ಟೊರೊಂಟೊ( ಕೆನಡಾ): ಯಾವುದಾದರೂ ಸೋಂಕು ತಗುಲಿದಾಗ ಜ್ವರ ಬಾರದಂತೆ ತಕ್ಷಣ ಔಷಧ ತೆಗೆದುಕೊಳ್ಳುವ ಬದಲು ಸಣ್ಣದಾದ ಜ್ವರ ಬಂದು ಹೋಗಲು ಬಿಡುವುದು ಉತ್ತಮ ಎಂದು ಹೊಸ ಸಂಶೋಧನೆಯಲ್ಲಿ ತಿಳಿದು ಬಂದಿದೆ. ಆಲ್ಬರ್ಟಾ ವಿಶ್ವವಿದ್ಯಾನಿಲಯದ ಸಂಶೋಧಕರು, ಈ ಬಗ್ಗೆ ಮೀನುಗಳ ಮೇಲೆ ಸಂಶೋಧನೆ ನಡೆಸಿದ್ದು, ಮಧ್ಯಮ ಪ್ರಮಾಣದ ಜ್ವರವು ಅವುಗಳ ದೇಹದಿಂದ ಸೋಂಕನ್ನು ತ್ವರಿತವಾಗಿ ಶಮನಮಾಡಲು ಸಹಾಯ ಮಾಡಿರುವುದನ್ನು, ಉರಿಯೂತ ನಿಯಂತ್ರಿಸಿರುವುದನ್ನು ಮತ್ತು ಹಾನಿಗೊಳಗಾದ ಅಂಗಾಂಶವನ್ನು ಸರಿಪಡಿಸಿರುವುದನ್ನು ಕಂಡು ಹಿಡಿದಿದ್ದಾರೆ.
ನೈಸರ್ಗಿಕವಾಗಿ ಬರುವ ಜ್ವರವು ಸೋಂಕಿನ ವಿರುದ್ಧ ರಕ್ಷಣೆಯನ್ನು ಸಕ್ರಿಯಗೊಳಿಸುವುದಲ್ಲದೇ, ಅದನ್ನು ನಿಯಂತ್ರಿಸಲು ಸಹಾಯ ಮಾಡುವ ಸಮಗ್ರ ಪ್ರತಿಕ್ರಿಯೆಯನ್ನು ದೇಹದಲ್ಲಿ ಚಾಲನೆಗೊಳಿಸುತ್ತದೆ ಎಂದು ಸಂಶೋಧನೆಯು ತೋರಿಸಿದೆ ಎಂದು ವಿಶ್ವವಿದ್ಯಾಲಯದ ಪ್ರಮುಖ ಲೇಖಕ ಇಮ್ಯುನೊಲೊಜಿಸ್ಟ್ ಡೇನಿಯಲ್ ಬ್ಯಾರೆಡಾ ಹೇಳಿದರು. ಈ ಸಂಶೋಧನಾ ವರದಿಯು eLife ಹೆಸರಿನ ಜರ್ನಲ್ನಲ್ಲಿ ಪ್ರಕಟವಾಗಿದೆ. ಇದರ ಪ್ರಕಾರ ಜ್ವರವು ಸುಮಾರು ಏಳು ದಿನಗಳಲ್ಲಿ ಮೀನಿನ ಸೋಂಕನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ ಎಂದು ತಿಳಿಯಲಾಗಿದೆ. ಜ್ವರ ಬಾರದಂತೆ ಮಾಡಿದ ಮೀನಿಗೆ ಹೋಲಿಸಿದರೆ ಸೋಂಕು ಕಡಿಮೆಯಾಗುವ ಅವಧಿ ಸುಮಾರು ಅರ್ಧದಷ್ಟಿದೆ.
ಜ್ವರವು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಗಾಯಗೊಂಡ ಅಂಗಾಂಶಗಳನ್ನು ಸರಿಪಡಿಸಲು ಕೂಡ ಸಹಾಯ ಮಾಡಿದೆ. ಪ್ರಕೃತಿ ಮಾಡುವುದನ್ನು ನಾವು ಪ್ರಕೃತಿಗೆ ಬಿಡುತ್ತೇವೆ ಮತ್ತು ಈ ಸಂದರ್ಭದಲ್ಲಿ ಇದು ತುಂಬಾ ಸಕಾರಾತ್ಮಕ ವಿಷಯವಾಗಿದೆ ಎಂದು ಬ್ಯಾರೆಡಾ ಹೇಳಿದರು. ಮಧ್ಯಮ ಪ್ರಮಾಣದ ಜ್ವರವು ತಾನಾಗಿಯೇ ಸೋಂಕು ಗುಣಪಡಿಸುತ್ತದೆ. ಅಂದರೆ ದೇಹವು ಜ್ವರ ಬರುವಂತೆ ಮಾಡುತ್ತದೆ ಮತ್ತು ತಾನಾಗಿಯೇ ಅದನ್ನು ವಾಸಿ ಮಾಡುತ್ತದೆ ಎಂದು ಅವರು ವಿವರಿಸಿದರು.
