ಥಿಯೇಟರ್ಗಳು ಓಪನ್ ಆಗಿ ಸಿನಿಮಾಗಳು ಬಿಡುಗಡೆ ಆಗದಿದ್ದರೂ ಹೊಸ ಹೊಸ ಸಿನಿಮಾಗಳು ಮಾತ್ರ ಪ್ರತಿದಿನ ಸೆಟ್ಟೇರುತ್ತಲೇ ಇವೆ. ಚಿತ್ರೀಕರಣಕ್ಕೆ ಅನುಮತಿ ನೀಡಿದಾಗಿನಿಂದ ಅನೇಕ ಸಿನಿಮಾಗಳು ಸೆಟ್ಟೇರಿವೆ. 'ಅಗ್ನಿಪ್ರವಾ' ಎಂಬ ಹೊಸ ಸಿನಿಮಾವೊಂದು ತಯಾರಾಗುತ್ತಿದ್ದು ನವೆಂಬರ್ 23 ರಂದು ಚಾಮರಾಜಪೇಟೆಯಲ್ಲಿರುವ ಕಲಾವಿದರ ಭವನದಲ್ಲಿ ಮುಹೂರ್ತ ಆಚರಿಸಿಕೊಂಡಿದೆ.
ವಿಶೇಷ ಎಂದರೆ ಈ ಸಿನಿಮಾಗೆ ಟಾಲಿವುಡ್ ನಿರ್ದೇಶಕ ಎಸ್.ಎಸ್. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬಳಿ ಕೆಲಸ ಮಾಡುತ್ತಿದ್ದ ಸುರೇಶ್ ಆರ್ಯ ಎಂಬುವವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ವರ್ಷ ತಿಮ್ಮಯ್ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವರ್ಷ ಈಗಾಗಲೇ 4-5 ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಿಷ್ಯ ಸುರೇಶ್ ಆರ್ಯಗೋಸ್ಕರ ವಿಜಯೇಂದ್ರ ಪ್ರಸಾದ್ ಮುಹೂರ್ತಕ್ಕೆ ಆಗಮಿಸಿದ್ದರು. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಅಗ್ನಿ ಪ್ರವಾ ಚಿತ್ರಕ್ಕೆ ಡಾ. ರಾಜ್ ಕುಮಾರ್ ಹಿರಿಯ ಪುತ್ರಿ ಲಕ್ಷ್ಮಿ ಮತ್ತು ಪತಿ ಗೋವಿಂದ್ ರಾಜ್ ಕ್ಲಾಪ್ ಮಾಡಿದರೆ, ವಿಜಯೇಂದ್ರ ಪ್ರಸಾದ್ ಕ್ಯಾಮರಾ ಚಾಲನೆ ಮಾಡಿ ಈ ಸಿನಿಮಾ ಕಥೆ ಬಹಳ ಅದ್ಭುತವಾಗಿದೆ, ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಸುರೇಶ್ ಆರ್ಯ ಸುಮಾರು 5 ವರ್ಷಗಳಿಂದ ವಿಜಯೇಂದ್ರ ಪ್ರಸಾದ್ ಹಾಗೂ ಎಸ್.ಎಸ್. ರಾಜಮೌಳಿ ಬಳಿ ಕಥೆಗಾರನಾಗಿ ಕೆಲಸ ಮಾಡಿದ್ದಾರೆ. ಇದು ಸುರೇಶ್ ನಿರ್ದೇಶನದ ಮೊದಲ ಸಿನಿಮಾ. ವರ್ಷ ತಿಮ್ಮಯ್ಯ ಈ ಚಿತ್ರದಲ್ಲಿ ನಟಿಸುತ್ತಿರುವುದಲ್ಲದೆ ನಿರ್ಮಾಣ ಕೂಡಾ ಮಾಡುತ್ತಿದ್ದಾರೆ. 'ರಾಮಾ ರಾಮಾ ರೇ' ಸಿನಿಮಾ ಖ್ಯಾತಿಯ ಕ್ಯಾಮರಾಮ್ಯಾನ್ ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಲಿದ್ದಾರೆ.ಡಿಫರೆಂಟ್ ಡ್ಯಾನಿ, ಈ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಲಿದ್ದಾರೆ. ಉಳಿದ ಕಲಾವಿದರ ಆಯ್ಕೆ ಸದ್ಯದಲ್ಲೇ ಅಂತಿಮವಾಗಲಿದೆ.