ಚಿತ್ರರಂಗ ಕಳೆದ ಎರಡೂವರೆ ತಿಂಗಳಿನಿಂದ ಸಾಕಷ್ಟು ನಷ್ಟ ಅನುಭವಿಸಿದ್ದು ಚಿತ್ರರಂಗದ ಕಾರ್ಮಿಕರಿಗೆ ಕೆಲವರು ಸಹಾಯ ಮಾಡುತ್ತಾ ಬಂದಿದ್ದಾರೆ. ಇದೀಗ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ನಿರ್ದೇಶಿಸಿ ನಟಿಸುತ್ತಿರುವ 'ಸಲಗ' ಚಿತ್ರತಂಡ ಕೂಡಾ ಥಿಯೇಟರ್ಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದೆ.
ಸಂತೋಷ್ ಚಿತ್ರಮಂದಿರದ ಬಳಿ ಇರುವ ಡಾ. ರಾಜ್ಕುಮಾರ್ ಪುತ್ಥಳಿಗೆ ದುನಿಯಾ ವಿಜಯ್, ಡಾಲಿ ಧನಂಜಯ್ ಸಂಭಾಷಣೆಕಾರ ಮಾಸ್ತಿ ಹಾಗೂ 'ಸಲಗ' ಚಿತ್ರದ ನಿರ್ಮಾಪಕ ಹೂ ಮಾಲೆ ಹಾಕಿ ಅಣ್ಣಾವ್ರಿಗೆ ನಮಿಸಿ ನಂತರ ನರ್ತಕಿ ಚಿತ್ರಮಂದಿರ ಬಳಿ ನಗರದಲ್ಲಿರುವ ಪ್ರಮುಖ ಚಿತ್ರಮಂದಿಗಳಲ್ಲಿ ಕೆಲಸ ಮಾಡುವ ಸುಮಾರು 260 ಕಾರ್ಮಿಕರಿಗೆ ದಿನಸಿ ಕಿಟ್ಗಳನ್ನು ವಿತರಿಸಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ದುನಿಯಾ ವಿಜಯ್, ಲಾಕ್ಡೌನ್ನಿಂದ ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬಹಳ ಸಮಸ್ಯೆ ಆಗಿದೆ. ಇದನ್ನು ಅರಿತ ನಮ್ಮ ನಿರ್ಮಾಪಕರು ಅವರ ನೆರವಿಗೆ ನಿಂತಿದ್ದಾರೆ. ಇವತ್ತು ಒಂದು ಬೈಕ್ ಇದ್ದರೆ ಸಾಕು 10-15 ಸಾವಿರ ರೂಪಾಯಿ ಸಂಪಾದನೆ ಮಾಡಬಹುದು ಅದರೆ ಸಿನಿಮಾದವರಿಗೆ ಕಷ್ಟ. ನಮಗೆ ಸಿನಿಮಾ ಬಿಟ್ಟು ಬೇರೆ ಪ್ರಪಂಚ ಇಲ್ಲ ಎಂದು ದುನಿಯಾ ವಿಜಯ್ ಹೇಳಿದರು.
ನಂತರ ಮಾತನಾಡಿದ ಡಾಲಿ ಧನಂಜಯ್, ಲಾಕ್ಡೌನ್ ನಂತರ ಬಹುತೇಕ ಎಲ್ಲಾ ಕೆಲಸಗಳು ಆರಂಭ ಆಗುತ್ತಿದೆ. ಆದರೆ ಚಿತ್ರರಂಗದ ಚಟುವಟಿಕೆಗಳಿಗೆ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಆದ್ದರಿಂದ ಕಷ್ಟದಲ್ಲಿರುವ ಚಿತ್ರಮಂದಿರಗಳ ಕಾರ್ಮಿಕರಿಗೆ ಇಂದು ದಿನಸಿ ಕಿಟ್ ನೀಡಿದ್ದೇವೆ. ಲಾಕ್ಡೌನ್ ಆರಂಭವಾದಾಗಿನಿಂದಲೂ ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿಕೊಂಡು ಬಂದಿದ್ದೇವೆ. ಈ ಕೊರೊನಾ ನಮಗೆ ಹೊಸ ಅನುಭವ ಮಾತ್ರವಲ್ಲದೆ ಹೊಸ ಪಾಠವನ್ನೂ ಕಲಿಸಿದೆ ಎಂದು ಧನಂಜಯ್ ಹೇಳಿದರು.