ತಕ್ಷಣ ಜ್ವರ ನಿವಾರಕ ಔಷಧ ತೆಗೆದುಕೊಳ್ಳುವುದು ಎಷ್ಟು ಸೂಕ್ತ?: ಆದಾಗ್ಯೂ ಮಾನವರ ಮೇಲೆ ನೈಸರ್ಗಿಕ ಜ್ವರದ ಆರೋಗ್ಯ ಪ್ರಯೋಜನಗಳನ್ನು ಇನ್ನೂ ಸಂಶೋಧನೆಯ ಮೂಲಕ ದೃಢೀಕರಿಸಬೇಕಾಗಿದೆ. ಆದರೆ, ಜ್ವರ ಬರುವ ಮತ್ತು ಜ್ವರ ಕಡಿಮೆಯಾಗುವ ಕಾರ್ಯವಿಧಾನಗಳು ಪ್ರಾಣಿಗಳಲ್ಲಿ ಬಹುತೇಕ ಒಂದೇ ರೀತಿ ಆಗಿರುವುದರಿಂದ ಮಾನವರಲ್ಲಿಯೂ ಇದೇ ರೀತಿಯ ಪರಿಣಾಮಗಳು ಉಂಟಾಗುತ್ತವೆ ಎಂದು ನಿರೀಕ್ಷಿಸುವುದು ಸಮಂಜಸವಾಗಿದೆ ಎನ್ನುತ್ತಾರೆ ಬ್ಯಾರೆಡಾ. ಹೀಗಾಗಿ ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡಾಗ ತಕ್ಷಣವೇ ಅಂಗಡಿಯಲ್ಲಿ ಸಿಗುವ ಜ್ವರ ನಿವಾರಕ ಔಷಧ ತೆಗೆದುಕೊಳ್ಳದೇ ಜ್ವರ ಬಂದು ತಾನಾಗಿಯೇ ಹೋಗಲು ಬಿಡುವುದು ಒಳ್ಳೆಯದು ಎಂಬುದು ಅವರ ಅಭಿಪ್ರಾಯವಾಗಿದೆ.
ಜ್ವರದ ನೈಸರ್ಗಿಕ ಪ್ರಯೋಜನಗಳು : ಜ್ವರ ಬಂದ ತಕ್ಷಣ ಸ್ಟಿರಾಯ್ಡ್ ಅಲ್ಲದ ಔಷಧಗಳನ್ನು ತೆಗೆದುಕೊಳ್ಳುವುದರ ಮೂಲಕ ನೀವು ತಕ್ಷಣಕ್ಕೆ ಜ್ವರವನ್ನು ವಾಸಿ ಮಾಡಿಕೊಳ್ಳಬಹುದು. ಆದರೆ ಆ ನೈಸರ್ಗಿಕ ಜ್ವರದಿಂದ ನಿಮಗೆ ಸಿಗಬಹುದಾದ ಕೆಲ ಉತ್ತಮ ಪ್ರಯೋಜನಗಳನ್ನು ಸಹ ನೀವು ಕಳೆದುಕೊಳ್ಳಬಹುದು ಎನ್ನುತ್ತಾರೆ ಬ್ಯಾರೆಡಾ. ಮಧ್ಯಮ ಜ್ವರದ ಪ್ರಯೋಜನಗಳ ಬಗ್ಗೆ ಕಾರಣವಾಗುವ ಕಾರ್ಯವಿಧಾನಗಳ ಮೇಲೆ ಬೆಳಕು ಚೆಲ್ಲಲು ಈ ಅಧ್ಯಯನವು ಸಹಾಯ ಮಾಡಲಿದೆ ಎಂದು ಅವರು ತಿಳಿಸಿದರು. ಸಂಶೋಧನೆಗೆ ಒಳಪಡಿಸಲಾದ ಪ್ರತಿಯೊಂದು ಪ್ರಾಣಿಯು ಸೋಂಕಿನ ವಿಚಾರದಲ್ಲಿ ಇದೇ ಜೈವಿಕ ಪ್ರತಿಕ್ರಿಯೆಯನ್ನು ಹೊಂದಿದೆ.
ಇದನ್ನೂ ಓದಿ : ಕೊಡಗಿನಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ; ಮುನ್ನೆಚ್ಚರಿಕೆ ವಹಿಸಿದ ಜಿಲ್ಲಾಡಳಿತ