ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕನ್ನಡ ಚಿತ್ರರಂಗದ ನಾಯಕತ್ವ ವಹಿಸಿಕೊಂಡಿರುವುದು ಎಲ್ಲರಿಗೂ ಸಂತೋಷವಾಗಿದೆ. ಕನ್ನಡ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಡಿಸಿಎಂ ಜೊತೆ ಮಾತನಾಡಿರುವ ಅವರು ಈಗ ವಿನೂತನ ಪುಸ್ತಕವೊಂದಕ್ಕೆ ಮುನ್ನುಡಿ ಬರೆದು ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪತ್ರಕರ್ತೆ ಶ್ರುತಿ ಇಂದಿರ ಲಕ್ಷ್ಮಿನಾರಾಯಣ ಬರೆದಿರುವ 'ಫಿಲ್ಮಿ ಎಸ್ಕೇಪ್ಸ್ ಇನ್ ಕರ್ನಾಟಕ' ಪುಸ್ತಕಕ್ಕೆ ಶಿವಣ್ಣ ಮುನ್ನುಡಿ ಬರೆದಿದ್ದಾರೆ. ಶ್ರೀನಿವಾಸ ಕಲ್ಯಾಣ, ಬೀರಬಲ್ ಚಿತ್ರದ ನಾಯಕ ಎಂ.ಜಿ. ಶ್ರೀನಿವಾಸ್ ಪತ್ನಿಯೇ ಶ್ರುತಿ. ಈಕೆ ಇಂಗ್ಲೀಷ್ನಲ್ಲಿ ಪುಸ್ತಕ ಬರೆದಿದ್ದು ಇವರಿಗೆ ಅನೇಕ ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟು ಇದೆ. 62 ಪುಟಗಳ ಈ ಪುಸ್ತಕವನ್ನು ಶ್ರುತಿ ಲೋನ್ಲಿ ಪ್ಲಾನೆಟ್ ಸಹಯೋಗದೊಂದಿಗೆ ಹೊರತಂದಿದ್ದಾರೆ.
'ಫಿಲ್ಮಿ ಎಸ್ಕೇಪ್ಸ್ ಇನ್ ಕರ್ನಾಟಕ' ಪುಸ್ತಕದಲ್ಲಿ ಸಿನಿಮಾಗಳು, ಲೊಕೇಶನ್ ಹಾಗೂ ರಾಜ್ಯದ ಸಂಸ್ಕೃತಿ ಬಗ್ಗೆ ತಿಳಿಸಲಾಗಿದೆ. ಕರ್ನಾಟಕದ ಅಪರೂಪದ ತಾಣಗಳು, ಚಿತ್ರೀಕರಣಕ್ಕೆ ಯೋಗ್ಯವಾದ ಸ್ಥಳಗಳು, ಆ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿರುವ ಸಿನಿಮಾಗಳ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಇದರೊಂದಿಗೆ ಚಾಮರಾಜನಗರದಿಂದ ಬೀದರ್ವರೆಗಿನ ಆಹಾರ ಪದ್ಧತಿ ಬಗ್ಗೆ ಸುಂದರ ಫೋಟೋಗಳ ಸಹಿತ ಶ್ರುತಿ ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕ ಈಗಾಗಲೇ ಬಿಡುಗಡೆ ಆಗಿದೆ.