ಕಲೆ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ, ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ ಎಂದು ಸಾರಸ್ವತ ಲೋಕದ ಅ.ನ.ಕೃ ಹೇಳಿದ್ದರು. ಅವರು ಹೇಳಿದಂತೆ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಸತತ ಪರಿಶ್ರಮ ಪಡುವವರಿಗೆ ಮಾತ್ರ ಕಲಾ ಸರಸ್ವತಿ ಒಲಿಯುತ್ತಾಳೆ ಎಂಬ ಮಾತು ನೂರರಷ್ಟು ನಿಜ.
ಮಂಡ್ಯ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲಾ ಕಲಾ ಶಿಕ್ಷಕ ನರಸಿಂಹಾಚಾರ್ ಅವರಿಗೆ ಕೂಡಾ ಈ ಮಾತು ಅನ್ವಯ ಆಗಲಿದೆ. ಮೇರು ನಟ ಡಾ. ರಾಜಕುಮಾರ್ ನಟಿಸಿರುವ 206 ಕನ್ನಡ ಸಿನಿಮಾಗಳ ತಲಾ ಒಂದೊಂದು ಚಿತ್ರವನ್ನು ನರಸಿಂಹಾಚಾರ್ ಬಿಡಿಸಿದ್ದಾರೆ. ಚಿತ್ರ ಬರೆದೂ ಬರೆದೂ ತಮ್ಮ ಕೈ ಬೆರಳುಗಳು ಗಾಯವಾದರೂ ಚಿತ್ರ ಬರೆಯುವುದನ್ನು ಮಾತ್ರ ನಿಲ್ಲಿಸಿಲ್ಲ. ಪ್ರತಿ ಪೆನ್ಸಿಲ್ ಸ್ಕೆಚ್ ನರಸಿಂಹಾಚಾರ್ ಅವರ ಕಲೆಯನ್ನು ಬಿಂಬಿಸುತ್ತಿದೆ.
ಡಾ. ರಾಜಕುಮಾರ್ ಎಂದರೆ ನರಸಿಂಹಾಚಾರ್ ಅವರಿಗೆ ಬಹಳ ಗೌರವ. ಹೊಸ ನಟರು ಅಣ್ಣಾವ್ರ ಸಿನಿಮಾಗಳ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ನರಸಿಂಹಾಚಾರ್ ಈ ಚಿತ್ರಗಳನ್ನು ಬರೆದಿದ್ದಾರಂತೆ. ಇವರ ಈ ಪ್ರಯತ್ನ ಆರಂಭವಾಗಿದ್ದು 1986 ರಲ್ಲಿ. ಆರಂಭದಲ್ಲಿ ಸ್ವಲ್ಪ ಕಷ್ಟ ಎನಿಸಿದರೂ ನಂತರ ಅಭ್ಯಾಸವಾಯಿತು. 25 ಏಪ್ರಿಲ್ 2019 ರಿಂದ ಆರಂಭಿಸಿ 20 ಸೆಪ್ಟೆಂಬರ್ 2020 ವರೆಗೂ ಒಂದೊಂದೇ ಚಿತ್ರ ಬಿಡಿಸಲು ಆರಂಭಿಸಿದರು. ಒಂದು ಚಿತ್ರ ಬರೆಯಲು 5-6 ಗಂಟೆ ಸಮಯ ಬೇಕಾಗುತ್ತಿತ್ತಂತೆ.
'ಬೇಡರ ಕಣ್ಣಪ್ಪ' ಚಿತ್ರದಿಂದ 'ಶಬ್ಧವೇದಿ' ಸಿನಿಮಾದ ಒಂದೊಂದು ಫೋಟೋಗಳನ್ನು ಬಿಡಿಸಿದ್ದಾರೆ. ಅದರಲ್ಲಿ ಕೆಲವೊಂದು ಕಪ್ಪು-ಬಿಳುಪು, ಕೆಲವೊಂದು ಕಲರ್ ಸ್ಕೆಚ್ ಮಾಡಿದ್ದಾರೆ ನರಸಿಂಹಾಚಾರ್. ಕೆಲವು ಚಿತ್ರಗಳಲ್ಲಿ ಅಣ್ಣಾವ್ರ ಜೊತೆ ನಾಯಕಿಯರಿದ್ದರೆ, ಮತ್ತೆ ಕೆಲವು ಚಿತ್ರಗಳಲ್ಲಿ ಪೋಷಕ ನಟರು ಇದ್ದಾರೆ.
ಈ ಕೆಲಸ ಸಂಪೂರ್ಣ ಆಗಲು ನನಗೆ ಹೆಚ್ಚು ಹಣ ಖರ್ಚಾಗಿಲ್ಲ. ಹೆಚ್ಚೆಂದರೆ 10 ಸಾವಿರ ರೂಪಾಯಿ ಸಾಮಗ್ರಿಗಳು ಮಾತ್ರ ಬೇಕಾಯಿತು ಅದರೊಂದಿಗೆ ಸಮಯ ಮತ್ತು ತಾಳ್ಮೆ ಕೂಡಾ ಬೇಕಾಯಿತು. ಒಂದು ಹಂತದಲ್ಲಿ ನರಸಿಂಹಾಚಾರ್ ಕೈ ಬೆರಳುಗಳು ಗಾಯ ಆದಾಗ ಅವರ ಪತ್ನಿ ಸಾಕು ಮಾಡಿ ಎಂದು ಹೇಳಿದರೂ ನರಸಿಂಹಾಚಾರ್ ಅವರ ಹಠ, ಡಾ. ರಾಜ್ಕುಮಾರ್ ಮೇಲಿದ್ದ ಗೌರವ ಆ ಚಿತ್ರಗಳನ್ನು ಪೂರ್ಣಗೊಳಿಸಲು ಕಾರಣವಾಯ್ತು.
ಈ ಚಿತ್ರಗಳನ್ನು ಪೂರ್ಣಗೊಳಿಸಿರುವುದಕ್ಕೆ ನರಸಿಂಹಾಚಾರ್ ಅವರಿಗೆ ಬಹಳ ಸಂತೋಷ ಇದೆ. 24 ಏಪ್ರಿಲ್ 2021 ರಂದು ಡಾ. ರಾಜ್ಕುಮಾರ್ ಹುಟ್ಟುಹಬ್ಬದಂದು ಮಂಡ್ಯ ಜಿಲ್ಲೆಯಲ್ಲಿ ಒಂದು ಕಾರ್ಯಕ್ರಮ ಏರ್ಪಡಿಸಿ, ಅದರಲ್ಲಿ ಈ ಚಿತ್ರಗಳ ಪ್ರದರ್ಶನ ಮಾಡಲಿದ್ದಾರೆ ಎನ್ನಲಾಗಿದೆ.
ನರಸಿಂಹಾಚಾರ್ ಮಂಡ್ಯದ ಸಂತೆ ಕೆಲಸಗೆರೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರು. ಚಿಕ್ಕಂದಿನಿಂದಲೇ ಅವರು ಅಣ್ಣಾವ್ರ ಅಭಿಮಾನಿ. ಬಹುಶ: ಇದುವರೆಗೂ ಈ ರೀತಿಯ ಚಿತ್ರ ಲೇಖನ ಎಲ್ಲೂ ತಯಾರಾಗಿಲ್ಲ ಎಂದರೂ ತಪ್ಪಿಲ್ಲ. ನರಸಿಂಹಾಚಾರ್ ಅವರ ಈ ಕಾರ್ಯಕ್ಕೆ ಅಣ್ಣಾವ್ರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.