ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನ ನಡುವಿನ ಕಾಶ್ಮೀರ ಸಮಸ್ಯೆ ಶಾಂತಿಯುತವಾಗಿ ಬಗೆಹರಿಯಬಹುದು ಎಂದು ನಾನು ಭಾವಿಸುತ್ತೇನೆ. ವಿಶ್ವಸಂಸ್ಥೆಯ ನಿಲುವು ಹಾಗೂ ತೆಗೆದುಕೊಂಡ ನಿರ್ಣಯಗಳು ಇದೇ ಆಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.
ನ್ಯೂಯಾರ್ಕ್ನಲ್ಲಿ ನಡೆದ ಮಾಧ್ಯಮಗೋಷ್ಠಿ ವೇಳೆ ಪಾಕ್ ಮೂಲದ ಪತ್ರಕರ್ತರೊಬ್ಬರು ಕಾಶ್ಮೀರ ಸಮಸ್ಯೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರಿಗೂ ತಿಳಿದಿರುವಂತೆ ನಾವು ಅಲ್ಲಿ ಶಾಂತಿಪಾಲನಾ ಕಾರ್ಯಾಚರಣೆಯನ್ನು ಹೊಂದಿದ್ದೇವೆ. ಖಂಡಿತವಾಗಿಯೂ ಅದಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಕಾಶ್ಮೀರ ಸಮಸ್ಯೆ ಶಾಂತಿಯುತವಾಗಿ ಪರಿಹರಿಸಬಹುದಾದ ವಿಷಯವಾಗಿದೆ. ಇದರಿಂದ ಕಾಶ್ಮೀರದಲ್ಲಿನ ಜನರು ಶಾಂತಿ ಹಾಗೂ ಭದ್ರತೆಯಿಂದ ಬದುಕಬಹುದು ಎಂದು ನಾವು ಭಾವಿಸುತ್ತೇವೆ. ಈ ವಿಷಯದಲ್ಲಿ ಭಾರತ-ಪಾಕಿಸ್ತಾನದ ನಡುವೆ 3ನೇ ವ್ಯಕ್ತಿಯ ಮಧ್ಯಸ್ಥಿಕೆಗೆ ಯಾವುದೇ ಅವಕಾಶವನ್ನು ಭಾರತ ಸ್ಪಷ್ಟವಾಗಿ ನಿರಾಕರಿಸುತ್ತಿದೆ. ದಶಕಗಳಿಂದ ಭಾರತದ ನಿಲುವು ಸ್ಪಷ್ಟವಾಗಿದ್ದು, ಉಭಯ ದೇಶಗಳು ಈ ವಿಷಯವನ್ನು ದ್ವಿಪಕ್ಷೀಯವಾಗಿ ಚರ್ಚಿಸಬಹುದು ಎಂದು ಸಲಹೆ ನೀಡಿದ್ದಾರೆ.
ಶಿಮ್ಲಾ ಒಪ್ಪಂದಕ್ಕೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪಾಕ್ ಅಧ್ಯಕ್ಷ ಜುಲ್ಫಿಕರ್ ಅಲಿ ಭುಟ್ಟೊ ಅವರು 1972 ರಲ್ಲಿ ಸಹಿ ಹಾಕಿದ್ದಾರೆ. ಇದು ದೇಶಗಳ ನಡುವಿನ ದ್ವಿಪಕ್ಷೀಯ ಒಪ್ಪಂದವಾಗಿದ್ದು, ಕಾಶ್ಮೀರ ಸಮಸ್ಯೆಯ ಕುರಿತು ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಇದು ತಿರಸ್ಕರಿಸುತ್ತದೆ ಎಂಬುದನ್ನು ಗುಟೆರಸ್ ನೆನಪಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