ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಚಿತ್ರ ತೆರೆಕಂಡು ವಿರ್ಮಶಕರಿಂದ ಉತ್ತಮ ಪ್ರತಿಕ್ರಿಯೆ ಬಂದರೂ ಗಲ್ಲಾಪೆಟ್ಟಿಗೆಯಲ್ಲಿ ಹಣ ಗಳಿಸುವಲ್ಲಿ ಸೋತಿತ್ತು. ಹೀಗಾಗಿ ಚಿತ್ರ ನಿರ್ಮಾಣಕ್ಕಾಗಿ ನಿರ್ಮಾಪಕರಿಂದ ದ್ವಾರಕೀಶ್ ಕುಟುಂಬ ಐದು ಕೋಟಿ ಸಾಲ ಪಡೆದಿದ್ದು ಸಕಾಲಕ್ಕೆ ವಾಪಸ್ ನೀಡಿಲ್ಲ ಎಂಬ ಕಾರಣಕ್ಕೆ ಸಿನಿಮಾ ವಿತರಕ ಜಯಣ್ಣ ಮತ್ತು ನಿರ್ಮಾಪಕ ರಮೇಶ್ ಕುಮಾರ್ ದ್ವಾರಕೀಶ್ ಮನೆಗೆ ಬಂದು ಗಲಾಟೆ ಮಾಡಿದ್ದರು. ಹೀಗಾಗಿ ದ್ವಾರಕೀಶ್ ಜಿವ ಬೆದರಿಕೆ ಇದೆ ಎಂದು ಹೆಚ್ ಎಸ್ ಆರ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಈ ಬಗ್ಗೆ ಹಿರಿಯ ನಟ ದ್ವಾರಕೀಶ್ ಮತ್ತವರ ಪುತ್ರ ಮಾಧ್ಯಮಗೋಷ್ಟಿ ನಡೆಸಿದರು. ಮೊನ್ನೆ ನನ್ನ ಮಗ ಯೋಗೀಶ್ ಮನೆಯಲ್ಲಿರಲಿಲ್ಲ. ನಾನು ನನ್ನ ಪತ್ನಿ ಮಾತ್ರ ಇದ್ದೆವು. ಚಿತ್ರ ವಿತರಕ ಜಯಣ್ಣ, ನಿರ್ಮಾಪಕ ರಮೇಶ್ ಕುಮಾರ್ ಸೇರಿದಂತೆ ನಾಲ್ವರು ಮನೆಗೆ ಬಂದಿದ್ದರು. ಏನು ವಿಷಯ ಎಂದು ಮಾತನಾಡದೇ ಏಕಾಏಕಿ ನಿಮ್ಮ ಮಗ ಮೋಸ ಮಾಡಿದ್ದಾನೆ ಎಂದು ಗಲಾಟೆ ಆರಂಭಿಸಿದ್ರು. ನನಗೆ ಮಾತನಾಡಲು ಅವಕಾಶವನ್ನೂ ನೀಡದೆ, ನಿಮ್ಮ ಮಗನನ್ನು ಕೊಲೆ ಮಾಡುತ್ತೇವೆ ಎಂದು ಧಮ್ಕಿ ಹಾಕಿದ್ರು. ಆಯುಷ್ಮಾನ್ ಭವ ಸಿನಿಮಾಗೆ ನೀಡಿದ್ದ ಹಣ ವಾಪಸ್ ನೀಡುವ ವಿಚಾರವಾಗಿ ಗಲಾಟೆ ಮಾಡಿದ್ರು ಅಂತ ದ್ವಾರಕೀಶ್ ಹೇಳಿದ್ರು.
ಬಳಿಕ ಮಾತನಾಡಿದ ದ್ವಾರಕೀಶ್ ಪುತ್ರ ಯೋಗೀಶ್, ನಾವು ಹಣ ಕೊಡುವುದಿಲ್ಲವೆಂದು ಹೇಳಿಲ್ಲ. ಕಾನೂನಿದೆ ಅದರ ಮೂಲಕ ಹೋಗಲಿ. ಏಕಾಏಕಿ ಗಲಾಟೆ ಮಾಡುವುದು ಸರಿಯಲ್ಲ. ಇಡೀ ಜೀವನವನ್ನ ಸಿನಿಮಾಗಾಗಿಯೇ ಕಳೆದಿದ್ದೇನೆ. ನನ್ನ ಮನೆ ಮುಂದೆ ಬಂದು ಈ ರೀತಿ ಗಲಾಟೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.