ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದಲ್ಲಿ ಬ್ರಾಹ್ಮಣರು ಹಾಗೂ ಅರ್ಚಕರ ಮೇಲೆ ಕಾಲಿಡುವ ದೃಶ್ಯಕ್ಕೆ ಬ್ರಾಹ್ಮಣ ಮಹಾಸಭಾ ಮಂಡಳಿಯಿಂದ ಟೀಕೆ ವ್ಯಕ್ತವಾಗಿದ್ದರಿಂದ ವಿವಾದಿತ ದೃಶ್ಯ ತೆಗೆದು ಹಾಕುವುದಾಗಿ ಚಿತ್ರತಂಡ ಒಪ್ಪಿಕೊಂಡಿದೆ.
ನಿರ್ದೇಶಕ ನಂದ ಕಿಶೋರ್ ಮತ್ತು ನಿರ್ಮಾಪಕ ಬಿ.ಕೆ.ಗಂಗಾಧರ್ ವಿರೋಧ ವ್ಯಕ್ತವಾಗಿರುವ ದೃಶ್ಯ ತೆಗೆಯಲು ನಿರ್ಧರಿಸಿದ್ದರು. ಹಾಗೆಯೇ ನಿರ್ಮಾಪಕ ಬಿ.ಕೆ.ಗಂಗಾಧರ್ ಕೂಡ ಬ್ರಾಹ್ಮಣ ಸಮುದಾಯಕ್ಕೆ ಬಹಿರಂಗವಾಗಿ ಕ್ಷಮೆ ಕೇಳಿದ್ದರು. ಇದೀಗ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ, ಆರ್.ಲಕ್ಷ್ಮಿಕಾಂತ್ ಸೇರಿದಂತೆ ಹಲವು ಬ್ರಾಹ್ಮಣರ ಜೊತೆ ಸಂಜೆ 5 ಗಂಟೆಗೆ ಹೊತ್ತಿಗೆ ಮತ್ತೊಂದು ಸಭೆ ಮಾಡಿ ಸಂಧಾನ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್, ಯಾರ ಭಾವನೆಗೂ ಧಕ್ಕೆ ತರುವ ಉದ್ದೇಶ ಇಲ್ಲ. ಸಮಾಜಕ್ಕೆ ಅಗೌರವ ಮಾಡುವ ಉದ್ದೇಶ ಇಲ್ಲ. ವಿವಾದಿತ ದೃಶ್ಯ ತೆಗೆದು ಹಾಕುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಪೊಗರು ಚಿತ್ರದ ನಿರ್ದೇಶಕ ನಂದ ಕಿಶೋರ್ ಮಾತನಾಡಿ, ಅಖಿಲ ಕರ್ನಾಟಕ ಬ್ರಾಹ್ಮಣ ಸಮುದಾಯಕ್ಕೂ ಹಾಗೂ ಬ್ರಾಹ್ಮಣ ಮಠಾಧೀಶರಿಗೂ ಕ್ಷಮೆ ಕೇಳುತ್ತೇನೆ. ನನ್ನನ್ನು ದಯವಿಟ್ಟು ಕ್ಷಮಿಸಿ, ನೀವು ಹೇಳಿದ ಹಾಗೆ 12 ದೃಶ್ಯಗಳನ್ನು ತೆಗೆಯುತ್ತೇವೆ. ಏನೋ ತಪ್ಪಾಗಿದೆ ಕ್ಷಮಿಸಿ, ಇನ್ಮೇಲೆ ಆ ರೀತಿ ತಪ್ಪು ಆಗದೆ ಇರೋ ಹಾಗೆ ನೋಡಿಕೊಳ್ಳುತ್ತೇನೆ ಎಂದಿದ್ದಾರೆ.
ಓದಿ: ಪೊಗರು ವಿವಾದ: ಫಿಲ್ಮ್ ಛೇಂಬರ್ನಲ್ಲಿ ಹೈಡ್ರಾಮಾ
ಈ ಕುರಿತು ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಆರ್.ಲಕ್ಷ್ಮಿಕಾಂತ್, ನಮ್ಮ ಸಮುದಾಯಕ್ಕೆ ಆದ ಅವಮಾನ ನೋವಿನ ವಿಚಾರ. ಇಂದು ನಮ್ಮ ಪೀಠಾಧ್ಯಕ್ಷರುಗಳು ವಾಣಿಜ್ಯ ಮಂಡಳಿಗೆ ಫೋನ್ ಮಾಡಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ಸಮುದಾಯದಕ್ಕೆ ಅವಮಾನವಾಗುವಂತಹ ಸಿನಿಮಾ ಮಾಡಬಾರದು. ಸಿನಿಮಾದಲ್ಲಿ ತುಂಬಾ ಅಸಹ್ಯವಾದ ಸನ್ನಿವೇಶಗಳಿವೆ, ಅದನ್ನ ತೆಗೆಯಬೇಕು ಎಂದು ಒತ್ತಾಯಿಸಿದರು.