಡಿಕೊಂಡು ಹೊಡೆದಾಟದ ಸನ್ನಿವೇಶಗಳು ಸಖತ್ ಆಗಿ ನಿರ್ವಹಿಸಿದ್ದಾರೆ. ಅವರ ವಯಸ್ಸಿಗೆ ತಕ್ಕ ಪಾತ್ರ. ಸಾಹಸ ನಿರ್ದೇಶಕ ಚೇತನ್ ದಿ ಸೌಜ ಕೆಲಸ ಬಹಳ ಅಚ್ಚುಕಟ್ಟಾಗಿದೆ. ಮಾಲಾಶ್ರೀ, ರಾಗಿಣಿ, ಆಯೇಷಾ ನಂತರ ಮತ್ತೊಬ್ಬ ಆ್ಯಕ್ಷನ್ ಹೀರೋಯಿನ್ ಸ್ಥಳಕ್ಕೆ ವರ್ಜೀನಿಯ ಜಾಗ ಮಾಡಿಕೊಂಡಿದ್ದಾರೆ. ಇವರ ಎತ್ತರ ಹಾಗೂ ಮೈಕಟ್ಟು ಪಾತ್ರಕ್ಕೆ ಸಹಕರಿಸಿದೆ.
ಮುದ್ದಾದ ಮಗಳಾಗಿ ಚೈತ್ರ ಆಚಾರ್ ಪ್ರತಿಭೆ ಗಮನ ಸೆಳೆಯುತ್ತದೆ. ಇವಳು ಮುಂದಿನ ದಿವಸಗಳಲ್ಲಿ ಒಳ್ಳೆಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ರಾಜ್.ಬಿ. ಶೆಟ್ಟಿ ಪಾತ್ರ ಆರಂಭದಲ್ಲಿ ಕಾಮಿಡಿ ಅನ್ನಿಸಿದರೆ ಅದು ಅಂತ್ಯದಲ್ಲಿ ಹೆಚ್ಚು ಮಾರ್ಕ್ಸ್ ಪಡೆದುಬಿಡುತ್ತದೆ. ಬಾಲಾಜಿ ಮನೋಹರ್, ಎಂ.ಕೆ. ಮಠ, ಗೋಪಾಲಕೃಷ್ಣ ದೇಶಪಾಂಡೆ, ಕೆ.ಎಸ್.ಶ್ರೀಧರ್ ಪಾತ್ರಗಳು ಆಯ್ಕೆ ಸರಿಯಾಗಿದೆ ಮತ್ತು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಕನ್ನಡ ಚಿತ್ರಕ್ಕೆ ಬುದ್ಧಿವಂತ ನಿರ್ದೇಶಕ ಮಹೇಶ್ ಗೌಡ ಆಗಮನ ಆಗಿದೆ. ಇವರು ಮಾಡಿಕೊಂಡಿರುವ ಚಿತ್ರಕಥೆ ಮಮತೆಯ ಜೊತೆ ಎದುರಾಳಿಗಳ ಮರ್ಧನ ಬೆರಸುವಿಕೆ ವಾರೆ ವಾಹ್ ಅನ್ನುವಂತಿದೆ. ಚಿತ್ರ ಸ್ವಲ್ಪ ಎಳೆತ ಆಯಿತು ಅನ್ನುವುದು ಬಿಟ್ಟರೆ ಮಿಕ್ಕಂತೆ ಸೆಳತವೆ ಜಾಸ್ತಿ. ಪ್ರೇಕ್ಷಕರನ್ನು ಹಿಡಿದು ಕೂಡಿಸುವ ಕಲೆಗಾರಿಕೆಯನ್ನು ಚನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಪ್ರಥಮ ನಿರ್ದೇಶನದಲ್ಲಿ ಒಂದು ಕುತೂಹಲಕಾರಿ ಸಿನಿಮಾ ಸಾಹಸದ ಸನ್ನಿವೇಶಗಳು ಈ ಚಿತ್ರದ ಹೈಲೈಟ್.
