ನಿರ್ದೇಶಕ ಯೋಗರಾಜ್ ಭಟ್ ಸದ್ಯಕ್ಕೆ ಗಾಳಿಪಟ-2 ಚಿತ್ರದ ಬ್ಯುಸಿಯಲ್ಲಿದ್ದಾರೆ. ಈ ಸಿನಿಮಾ ಕೆಲಸಗಳು ಮುಗಿಯುವ ಮುನ್ನವೇ ಮತ್ತೊಂದು ಹೊಸ ಸಿನಿಮಾಗೆ ಅವರು ಕೈ ಹಾಕಿದ್ದಾರೆ. ಆದರೆ ಈ ಹೊಸ ಸಿನಿಮಾವನ್ನು ಅವರು ನಿರ್ಮಿಸುತ್ತಿದ್ದಾರೆ. ರವಿ ಶಾಮನೂರ್ ಅವರೊಂದಿಗೆ ಸೇರಿ ಯೋಗರಾಜಭಟ್, 'ಪದವಿಪೂರ್ವ' ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

'ಪದವಿಪೂರ್ವ' ಸಿನಿಮಾ ಇತ್ತೀಚೆಗೆ ಬೆಂಗಳೂರಿನ ರಾಜಾಜಿನಗರದ, ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದೆ. ಯೋಗರಾಜ್ ಭಟ್ ಕ್ಯಾಮರಾ ಚಾಲನೆ ಮಾಡಿದರೆ, ರವಿ ಶಾಮನೂರು ಪುತ್ರಿ ಸೃಷ್ಠಿ ಶಾಮನೂರ್ ಚಿತ್ರಕ್ಕೆ ಕ್ಲಾಪ್ ಮಾಡಿದ್ದಾರೆ.ಯುವ ನಟ ಪೃಥ್ವಿ ಶಾಮನೂರ್ ಹಾಗೂ ಹೊಸ ಪ್ರತಿಭೆ ಅಂಜಲಿ ಅನೀಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ವಿಕಟ ಕವಿ ಯೋಗರಾಜ್ ಭಟ್ ಬಳಿ, ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿರುವ ಹರಿಪ್ರಸಾದ್ ಜಯಣ್ಣ, ಈ ಪದವಿಪೂರ್ವ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಮಧು ತುಂಬಕೆರೆ ಸಂಕಲನ ಹಾಗೂ ಸಂತೋಷ್ ರೈ ಪತಾಜೆ ಅವರ ಛಾಯಾಗ್ರಹಣ ಇದೆ. ಚಿತ್ರದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಬೆಂಗಳೂರಿನಲ್ಲಿ ಆರಂಭವಾಗಿದೆ. ಎರಡನೇ ಹಂತದ ಚಿತ್ರೀಕರಣವನ್ನು ಮಲೆನಾಡಿನ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲು ಚಿತ್ರತಂಡ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಉಳಿದಂತೆ ಯಾರೆಲ್ಲಾ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.
