ಕಂಚಿನ ಕಂಠದ ಗಾನ ಗಂಧರ್ವ, ಭಾರತ ಚಿತ್ರರಂಗ ಕಂಡ ಮಹಾನ್ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನ. ಇಂದು ಜೀವಂತವಾಗಿರುತ್ತಿದ್ದರೆ ಅವರಿಗೆ 75 ವರ್ಷವಾಗುತ್ತಿತ್ತು. ಆದ್ರೆ, ಲೌಕಿಕ ಜಗತ್ತಿನಲ್ಲಿ ಎಸ್ಪಿಬಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಹಾಡುಗಳು ಚಿರಸ್ಮರಣೀಯವಾಗಿವೆ.
ತಮ್ಮ ಅದ್ಭುತ ಹಾಡುಗಾರಿಕೆಯಿಂದಲೇ ವಿಶ್ವದಾಖಲೆ ಬರೆದಿರುವ ಎಸ್ಪಿಬಿ ಯಾವುದೇ ಹಾಡನ್ನಾದರೂ 15 ನಿಮಿಷದಲ್ಲಿ ಅರ್ಥ ಮಾಡಿಕೊಂಡು ಹಾಡುತ್ತಿದ್ದರಂತೆ. ಯಾವುದೇ ವಿಶೇಷ ತರಬೇತಿ ಪಡೆಯದೆ ದೇಶದ ವಿವಿಧ ಭಾಷೆಗಳಲ್ಲಿ 40,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು ಒಂದು ವಿಶೇಷ ದಾಖಲೆ. ಅಷ್ಟೇ ಅಲ್ಲ, 60ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಯಾವುದೇ ನಟನಿಗಾದರೂ ಎಸ್ಪಿಬಿ ಅವರ ಧ್ವನಿ ಹೋಲುತ್ತಿತ್ತು. ಇದೇ ಕಾರಣಕ್ಕೋ ಏನೋ, ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ನಟರ ಚಿತ್ರಗಳಿಗೂ ಎಸ್ಪಿಬಿ ಧ್ವನಿಯಾಗಿದ್ದಾರೆ.
16 ಭಾಷೆ, 40 ಸಾವಿರಕ್ಕೂ ಅಧಿಕ ಹಾಡುಗಳು, ಮೂರು ತಲೆಮಾರು, ಅನೇಕ ಪ್ರಶಸ್ತಿಗಳು, ಅಪಾರ ಗೌರವ.. ಹೀಗೆ 74 ವರ್ಷದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಾಧನೆಗೆ ಗಡಿರೇಖೆಗಳ ಅಡ್ಡಿ ಇರಲಿಲ್ಲ. 'ನನಗೆ ಕನ್ನಡಿಗರು ನೀಡಿದ ಪ್ರೀತಿ, ವಾತ್ಸಲ್ಯ ಬೇರೆ ಯಾರಿಂದಲೂ ದೊರಕಿಲ್ಲ. ಮುಂದಿನ ಜನ್ಮವೊಂದಿದ್ದರೆ ನಾನು ಕನ್ನಡ ನಾಡಿನಲ್ಲಿ ಜನಿಸಲು ಬಯಸುತ್ತೇನೆ' ಎಂದು ಅವರೊಮ್ಮೆ ಕರುನಾಡಿಗೆ ಮನದಾಳದಿಂದ ಕೃತಜ್ಞತೆ ಸಲ್ಲಿಸಿದ್ದರು.

1946ರ ಜೂನ್ 4 ರಂದು ಆಂಧ್ರಪ್ರದೇಶದ ಚಿತ್ತೂರಿನ ಕೊನೇಟಮ್ಮಪೇಟಾದಲ್ಲಿ ಜನಿಸಿದ ಎಸ್ಪಿಬಿ, ಆಂಧ್ರದಲ್ಲಿ ಹುಟ್ಟಿ ಬೆಳೆದರೂ, ಹಿನ್ನೆಲೆಗಾಯಕನಾಗಿ ಅವರು ಹಾಡಿದ ಎರಡನೇ ಹಾಡು ಕನ್ನಡದ್ದಾಗಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ ಇವರ ಕಂಠಸಿರಿ ಮೇಳೈಸಿದೆ. ಹರಿಕಥೆ ಹೇಳುತ್ತಿದ್ದ ತಂದೆ ಎಸ್.ಪಿ.ಸಾಂಬಮೂರ್ತಿಯವರಿಂದಲೇ ಪ್ರೇರಣೆ ಪಡೆದ ಎಸ್ಪಿಬಿ ಹಾಡುವುದು, ಹಾರ್ಮೋನಿಯಂ ಹಾಗೂ ಕೊಳಲನ್ನು ತಮ್ಮಷ್ಟಕ್ಕೆ ತಾವೇ ನುಡಿಸುತ್ತಾ ಸಂಗೀತ ಲೋಕದತ್ತ ಆಕರ್ಷಣೆಗೊಂಡರಂತೆ. ನಂತರ ವಿದ್ಯಾರ್ಥಿಯಾಗಿ ಶಾಸ್ತ್ರೀಯ ಸಂಗೀತಾಭ್ಯಾಸವನ್ನೂ ಮಾಡಿದರು.
