ಕನ್ನಡ ಚಿತ್ರರಂಗ ಮಾತ್ರವಲ್ಲ, ಇಡೀ ಭಾರತೀಯ ಸಿನಿಮಾ ರಂಗದಲ್ಲೇ ವಿಶೇಷ ಛಾಪು ಮೂಡಿಸಿರುವವರು ನಟ ಕಿಚ್ಚ ಸುದೀಪ್. ಇಂದು ಅವರಿಗೆ 49ನೇ ಹುಟ್ಟುಹಬ್ಬದ ಸಂಭ್ರಮ. ಅಡುಗೆ, ಸಿನಿಮಾ, ಡೈರೆಕ್ಷನ್, ಆ್ಯಕ್ಟಿಂಗ್, ಸ್ಪೋರ್ಟ್ಸ್, ಸಮಾಜಸೇವೆ.. ಹೀಗೆ ಹಲವು ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಸುದೀಪ್.
![Sandalwood actor Sudeep](https://etvbharatimages.akamaized.net/etvbharat/prod-images/16261185_xdfygdrh.jpg)
ಮರಳುಶಿಲ್ಪದ ಮೂಲಕ ಶುಭಾಶಯ: ಕೋವಿಡ್ ಹಿನ್ನೆಲೆಯಲ್ಲಿ ಸೆಲೆಬ್ರಿಟಿಗಳು ಅಭಿಮಾನಿಗಳ ಜೊತೆ ಸುದೀಪ್ ಕಳೆದ ಎರಡು ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಈ ವರ್ಷ ಕೊರೊನಾ ತಗ್ಗಿದೆ. ಅಭಿಮಾನಿಗಳ ಜೊತೆ ತಮ್ಮ ಹುಟ್ಟುಹಬ್ಬ ಆಚರಿಸುವ ಉತ್ಸಾಹ ತೋರಿದ್ದಾರೆ. ಹುಟ್ಟುಹಬ್ಬದ ಸಂಭ್ರಮವನ್ನು ದುಪ್ಪಟ್ಟುಗೊಳಿಸಲು ಹೆಸರಾಂತ ಮರಳು ಶಿಲ್ಪಿ ಮಾನಸ್ ಕುಮಾರ್ ಅವರು ಒಡಿಶಾದ ಸಮುದ್ರ ತೀರದಲ್ಲಿ ಸುದೀಪ್ ಅವರಿಗೆ ಮರಳು ಶಿಲ್ಪ ನಿರ್ಮಿಸುವ ಮೂಲಕ ಶುಭ ಕೋರಿದ್ದಾರೆ.
![Sudeep Sand Sculpture](https://etvbharatimages.akamaized.net/etvbharat/prod-images/16261185_thumbn.jpg)
ಈ ಶಿಲ್ಪ 20 ಅಡಿ ಅಗಲ, 7 ಅಡಿ ಎತ್ತರವಿದೆ. ಸುಮಾರು 20 ಟನ್ ಮರಳು ಬಳಸಲಾಗಿದೆ. ಸುದೀಪ್ ಆಪ್ತರಾದ ವೀರಕಪುತ್ರ ಶ್ರೀನಿವಾಸ ಎಂಬುವರರು ಯಾವ ಫೋಟೋ ಬಳಸಬೇಕು ಮತ್ತು ಕನ್ನಡ ಬರವಣಿಗೆ ಹೇಗಿರಬೇಕು ಎಂಬ ಬಗ್ಗೆ ಅಗತ್ಯ ಮಾಹಿತಿಯನ್ನು ಇವರಿಗೆ ಒದಗಿಸಿದ್ದಾರೆ.
ಈ ಮೂಲಕ ದಕ್ಷಿಣ ಭಾರತದಲ್ಲಿ ಮರಳು ಶಿಲ್ಪ ಗೌರವಕ್ಕೆ ಪಾತ್ರವಾಗುತ್ತಿರುವ 2ನೇ ಕಲಾವಿದರಾಗಿ ಹೊರಹೊಮ್ಮಿದ ಕೀರ್ತಿ ಸುದೀಪ್ ಅವರದ್ದು. ಈ ಹಿಂದೆ 2020ರಲ್ಲಿ ಡಾ.ವಿಷ್ಣುವರ್ಧನ್ ಅವರ 70ನೇ ಜನ್ಮದಿನ ಪ್ರಯುಕ್ತ ಮರಳು ಶಿಲ್ಪದ ಗೌರವ ನೀಡಲಾಗಿತ್ತು. ಅದು ಬಿಟ್ಟರೆ ಈವರೆಗೆ ಯಾವುದೇ ದಕ್ಷಿಣ ಭಾರತದ ನಟರಿಗೆ ಈ ಗೌರವ ಸಿಕ್ಕಿಲ್ಲ.
![Sandalwood actor Sudeep](https://etvbharatimages.akamaized.net/etvbharat/prod-images/16261185_dfgdrth.jpg)
ನಟ ಸುದೀಪ್ ಬದುಕಿನ ಪರಿಚಯ: 1973ರಲ್ಲಿ ಸೆಪ್ಟೆಂಬರ್ 2ರಂದು ಶಿವಮೊಗ್ಗದಲ್ಲಿ ಸಂಜೀವ್ ಮಂಜಪ್ಪ ಹಾಗೂ ಸರೋಜ ದಂಪತಿಯ ಪುತ್ರನಾಗಿ ಸುದೀಪ್ ಜನಿಸಿದರು. ಕನ್ನಡ, ಹಿಂದಿ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ಏಳು-ಬೀಳುಗಳನ್ನೂ ಕಂಡು ಸಾಧನೆಯ ಶಿಖರವನ್ನೇರಿದ್ದಾರೆ.
ಸಿನಿಮಾ ರಂಗ ಪ್ರವೇಶ: ಸುದೀಪ್ ಮೊದಲು ಬಣ್ಣ ಹಚ್ಚಿದ್ದು ಬ್ರಹ್ಮ ಚಿತ್ರಕ್ಕಾದರೂ ಈ ಸಿನಿಮಾ ಪೂರ್ತಿಯಾಗಿರಲಿಲ್ಲ. ನಂತರ 1997ರಲ್ಲಿ ತಾಯವ್ವ, ಪ್ರತ್ಯರ್ಥ ಸಿನಿಮಾ ಮಾಡಿದ್ದೂ ಯಶಸ್ವಿಯಾಗಲಿಲ್ಲ. ಆ ಸಮಯದಲ್ಲಿ ಅವರಿಗೆ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಸ್ಪರ್ಶ ಸ್ವಲ್ಪಮಟ್ಟಿಗೆ ಹೆಸರು ನೀಡುತ್ತದೆ.