ಇಸ್ಲಾಮಾಬಾದ್ (ಪಾಕಿಸ್ತಾನ) : ಕೆನಡಾ ಪ್ರಜೆ ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿದ ಬೆನ್ನಲ್ಲೇ, ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಈ ವಿಷಯದಲ್ಲಿ ಕೆನಡಾ ಪರ ನಿಲುವು ತಳೆದಿದ್ದು, ಇಸ್ಲಾಮಾಬಾದ್ ಕೇಂದ್ರವಾಗಿಟ್ಟುಕೊಂಡು ಕೆನಡಾ ಪರವಾದ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಲಾಹೋರ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥ ಬಿಲಾವಲ್, "ಭಾರತವು ತನ್ನ ರಾಜಕೀಯ ನೀತಿ ಮತ್ತು ಬೆಂಬಲದ ಭಾಗವಾಗಿ ಪಾಕಿಸ್ತಾನ ಮತ್ತು ಈಗ ಕೆನಡಾದಂಥ ಇತರ ದೇಶಗಳಲ್ಲಿ ಅಶಾಂತಿಯನ್ನು ಹರಡುತ್ತಿದೆ ಎಂಬುದನ್ನು ಇಸ್ಲಾಮಾಬಾದ್ ವರ್ಷಗಳಿಂದ ಪ್ರತಿಪಾದಿಸುತ್ತಿದೆ" ಎಂದು ಹೇಳಿದರು.
"ಭಾರತವು ಹಿಂದುತ್ವ ಭಯೋತ್ಪಾದಕ ರಾಷ್ಟ್ರವಾಗಿ ಮಾರ್ಪಟ್ಟಿದೆ ಎಂದು ಅಂತರರಾಷ್ಟ್ರೀಯ ಸಮುದಾಯವು ಒಪ್ಪಿಕೊಳ್ಳುವ ಸಮಯ ಇದು. ಕೆನಡಾದ ಪ್ರಧಾನಿಯ ಆರೋಪಗಳು ಗಂಭೀರವಾಗಿವೆ ಮತ್ತು ಪಾಕಿಸ್ತಾನ ವಿದೇಶಾಂಗ ಕಚೇರಿ ಈ ಘಟನೆಯನ್ನು ಗಮನಿಸಬೇಕು ಮತ್ತು ಸ್ಪಷ್ಟ ಹೇಳಿಕೆಯನ್ನು ನೀಡಬೇಕು." ಎಂದು ಅವರು ಹೇಳಿದರು.
"ಭಾರತವು ಈಗ ವಿಶ್ವದ ಮುಂದೆ ಬೆತ್ತಲಾಗಿದೆ. ಈ ಹಿಂದೆ, ಪಾಕಿಸ್ತಾನವು ಭಾರತದಿಂದ ಇಂಥ ಬೆದರಿಕೆಗಳನ್ನು ಎದುರಿಸಿದೆ ಮತ್ತು ಭಾರತದ ರಾಜತಾಂತ್ರಿಕರು ಮತ್ತು ಗೂಢಚಾರರನ್ನು ಸೆರೆ ಹಿಡಿದಿದೆ. ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿ ಭಾರತ ಸರ್ಕಾರಿ ಭಯೋತ್ಪಾದನೆ ನಡೆಸುತ್ತಿದೆ. ಈಗ ಅದನ್ನೇ ಕೆನಡಾ ಬಹಿರಂಗಪಡಿಸಿದೆ' ಎಂದು ಬಿಲಾವಲ್ ತಿಳಿಸಿದ್ದಾರೆ.