ಮಹಿರ ಏನು ಅಂತ ಕೇಳಿದರೆ ಇಲ್ಲಿ ಮ ಅಂದರೆ ಮಾತೆ, ಹೀರ ಅನ್ನುವುದೇ ಸಸ್ಪೆನ್ಸ್. ಅದನ್ನು ಕೊನೇ ವರೆಗೂ ನೀವು ಕುಳಿತು ನೋಡಿದಾಗ ಇನ್ನಷ್ಟು ಅಡಗಿಸಿದ್ದ ಅಂಶಗಳು ಪ್ರೇಕ್ಷಕನಿಗೆ ಹುಬ್ಬೇರಿಸುವಂತೆ ಮಾಡುತ್ತದೆ. ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುವುದಕ್ಕೆ ಏನು ಬೇಕೋ ಅದನ್ನು ಮಹೇಶ್ ಗೌಡ ನೀಡಿರುವ ರೀತಿ ಚಿತ್ರದ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಪೇರಿಸಿರುವ ಎರಡು ಗೀತೆಗಳು, ಹೆಜ್ಜೆ ಹೆಜ್ಜೆಗು ಚಿತ್ರದ ದಿಕ್ಕೂ ಬದಲಿಸುತ್ತಾ ನೋಡುಗರ ಕುತೂಹಲ ಕೆರಳಿಸುತ್ತಾ ಹೋಗುತ್ತಾರೆ.
ಇಬ್ಬರು ಸಂಗೀತ ನಿರ್ದೇಶಕರುಗಳು ನೀಲಿಮ ರಾವ್ ಹಾಗೂ ರಾಕೇಶ್ ಅವರಿಂದ ಎರಡು ಹಾಡುಗಳು ಸುಮಧುರವಾಗಿವೆ. ಚಿತ್ರದ ಅಂತ್ಯದ ಹೊತ್ತಿಗೆ ಬರುವ ಹಾಡು ಬಹಳವಾಗಿ ಕಾಡುತ್ತದೆ. ಮಿಥುನ್ ಮುಕುಂದನ್ ಹಿನ್ನೆಲೆ ಸಂಗೀತ ಚಿತ್ರದ ಓಟಕ್ಕೆ ಉಪಕಾರವಾಗಿದೆ.
ಛಾಯಾಗ್ರಾಹಕ ಕೀರ್ತನ್ ಪೂಜಾರಿ ಹೊರಾಂಗಣ ಹಾಗೂ ಒಳಾಂಗಣ ದೃಶ್ಯಗಳನ್ನು ಕಣ್ಣಿಗೆ ಹಿತ ಆಗುವ ರೀತಿ ಸೆರೆ ಹಿಡಿದ್ದಾರೆ. 148 ನಿಮಿಷಗಳನ್ನು ಸ್ವಲ್ಪ ತಗ್ಗಿಸುವ ಸಾಧ್ಯತೆ ಸಂಕಲನಕಾರ ಆಶಿಕ್ ಅವರಿಗೆ ಇತ್ತು.
ಕುತೂಹಲ ಬಯಸುವವರಿಗೆ ಮತ್ತು ಸಾಹಸ ಇಷ್ಟ ಪಡುವವರಿಗೆ ಜ್ಯಾಕ್ ಫ್ರೂಟ್ ಪ್ರೊಡಕ್ಷನ್ ನಿರ್ಮಾಪಕ ವಿವೇಕ್ ಕೋಡಪ್ಪ ನಿಜವಾದ ಹಲಸಿನ ಹಣ್ಣನ್ನೇ ನೀಡಿದ್ದಾರೆ. ಲಂಡನ್ ಅಲ್ಲಿ ಇದ್ದ ಸ್ನೇಹಿತರು ನಿರ್ದೇಶಕ ಮಹೇಶ್ ಗೌಡ ಹಾಗೂ ನಿರ್ಮಾಪಕ ವಿವೇಕ್ ಕೋಡಪ್ಪ ಆಯ್ಕೆ ಮಾಡುವುದರಲ್ಲಿ ಜಾಗರುಕರಾಗಿ ಹೆಜ್ಜೆ ಇಟ್ಟಿದ್ದಾರೆ.