ಮುಂದೆ ಅಪ್ರತಿಮ ಗಾಯಕರಾಗಿ ಬೆಳೆದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಎಂಜಿನಿಯರ್ ಆಗಬೇಕೆಂದು ಬಯಸಿದ್ದರು ಎಂಬುದು ಅಚ್ಚರಿಯಾದರೂ ಸತ್ಯ. ಶ್ರೀಪತಿ ಪಂಡಿತಾರಾಧುಲ ಬಾಲಸುಬ್ರಮಣ್ಯಂ ಎಂಬುದು ಇವರ ಪೂರ್ಣ ನಾಮಧೇಯ. ಎಂಜಿನಿಯರ್ ಆಗಬೇಕು ಅನ್ನೋದು ತನ್ನ ಮತ್ತು ತಂದೆ ಸಾಂಬಮೂರ್ತಿಯವರ ಕನಸೂ ಆಗಿತ್ತಂತೆ. ಈ ಹಿನ್ನೆಲೆಯಲ್ಲಿ ಅನಂತಪುರದ ಜೆಎನ್ಟಿಯುನಲ್ಲಿ ಎಂಜಿನಿಯರಿಂಗ್ ಕೋರ್ಸ್ಗೆ ಸೇರಿಕೊಂಡರು. ಆದಾಗ್ಯೂ, ಟೈಫಾಯಿಡ್ ಖಾಯಿಲೆ ಬಾಧಿಸಿದ್ದು ಎಂಜಿನಿಯರಿಂಗ್ ಶಿಕ್ಷಣವನ್ನು ಸ್ಥಗಿತಗೊಳಿಸಬೇಕಾಯಿತು.
ಈ ಬಗ್ಗೆ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದ ಎಸ್.ಪಿ.ಬಿ, ‘ನಾನು ಯಾವತ್ತೂ ಗಾಯಕನಾಗಬೇಕೆಂದು ಕನಸು ಕಂಡವನಲ್ಲ. ಎಂಜಿನಿಯರ್ ಆಗಬೇಕೆಂದು ಬಯಸಿದ್ದೆ. ಆದರೆ ಜಾನಕಿ ಅವರು ಗಾಯಕರನ್ನಾಗಿ ಮಾಡಿದರು’ ಎಂದಿದ್ದರು.

ಹೈದರಾಬಾದ್ನ ನಡೆದ ಹಾಡಿನ ಸ್ಪರ್ಧೆಯೊಂದರಲ್ಲಿ ತೀರ್ಪುಗಾರರಾಗಿದ್ದ ಗಾಯಕಿ ಎಸ್.ಜಾನಕಿ ಅವರು, ಅದೇ ಶೋನಲ್ಲಿ ಮೊದಲ ಸ್ಥಾನ ಪಡೆದ ಹುಡುಗನನ್ನು ಬಿಟ್ಟು ಎರಡನೇ ಸ್ಥಾನ ಪಡೆದಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಹಾಡುವ ಎಲ್ಲಾ ಅನುಕೂಲ ಮಾಡಿಕೊಟ್ಟು, ವೇದಿಕೆಗೆ ಕರೆದುಕೊಂಡು ಬಂದರಂತೆ. ಅಂದಿನಿಂದ ಎಸ್ಪಿಬಿ ಗಾಯನ ಜರ್ನಿ ಶುರುವಾಗಿತ್ತು.
ಸಂಗೀತ ಕ್ಷೇತ್ರಕ್ಕೆ ಎಸ್ಪಿಬಿ ಕೊಡುಗೆ, ಸಾಧನೆ ಪರಿಗಣಿಸಿ ಭಾರತ ಸರ್ಕಾರ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಿದೆ. ಇವರ ನಿರ್ವಹಣೆಯಲ್ಲಿ ಈಟಿವಿ ಕನ್ನಡ ವಾಹಿನಿಯಲ್ಲಿ ಅತ್ಯಂತ ಸೊಗಸಾಗಿ ಮೂಡಿಬರುತ್ತಿದ್ದ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮ ಇಂದಿಗೂ ಜನರ ಮನಸ್ಸಲ್ಲಿ ಅಜರಾಮರವಾಗಿದೆ.
ಹೀಗೆ ಬರೋಬ್ಬರಿ 55 ವರ್ಷಗಳ ಸಿನಿಮಾ ಜರ್ನಿಗೆ ಸೆಪ್ಟೆಂಬರ್ 25, 2020 ರಂದು ಪೂರ್ಣ ವಿರಾಮ ನೀಡಿದ ಗಾನ ಲೋಕದ ಮಾಣಿಕ್ಯ ನಮ್ಮೆಲ್ಲರನ್ನೂ ಅಗಲಿದರು.